
ಗಂಗೂಲಿ ಬ್ಯಾಟಿಂಗ್ ಅಬ್ಬರ
2003ರ ವಿಶ್ವಕಪ್ ಬಳಿಕ ತಂಡದಿಂದ ಹೊರಗಿಟ್ಟು, ನಾಯಕತ್ವದಿಂದ ಕೆಳಗಿಸಲಾಗಿದ್ದರೂ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮತ್ತೆ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದ ಎಡಗೈ ಬ್ಯಾಟ್ಸ್ಮನ್-ಬಂಗಾಳ ಹುಲಿ ಗಂಗೂಲಿ, ಬ್ಯಾಟಿಂಗ್ ಅಬ್ಬರ ನಡೆಸಿದ್ದರು. ಹೆಚ್ಚಿನ ರನ್ ಗಳಿಸಲಾರಂಭಿಸಿದ್ದರು.

ದಾದಾ, ದ್ರಾವಿಡ್ಗೆ ಕೊಕ್
ಉತ್ತಮ ಪ್ರದರ್ಶನ ನೀಡಿಯೂ 2007-08ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸೌರವ್ ಗಂಗೂಲಿ ಮತ್ತು ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು. ಆಗ ಎಂಎಸ್ ಧೋನಿ ತಂಡದ ನಾಯಕರಾಗಿದ್ದರು. ಅದಾಗಿ ಒಂದು ವರ್ಷ ಕಳೆಯುತ್ತಲೇ ಗಂಗೂಲಿ ನಿವೃತ್ತಿ ಘೋಷಿಸಿದ್ದರು.

ವೇದಿಕೆಯನ್ನೇ ಕಿತ್ತುಕೊಳ್ಳಲಾಯಿತು
ಬೆಂಗಾಲ್ ಡೈಲಿಯೊಂದರ ಜೊತೆ ಮಾತನಾಡಿದ ಗಂಗೂಲಿ, 'ಇದೊಂಥರಾ ನಂಬಲಾಗದ್ದು. ಆ ಕ್ಯಾಲೆಂಡರ್ ವರ್ಷದಲ್ಲಿ ನಾನು ಅತ್ಯಧಿಕ ರನ್ ಗಳಿಸಿದ್ದರೂ 2007ರಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು. ನೀವೆಷ್ಟೇ ಪ್ರತಿಭಾವಂತಾಗಿದ್ದರೂ ನಿಮ್ಮಿಂದ ವೇದಿಕೆಯನ್ನೇ ಕಿತ್ತುಕೊಂಡರೆ ನಿಮ್ಮ ಪ್ರತಿಭೆಯನ್ನು ನೀವು ಹೇಗೆ ಸಾಬೀತುಪಡಿಸುತ್ತೀರಿ? ಇದು ಬೇರ್ಯಾರಿಗೂ ಅಲ್ಲ, ನನಗೇ ಆಗಿತ್ತು,' ಎಂದಿದ್ದಾರೆ.

ಖಂಡಿತಾ ಹೆಚ್ಚು ರನ್ ಗಳಿಸುತ್ತಿದ್ದೆ
'ಆವತ್ತು ನನಗೆ ಏಕದಿನದಲ್ಲಿ ಇನ್ನೆರಡು ಸರಣಿಗಳಲ್ಲಿ ಆಡಲು ಅವಕಾಶ ನೀಡಿದ್ದರೆ ನಾನು ಇನ್ನೂ ಹೆಚ್ಚಿಗೆ ರನ್ ಗಳಿಸುತ್ತಿದ್ದೆ. ನಾನೊಂದು ವೇಳೆ ನಾಗ್ಪುರದಲ್ಲಿ (ನವೆಂಬರ್ 2008ರಲ್ಲಿ) ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸದಿದ್ದರೆ ಮುಂದಿನ ಎರಡು ಟೆಸ್ಟ್ ಸರಣಿಗಳಲ್ಲೂ ಹೆಚ್ಚಿನ ರನ್ ಗಳಿಸುತ್ತಿದ್ದೆ,' ಎಂದು 48ರ ಹರೆಯದ ಗಂಗೂಲಿ ಹೇಳಿಕೊಂಡಿದ್ದಾರೆ.


Click it and Unblock the Notifications
