ಏಷ್ಯಾಕಪ್ ಟೂರ್ನಿ ಕೊನೆಯ ಘಟ್ಟವನ್ನು ತಲುಪಿದ್ದು ಕೇವಲ ಒಂದು ಪಂದ್ಯ ಮಾತ್ರವೇ ಬಾಕಿಯಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಪ್ರಮುಖ ಆಲ್ರೌಂಡರ್ ಫೈನಲ್ ಪಂದ್ಯಕ್ಕೂ ಮುನ್ನ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ವಾಶಿಂಗ್ಟನ್ ಸುಂದರ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಗೆಲುವಿನ ಸನಿಹಕ್ಕೆ ಪಂದ್ಯವನ್ನು ಕೊಂಡೊಯ್ದಿದ್ದ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ಫೈನಲ್ ಪಂದ್ಯದಲ್ಲಿ ಆಡುವ ಸಾಧ್ಯತೆ ಬಹುತೇಕ ಇಲ್ಲ ಎನ್ನಲಾಗಿದೆ. ಅದೇ ಕಾರಣದಿಂದಾಗಿ ಟೀಮ್ ಇಂಡಿಯಾ ಫೈನಲ್ ಪಂದ್ಯಕ್ಕೂ ಮುನ್ನ ವಾಶಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

ಬಾಂಗ್ಲಾದೇಶ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಅಕ್ಷರ್ ಪಟೇಲ್ ಮಹತ್ವದ ಪಾತ್ರವಹಿಸಿದ್ದರು. ಪ್ರಮುಖ ಆಟಗಾರರು ವಿಕೆಟ್ ಕಳೆದುಕೊಂಡಿದ್ದರೂ ಅಕ್ಷರ್ ದೊಟ್ಟ ಹೋರಾಟವನ್ನು ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಅಕ್ಷರ್ ತೊಡೆನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದ್ದರು. ಇದೀಗ ಅವರಿಗೆ ವಿಶ್ರಾಂತಿಯ ಅಗತ್ಯವಿರುವ ಕಾರಣದಿಂದಾಗಿ ಫೈನಲ್ ಪಂದ್ಯದಿಂದ ಹೊರಗಿಡುವ ಸಾಧ್ಯತೆಯಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳನ್ನು ಎದುರಿಸಿದ್ದ ಅಕ್ಷರ್ ಪಟೇಲ್ 42 ರನ್ಗಳನ್ನು ಬಾರಿಸಿದ್ದರು. ಕೊನೆಯ ಹಂತದಲ್ಲಿ ಭಾರತಕ್ಕೆ ನಿರೀಕ್ಷೆ ಮೂಡಿಸಿದ್ದರಾದರೂ ಮುಸ್ತಫಿಜುರ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ವಿಕೆಟ್ ಕಳೆದುಕೊಂಡಿದ್ದರು. ಈ ಮೂಲಕ ಭಾರತದ ಗೆಲುವಿನ ಕನಸು ಭಗ್ನಗೊಂಡಿತು.
ಇನ್ನು ಅಕ್ಷರ್ ಪಟೇಲ್ ಬದಲಿಗೆ ವಾಶಿಂಗ್ಟನ್ ಸುಂದರ್ಗೆ ತಂಡದಲ್ಲಿ ಅವಕಾಶ ದೊರೆಯಲಿದೆ. ಆದರೆ ಆಡುವ ಬಳಗದಲ್ಲಿ ಅವರು ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಬಹುತೇಕ ಇಲ್ಲ. ಇನ್ನು ಸುಂದರ್ ಟೀಮ್ ಇಂಡಿಯಾದಲ್ಲಿ ಸಿಕ್ಕ ಅವಕಾಶದಲ್ಲಿ ಅದ್ಭುತವಾದ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಆದರೆ ಗಾಯದ ಸಮಸ್ಯೆಗಳು ಯುವ ಆಟಗಾರನಿಗೆ ಸಾಕಷ್ಟು ಕಾಡಿದ್ದು ತಂಡದಲ್ಲಿ ಸ್ಥಿರವಾದ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗದಂತಾಗಿದೆ. ಹಾಗಿದ್ದರೂ ಏಷ್ಯಾಕಪ್ನಂತಾ ಟೂರ್ನಿಯಲ್ಲಿ ತಂಡಕ್ಕೆ ಕರೆಬಂದಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದುದರಲ್ಲಿ ಅನಿಮಾನವಿಲ್ಲ.