ಆಗಸ್ಟ್ 12 ಸೋಮವಾರ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿ ತಿಂಗಳು ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಆಟಗಾರರಾಗಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಕಳೆದು ತಿಂಗಳು ಕೂಡ ಭಾರತದ ಪುರುಷರ ಮತ್ತು ಮಹಿಳಾ ವಿಭಾಗಗಳಲ್ಲಿ ಮೂವರು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಗೊಂಡಿದ್ದರು.
ಇದೀಗ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯಿಂದ ಭಾರತದ ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ವಂಚಿತರಾಗಿದ್ದಾರೆ. ಐಸಿಸಿ ಸುಂದರ್ ಅವರನ್ನು 2024ರ ಜುಲೈ ತಿಂಗಳಿನ ಪುರುಷರ ಆಟಗಾರ ಪ್ರಶಸ್ತಿಗೆ ಶಾರ್ಟ್ಲಿಸ್ಟ್ ಮಾಡಿತ್ತು. ಆದರೆ ಈ ಪ್ರಶಸ್ತಿಯನ್ನು ಸುಂದರ್ ಪಡೆಯಲು ಸಾಧ್ಯವಾಗಲಿಲ್ಲ.

ಸುಂದರ್ ಬದಲಾಗಿ ಇಂಗ್ಲೆಂಡ್ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಐಸಿಸಿ ಪುರುಷರ ತಿಂಗಳ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಬಲಗೈ ವೇಗದ ಬೌಲರ್ ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದಾಖಲೆಯ 12 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ತಂಡದ ದಿಗ್ಗಜ ಬೌಲರ್ ಜೇಮ್ಸ್ ಆಂಡರ್ಸನ್ ಅವರು ವೃತ್ತಿಜೀವನದ ಕೊನೆಯ ಪಂದ್ಯ ಇದಾಗಿತ್ತು.
ಹಲವು ದಿನಗಳ ವರೆಗೆ ಗಾಯಗಳ ವಿರುದ್ಧ ಹೋರಾಡಿದ ಸುಂದರ್ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಯುವ ಭಾರತ ತಂಡದ ಭಾಗವಾಗಿದ್ದ ಸುಂದರ್ ಆಲ್ ರೌಂಡ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ಅವರು 5 ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿದರು.
ಹೀಗಾಗಿ ಸರಣಿ ಶ್ರೇಷ್ಠ ಆಟಗಾರನ ಪ್ರಶಸ್ತಿಯನ್ನು ಸುಂದರ್ ಪಡೆದಿದ್ದರು. ಇದಾದ ಬಳಿಕ ಶ್ರೀಲಂಕಾ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆದಿದ್ದರು. ಆದರೆ ಅವರು ಸೂಪರ್ ಓವರ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ತಂದು ಕೊಡುವಲ್ಲಿ ಯಶಸ್ಸು ಕಂಡಿದ್ದರು. ಜೊಗೆಗೆ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಶ್ರೀಲಂಕಾ ವಿರುದ್ದ ಕಡಿಮೆ ಸ್ಕೋರಿಂಗ್ ಟಿ20 ಪಂದ್ಯದಲ್ಲಿ ಸುಂದರ್ 18 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಪರಿಣಾಮ ಭಾರತ ತಂಡವು 137/8 ಗೌರವಾನ್ವಿತ ಸ್ಕೋರ್ ಗಳಿಸಲು ನೆರವಾಗಿತ್ತು. ಕೊನೆಯ ಓವರ್ನಲ್ಲಿ ಶ್ರೀಲಂಕಾಕ್ಕೆ 23 ರನ್ ಅಗತ್ಯವಿತ್ತು. ಆದರೆ ಸುಂದರ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು.
ಹೀಗಾಗಿ ಸೂಪರ್ ಓವರ್ಗೆ ಪಂದ್ಯವಾದ ಹೋದ ಕಾರಣ ಸೂರ್ಯಕುಮಾರ್ ಯಾದವ್ ಅವರು ಸುಂದರ್ ಮೇಲೆ ನಂಬಿಕೆ ಇಟ್ಟು ಬೌಲಿಂಗ್ ನೀಡಿದ್ದರು. ನಾಯಕನ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಸುಂದರ್ ಪಾಸ್ ಆಗಿದ್ದರು. ಸೂಪರ್ ಓವರ್ನಲ್ಲಿ ಎರಡು ವಿಕೆಟ್ ಪಡೆದು ಕೇವಲ ಎರಡು ರನ್ ನೀಡಿದರು. ಈ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗೆದ್ದು ಭಾರತ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.
ಮಹಿಳೆಯರ ವಿಭಾಗದಲ್ಲಿ ಶ್ರೀಲಂಕಾದ ಚಾಮರಿ ಅಟಪಟ್ಟು ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಲಂಕಾ ತಂಡವನ್ನು ಮೊದಲ ಬಾರಿಗೆ ಮಹಿಳಾ ಟಿ20 ಏಷ್ಯಾಕಪ್ ಪ್ರಶಸ್ತಿಗೆ ಮುನ್ನಡೆಸಿ ಚಾಂಪಿಯನ್ ಮಾಡಿದ್ದರು. ಶ್ರೀಲಂಕಾ ತಂಡ ಏಳು ಬಾರಿ ವಿಜೇತ ಭಾರತವನ್ನು ಸೋಲಿಸುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿತ್ತು.
ಅಟಪಟ್ಟು ಏಪ್ಯಾಕಪ್ ಟೂರ್ನಿಯಲ್ಲಿ 101.33 ಸರಾಸರಿಯಲ್ಲಿ 304 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕವೂ ಸೇರಿತ್ತು. ಅವರು ತಮ್ಮ ಮೂರನೇ ಮಹಿಳಾ ಆಟಗಾರ್ತಿ ತಿಂಗಳ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಪ್ರಶಸ್ತಿ ರೇಸ್ನಲ್ಲಿದ ಭಾರತದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಅವರನ್ನು ಅಟಪಟ್ಟು ಹಿಂದಿಕ್ಕಿದ್ದಾರೆ.