ಮಾವಿ ಅಥವಾ ಅಕ್ಷರ್ ಬಗ್ಗೆ ಜಾಫರ್ ಉಲ್ಲೇಖ
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ದೀಪಕ್ ಹೂಡಾ ಬದಲಿಗೆ ಚೊಚ್ಚಲ ಪಂದ್ಯದಲ್ಲಿಯೇ ಬೌಲಿಂಗ್ನಲ್ಲಿ ಮಿಂಚಿದ ಶಿವಮ್ ಮಾವಿ ಅಥವಾ ಆಲ್ರೌಡರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಬಹುದಾಗಿತ್ತು ಎಂದಿದ್ದಾರೆ ವಾಸಿಂ ಜಾಫರ್. ಶಿವಂ ಮಾವಿ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆದು ಸ್ಮರಣೀಯ ಆರಂಭ ಪಡೆದುಕೊಂಡಿದ್ದಾರೆ. ಈ ಪ್ರದರ್ಶನ ಭಾರತ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು. ಅಕ್ಷರ್ ಪಟೇಲ್ 20 ಎಸೆತಗಳಲ್ಲಿ 31 ರನ್ಗಳಿಸಿದ್ದು ಮುರಿಯದ 6ನೇ ವಿಕೆಟ್ಗೆ 68 ರನ್ಗಳ ಕೊಡುಗೆ ನೀಡಿದರು.
ಜಾಫರ್ ಹೇಳಿದ್ದಿಷ್ಟು
"ನಾನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಶಿವಂ ಮಾವಿಗೆ ಅಥವಾ ಅಕ್ಷರ್ ಪಟೇಲ್ಗೆ ನೀಡುತ್ತಿದ್ದೆ. ಅಕ್ಷರ್ ತಮ್ಮ ಜವಾಬ್ಧಾರಿಯನ್ನು ಅದ್ಭುತವಾಗಿ ನಿಭಾಯಿಸಿದರು. ಅಂತಿಮ ಓವರ್ನ್ಲಲಿ ಬೌಲಿಂಗ್ ನಡೆಸಿದ ರೀತಿ ಹಾಗೂ ಬ್ಯಾಟಿಂಗ್ನಲ್ಲಿ ನೀಡಿದ ಪ್ರದರ್ಶನ ವಿಶೇಷವಾಗಿತ್ತು. ಅಕ್ಷರ್ ಹಾಗೂ ಹೂಡಾ ಅವರ ಬ್ಯಾಟಿಂಗ್ನ ಕಾರಣದಿಂದಾಗಿಯೇ ಟೀಮ್ ಇಂಡಿಯಾ 160 ರನ್ಗಳ ಗಡಿ ದಾಟಿತು. ಬಳಿಕ ನಿರ್ಣಾಯಕ ಸಂದರ್ಭದಲ್ಲಿ ಅಕ್ಷರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಅಂಥಾ ಅದ್ಭುತ ಓವರ್ ಬಾರದಿದ್ದರೆ ಭಾರತ ಸೋಲು ಅನುಭವಿಸುತ್ತಿತ್ತು. ಹಾಗಾಗಿ ಮಾವಿ ಹೊರತುಪಡಿಸಿದರೆ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ನನ್ನ ಆಯ್ಕೆಯಾಗಿರುತ್ತಿದ್ದರು"ಎಂದಿದ್ದಾರೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್.
ಕನಸು ನನಸಾಯಿತು ಎಂದ ಮಾವಿ
ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಶಿವಂ ಮಾವಿ ಟೀಮ್ ಇಂಡಿಯಾದಲ್ಲಿ ಆಡುವ ಕನಸು ಇಂದು ನನಸಾಯಿತು ಎಂದಿದ್ದಾರೆ. ಅಂಡರ್ 19 ವಿಶ್ವಕಪ್ನಲ್ಲಿ ಆಡಿದ 6 ವರ್ಷಗಳ ಬಳಿಕ ಈ ಅವಕಾಶ ದೊರೆತಿದೆ ಎಂದು ತಮ್ಮ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. "ಅಂಡರ್ 19 ವಿಶ್ವಕಪ್ನಲ್ಲಿ ಆಡಿದ ಬಳಿಕ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಕಳೆದ 6 ವರ್ಷಗಳಿಂದ ಕಾಯುತ್ತಿದ್ದೆ. ಈ ಅವಧಿಯಲ್ಲಿ ಕೆಲ ಗಾಯಕ್ಕೂ ತುತ್ತಾಗಿದ್ದೆ. ಹೀಗಾಗಿ ಕೆಲ ಸಂದರ್ಭಗಳಲ್ಲಿ ನನ್ನ ಕನಸು ಕನಸಾಗಿಯೇ ಉಳಿದುಕೊಳ್ಳುವ ಆತಂಕವೂ ಎದುರಾಗಿತ್ತು. ಆದರೆ ನನ್ನ ಪ್ರಯತ್ನವನ್ನು ಮುಂದುವರಿಸಿದ್ದೆ" ಎಂದು ಶಿವಂ ಮಾವಿ ಪ್ರತಿಕ್ರಿಯಿಸಿದರು.
2ನೇ ಪಂದ್ಯದತ್ತ ಚಿತ್ತ
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮುಕ್ತಾಯದ ಬಳಿಕ ಇದೀಗ ಎರಡನೇ ಪಂದ್ಯದತ್ತ ಚಿತ್ತ ನೆಟ್ಟಿದೆ. ಎರಡನೇ ಪಂದ್ಯ ಕೂಡ ಮಹಾರಾಷ್ಟ್ರದಲ್ಲಿಯೇ ನಡೆಯಲಿದ್ದು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ಈ ಪಂದ್ಯ ಆಯೋಜನೆಯಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ವಶಕ್ಕೆ ಪಡೆಯುವ ಉತ್ಸಾಹದಲ್ಲಿ ಟೀಮ್ ಇಂಡಿಯಾ ಇದ್ದರೆ ಶ್ರೀಲಂಕಾ ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.