"ನಾವೇನು ಯಂತ್ರಗಳಲ್ಲ ನಮಗೆ ವಿಶ್ರಾಂತಿ ಬೇಕು"
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಪೈಕಿಯ ಮೊದಲನೇ ಟಿ ಟ್ವೆಂಟಿ ಪಂದ್ಯ ನವೆಂಬರ್ 17ರಂದು ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಗೂ ಈ ಪಂದ್ಯಕ್ಕೂ ಮುನ್ನಾ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕ ರೋಹಿತ್ ಶರ್ಮಾ ತಂಡದ ಆಟಗಾರರಿಗೆ ಆಗಾಗ ವಿಶ್ರಾಂತಿಯ ಅಗತ್ಯವಿದೆ ಎಂಬುದರ ಕುರಿತು ಮಾತನಾಡಿದ್ದು, ಆಟಗಾರರು ಯಂತ್ರಗಳಲ್ಲ ನಮಗೂ ಅಗತ್ಯವಾದ ವಿಶ್ರಾಂತಿ ಬೇಕಾಗಿದೆ ಎಂದಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ಅನೇಕ ದಿನಗಳಿಂದ ಸತತವಾಗಿ ಕ್ರಿಕೆಟ್ ಆಡುತ್ತಿರುವ ತಂಡದ ಹಲವರಿಗೆ ವಿಶ್ರಾಂತಿಯ ಅಗತ್ಯವಿದೆ, ಹೀಗೆ ವಿಶ್ರಾಂತಿ ಪಡೆದರೆ ಮಾತ್ರ ಮುಂಬರುವ ಸವಾಲುಗಳನ್ನು ದಿಟ್ಟವಾಗಿ ಆಟಗಾರರು ಎದುರಿಸಬಲ್ಲರು ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ.
ಫುಟ್ಬಾಲ್ ಮಾದರಿಯಲ್ಲಿ ಕ್ರಿಕೆಟ್ ಆಟಗಾರರಿಗೂ ವಿಶ್ರಾಂತಿ ಬೇಕು ಎಂದ ರಾಹುಲ್ ದ್ರಾವಿಡ್
ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಕೆಲಸ ಆರಂಭಿಸಲಿರುವ ರಾಹುಲ್ ದ್ರಾವಿಡ್ ಕೂಡ ಈ ಕುರಿತಾಗಿ ಮಾತನಾಡಿದ್ದು ಫುಟ್ಬಾಲ್ ಮಾದರಿಯಲ್ಲಿಯೇ ಕ್ರಿಕೆಟ್ ಆಟಗಾರರಿಗೂ ವಿಶ್ರಾಂತಿಯ ಅವಶ್ಯಕತೆ ಇದೆ ಎಂದಿದ್ದಾರೆ. ಫುಟ್ ಬಾಲ್ ಕ್ರೀಡೆಯಲ್ಲಿ ಆಟಗಾರರು ಎಲ್ಲಾ ಪಂದ್ಯಗಳಲ್ಲಿಯೂ ಭಾಗವಹಿಸುವುದಿಲ್ಲ, ಅವರು ವರ್ಷವಿಡೀ ಕಣಕ್ಕಿಳಿಯದೇ ಕೆಲ ಪಂದ್ಯಗಳಿಂದ ಹೊರಗುಳಿದು ವಿಶ್ರಾಂತಿ ಪಡೆಯುತ್ತಾರೆ. ಅದೇ ರೀತಿ ಕ್ರಿಕೆಟ್ ಆಟಗಾರರಿಗೂ ಕೆಲ ಪಂದ್ಯಗಳಿಂದ ಹೊರಗುಳಿದು ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶವನ್ನು ನೀಡಬೇಕು ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಹೀಗಿದ್ದಾಗ ಮಾತ್ರ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ದೃಢವಾಗಿರುತ್ತಾರೆ ಎಂದು ರಾಹುಲ್ ದ್ರಾವಿಡ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಹೆಚ್ಚಾಯಿತು ಒತ್ತಡ, ಸರಣಿಯಿಂದ ದೂರ ಸರಿದ ಪ್ರಮುಖ ಕ್ರಿಕೆಟಿಗರು
ಇನ್ನು ಸತತವಾಗಿ ಕ್ರಿಕೆಟ್ ಆಡುತ್ತಿರುವುದರಿಂದ ಆಟಗಾರರು ಮಾನಸಿಕ ಒತ್ತಡಕ್ಕೆ ಒಳಗಾಗಿರುವಂತೆ ಕಾಣುತ್ತಿದೆ. ಹೀಗಾಗಿಯೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಿಂದ ಇತ್ತಂಡಗಳ ಪ್ರಮುಖ ಆಟಗಾರರೇ ಹೊರಗುಳಿದಿದ್ದಾರೆ. ಭಾರತ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಮತ್ತು ಜಸ್ ಪ್ರೀತ್ ಬೂಮ್ರಾ ಈ ಸರಣಿಯಿಂದ ಹೊರಗುಳಿದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರಾದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಪ್ರಮುಖ ಬೌಲರ್ ಕೈಲ್ ಜೆಮಿಸನ್ ಕೂಡ ಈ ಸರಣಿಯಿಂದ ವಿಶ್ರಾಂತಿಗಾಗಿ ಹೊರಗುಳಿಯಲಿದ್ದಾರೆ.