
ಚೆನ್ನೈ: ಕೃಷಿ ಕಾಯಿದೆಗಳ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆ ವಿಚಾರವಾಗಿ ನಾವು ತಂಡದ ಸಭೆಯ ವೇಳೆ ಸಣ್ಣದಾಗಿ ಚರ್ಚಿಸಿದ್ದೆವು ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಫೆಬ್ರವರಿ 5ರಂದು ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಕೊಹ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ರೈತರ ಪ್ರತಿಭಟನೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ, 'ಈ ವಿಚಾರವನ್ನು ನಾವು ತಂಡದ ಸಭೆಯಲ್ಲಿ ಸಣ್ಣದಾಗಿ ಚರ್ಚಿಸಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ಹೇಳಿಕೊಂಡಿದ್ದಾರೆ,' ಎಂದಿದ್ದಾರೆ. ಈ ಬಗ್ಗೆ ಕೊಹ್ಲಿ ಹೆಚ್ಚಿನ ಮಾಹಿತಿ ನೀಡಿಲ್ಲ.
ಅಮೆರಿಕನ್ ಪಾಪ್ ಗಾಯಕಿ, ನಟಿ ರಿಹಾನ ಅವರು ಭಾರತದಲ್ಲಿನ ರೈತರ ಪ್ರತಿಭಟನೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್, ಕನ್ನಡಿಗ ಅನಿಲ್ ಕುಂಬ್ಳೆ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೈನಾ ನೆಹ್ವಾಲ್ ಸೇರಿ ಅನೇಕರು ಕೇಂದ್ರ ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆಗಳೂ ನಡೆದಿದ್ದವು.
ರಿಹಾನ್ನಾಗೆ ತಿರುಗೇಟು ನೀಡಿ ಟ್ವೀಟ್ ಮಾಡಿದ್ದವರಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟ್ವೀಟ್ ಸಂಪೂರ್ಣವಾಗಿ ರೈತ ಪರ ಅಥವಾ ವಿರೋಧ ಅನ್ನಿಸುವ ಬದಲು ಕೊಂಚ ತಟಸ್ಥ ರೀತಿಯಲ್ಲಿದ್ದಂತಿತ್ತು. ಉಳಿದಂತೆ ಸಚಿನ್, ಕುಂಬ್ಳೆ, ರೈನಾ ಮೊದಲಾದವರು ರೈತ ಪರ ವಾದಿಗಳ ಕೋಪಕ್ಕೆ ಗುರಿಯಾಗಿದ್ದರು.