
ದುಬೈ, ಸೆಪ್ಟೆಂಬರ್ 27: ಭಾರತದೆದುರಿನ ಏಷ್ಯಾ ಕಪ್ 2018ರ ಫೈನಲ್ ಪಂದ್ಯದಲ್ಲಿ ನಾವು ಬ್ಯಾಟಿಂಗ್, ಬೌಲಿಂಗ್ ಬಿಗಿ ಗೊಳಿಸುವ ಅಗತ್ಯವಿದೆ ಎಂದು ಬಾಂಗ್ಲಾದೇಶದ ನಾಯಕ ಮಸ್ರಾಫೆ ಮೊರ್ತಾಜೋ ಹೇಳಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 28) ನಡೆಯಲಿರುವ ಏಷ್ಯಾ ಕಪ್ ಫೈನಲ್ ಪಂದ್ಯದ ಬಗ್ಗೆ ಮಸ್ರಾಫೆ ಅಭಿಪ್ರಾಯ ಹಂಚಿಕೊಂಡರು.
ಬುಧವಾರ (ಸೆಪ್ಟೆಂಬರ್ 26) ನಡೆದಿದ್ದ ಏಷ್ಯಾ ಕಪ್ ಸೂಪರ್ ಫೋರ್ 6ನೇ (ಸೆಮಿಫೈನಲ್ ಗೆ ಸಮಾನಾದ) ಪಂದ್ಯದಲ್ಲಿ ಬಾಂಗ್ಲಾದೇಶ ಬಲಿಷ್ಠ ಪಾಕಿಸ್ತಾನವನ್ನು 37 ರನ್ ಗಳಿಂದ ದಂಗುಬಡಿಸಿತ್ತು. ಮಸ್ರಾಫೆ ಅದ್ಭುತವಾಗಿ ಹಿಡಿದಿದ್ದ ಶೋಯೇಬ್ ಮಲ್ಲಿಕ್ ಅವರ ಕ್ಯಾಚ್ ಕೂಡ ಒಂದರ್ಧದಲ್ಲಿ ಪಾಕ್ ಸೋಲಿಗೆ ಕಾರಣವಾಗಿತ್ತು.
ಫೈನಲ್ ನಲ್ಲಿ ತನ್ನ ಮುಂದಿರುವ ಪ್ರತಿಸ್ಪರ್ಧಿ ಭಾರತವಾದ್ದರಿಂದ ಗೆಲುವು ಸುಲಭವಿಲ್ಲ ಎಂಬ ಅರಿವು ಬಾಂಗ್ಲಾಕ್ಕಿದೆ. ಆದರೆ ತಂಡದಲ್ಲಿ ಬೌಲಿಂಗ್, ಬ್ಯಾಟಿಂಗ್ ಎರಡನ್ನೂ ಬಿಗಿಗೊಳಿಸಿದರೆ ಹಾಲಿ ಚಾಂಪಿಯನ್ ಭಾರತವನ್ನು ಕಟ್ಟಿಹಾಕಲೂ ಸಾಧ್ಯವಿದೆ ಎಂದು ಅರಿತಿರುವ ಬಾಂಗ್ಲಾ ನಾಯಕ ಅದೇ ವಿಚಾರವನ್ನು ತನ್ನ ಮಾತುಗಳಲ್ಲಿ ಹೊರಹಾಕಿದರು.
'ವಿಶ್ವ ಮಟ್ಟದಲ್ಲಿ ಭಾರತ ಕ್ರಿಕೆಟ್ ತಂಡ ಬಲಿಷ್ಠವಾದದ್ದು ಎಂಬುದು ಗೊತ್ತಿದೆ. ಆದರೆ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಇನ್ನೂ ಕೊಂಚ ಸುಧಾರಿಸಿಕೊಂಡರೆ ಎದುರಾಳಿಯನ್ನು ಕಟ್ಟಿ ಹಾಕಲು ಅವಕಾಶವಿದೆ' ಎಂದು ಮೊರ್ತಾಜೋ ವಿವರಿಸಿದರು.
'ಫೈನಲ್ ಪಂದ್ಯದಲ್ಲಿ ನಾವು ಶಕೀಬ್ (ಅಲ್ ಹಸನ್) ಮತ್ತು ತಮೀಮ್ (ಇಕ್ಬಾಲ್) ಬೆಂಬಲವನ್ನು ಕಳೆದುಕೊಳ್ಳಲಿದ್ದೇವೆ. ಆದರೆ ನಮ್ಮ ತಂಡ ಈಗಲೂ ಅದ್ಭುತ ಆಟ ಪ್ರದರ್ಶಿಸಬಲ್ಲರು ಎಂಬ ವಿಶ್ವಾಸ ನನಗಿದೆ. ಗೆಲುವಿಗೆ ಇನ್ನೊಂದೇ ಪಂದ್ಯ ಬಾಕಿಯಿರೋದು. ನಮ್ಮ ಹುಡುಗರು ಗೆಲ್ಲುತ್ತಾರೆ ಎಂಬ ವಿಶ್ವಾದ ಜೊತೆಯಲ್ಲೇ ನಾವೆಲ್ಲರೂ ಶ್ರಮವಹಿಸಿ ಆಡಲಿದ್ದೇವೆ' ಮಸ್ರಾಫೆ ಹೊಳೆಯುವ ಕಣ್ಣುಗಳೊಂದಿಗೆ ವಿಶ್ವಾಸ ವ್ಯಕ್ತಪಡಿಸಿದರು.