
ವಿಶಾಖಪಟ್ನಂ, ಫೆಬ್ರವರಿ 23: ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ಆಡಬೇಕೋ ಬೇಡವೋ ಎಂಬ ವಿಚಾರವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರದಲ್ಲಿ ರಾಷ್ಟ್ರದ ಮತ್ತು ಬಿಸಿಸಿಐ ನಿರ್ಧಾರಕ್ಕೆ ನಾವು ಬದ್ಧ ಎಂದವರು ಹೇಳಿದ್ದಾರೆ.
ಭಾನುವಾರ (ಫೆಬ್ರವರಿ 24) ವಿಶಾಖಪಟ್ನಂನಲ್ಲಿ ನಡೆಯಲಿರುವ ಭಾರತ vs ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಪುಲ್ವಾಮಾ ದಾಳಿಯಲ್ಲಿ ಮಡಿದ ಸಿಆರ್ಪಿಎಫ್ ಯೋಧರ ಕುಟುಂಬಕ್ಕೆ ನಮ್ಮ ಸಂತಾಪ ತಿಳಿಸುತ್ತಿದ್ದೇವೆ ಎಂದರು.
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡದಿರುವ ಮೂಲಕ ಪುಲ್ವಾಮಾ ದಾಳಿಗೆ ವಿರೋಧ ವ್ಯಕ್ತಪಡಿಸಬೇಕು ಎಂಬ ಮಾತುಗಳು ಭಾರತದ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದವು. ಬಿಸಿಸಿಐ ಕೂಡ ಇದೇ ನೆಲೆಯಲ್ಲಿ ಯೋಚಿಸಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ.
ವಿಶ್ವಕಪ್ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವ ಕುರಿತು ನಿರ್ಧಾರವನ್ನು ಬಿಸಿಸಿಐಯು ಭಾರತ ಸರ್ಕಾರದ ಮೇಲೆ ಬಿಟ್ಟಿದೆ. ಸರ್ಕಾರ ತಾಳುವ ನಿರ್ಧಾರಕ್ಕೆ ಬೆಂಬಲಿಸುತ್ತೇವೆ ಎಂದು ಬಿಸಿಸಿಐ ತಿಳಿಸಿತ್ತು. ವಿರಾಟ್ ಕೊಹ್ಲಿ ಕೂಡ ಈ ವಿಚಾರವಾಗಿ ಸರ್ಕಾರ ಮತ್ತು ಬಿಸಿಸಿಐ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ.