ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಮುಗಿದಿದೆ. ಈ ಹರಾಜಿನಲ್ಲಿ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಈ ವೇಳೆ ಎಲ್ಲರ ಚಿತ್ತವನ್ನು ಸೆಳೆದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಲವು ಸ್ಟಾರ್ ಪ್ಲೇಯರ್ಗಳಿಗೆ ಮಣೆ ಹಾಕಿದೆ. ಅದರಲ್ಲಿ ಶ್ರೀಲಂಕಾದ ಮತೀಶ ಪತಿರಾಣ ಸಹ ಒಬ್ಬರು.
ಕೆಕೆಆರ್ ಈ ಬಾರಿ ಹರಾಜಿನಲ್ಲಿ ಭಾಗವಹಿಸಿದ ಶ್ರೀಮಂತ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿತ್ತು. ಅದರಂತೆ ಹರಾಜಿನಲ್ಲಿ ದುಬಾರಿ ಆಟಗಾರರನ್ನು ಕೆಕೆಆರ್ ಖರೀದಿಸಿದೆ. ಶ್ರೀಲಂಕಾದ ಮತೀಶ ಪತಿರಾಣ ಅವರಿಗೂ ಕೆಕೆಆರ್ 18 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಚೆನ್ನೈ ತಂಡ ಹರಾಜಿಗೆ ಬಿಟ್ಟ ಆಟಗಾರನಿಗೆ ಕೆಕೆಆರ್ ರೆಡ್ ಕಾರ್ಪೆಟ್ ಹಾಕಿ ಬರ ಮಾಡಿಕೊಂಡಿದೆ. 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಶ್ರೀಲಂಕಾ ವೇಗಿಯನ್ನು ಸೇರಿಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸಹ ಬಾಜಿ ಕಟ್ಟಿದ್ದವು. ಕೊನೆಗೆ ಕೆಕೆಆರ್ ಹರಾಜಿನಲ್ಲಿ ಭಾರೀ ಮೊತ್ತ ನೀಡಿ ಇವರನ್ನು ಕೊಂಡಿದೆ. ಈ ಮೂಲಕ ಮತೀಶ ಅವರು ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಸೇಲ್ ಆದ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು.

ಮೈಖೇಲ್ ಜೊತೆಗೆ ಶ್ರೀಲಂಕಾ ಪ್ಲೇಯರ್ ಮತೀಶ ಪತಿರಾಣ ಅವರನ್ನು ಕೊಳ್ಳಲು ಕಾರಣ ಏನು ಎಂಬುದನ್ನು ಕೆಕೆಆರ್ ತಂಡದ ಸಹ ಮಾಲೀಕೆ ಜಾನ್ವಿ ಮೆಹ್ತಾ ತಿಳಿಸಿದ್ದಾರೆ. ನಾವು ಕಳೆದ ವರ್ಷ ಡೆತ್ ಓವರ್ನಲ್ಲಿ ಕೊಂಚ ಸಮಸ್ಯೆಯನ್ನು ಎದುರಿಸಿದೆವು. ಈ ಸಮಸ್ಯೆ ಮ್ಯಾನೇಜ್ಮೆಂಟ್ ತಲೆಯಲ್ಲೂ ಇತ್ತು. ಈ ವೇಳೆ ನಾವು ಹರಾಜಿನಲ್ಲಿ ಮತೀಶ ಪತಿರಾಣ ಹಾಗೂ ಮುಷ್ತಫಿಜುರ್ ರಹಮಾನ್ ಅವರನ್ನು ಗುರಿಯಾಗಿಸಿ ಹಣ ಹೂಡಲು ನಿರ್ಧರಿಸಿದ್ದೇವು. ಶ್ರೀಲಂಕಾ ವೇಗಿಯ ಬೌಲಿಂಗ್ ಶೈಲಿ, ಯಾರ್ಕರ್ಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮಣೆ ಹಾಕಿದೆವು ಎಂದು ಅವರು ವಿವರಿಸಿದ್ದಾರೆ.
ಮತೀಶ ಪತಿರಾಣಾ ಅವರು ನಿಖರವಾಗಿ ಯಾರ್ಕರ್ ಎಸೆಯುವಲ್ಲಿ ನಿಸ್ಸೀಮರು. ಡೆತ್ ಓವರ್ಗಳಲ್ಲಿ ಮುಷ್ತಫಿಜುರ್ ಹಾಗೂ ಪತಿರಾಣ ಡೆತ್ ಓವರ್ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಬಲ್ಲರು ಎಂಬ ಲೆಕ್ಕಾಚಾರ ನಮ್ಮದಾಗಿತ್ತು. ಎಲ್ಲರೂ ಡೆತ್ ಓವರ್ಗೆ ಒತ್ತು ನೀಡಿದಂತೆ ನಾವು ಸಹ ನೀಡಿದ್ದೇವೆ. ನಾವು ಅಂದುಕೊಂಡಿದ್ದಕ್ಕಿಂತ ಕೊಂಚ ಹೆಚ್ಚು ಪತಿರಾಣಾ ಅವರಿಗೆ ಹಣ ಹೂಡಿದ್ದೇವೆ ಎಂದು ಸಹ ಮಾಲೀಕೆ ಜಾನ್ವಿ ಮೆಹ್ತಾ ಹೇಳಿದ್ದಾರೆ.
23 ವರ್ಷದ ಮತೀಶ ಪತಿರಾಣ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು 4 ಆವೃತ್ತಿಗಳಲ್ಲಿ ಆಡಿದ 32 ಪಂದ್ಯಗಳಲ್ಲಿ 21ರ ಸರಾಸರಿಯಲ್ಲಿ 47 ವಿಕೆಟ್ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಇವರು ಅಮೋಘ ಬೌಲಿಂಗ್ ನಡೆಸಿದ್ದಾರೆ. ಲಂಕಾ ಪರ ಆಡಿದ 21 ಟಿ20 ಪಂದ್ಯಗಳಲ್ಲಿ 31 ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.