

ಬ್ರಿಸ್ಬೇನ್, ನವೆಂಬರ್ 19: ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠ ತಂಡವಾಗಿ ಮೆರೆದಿದ್ದ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲುವ ಮೂಲಕ ನಮ್ಮ ಗುರುತೊಂದನ್ನು ಆಸ್ಟ್ರೇಲಿಯಾದಲ್ಲಿ ಬಿಟ್ಟು ಹೋಗಲು ನಾವು ಬಯಸಿದ್ದೇವೆ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಆಸೀಸ್ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿರುವುದರಿಂದ ಆಸ್ಟ್ರೇಲಿಯಾವೀಗ ದುರ್ಬಲ ತಂಡವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸೋದು ಕಷ್ಟವಿಲ್ಲ ಎಂಬ ಭರವಸೆಯನ್ನು ರೋಹಿತ್ ವ್ಯಕ್ತಪಡಿಸಿದ್ದಾರೆ.
'ಅಂತಾರಾಷ್ಟ್ರೀಯ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳಲು ನಾವು ತೆರಳುವಾಗ ಅಂಜಿಕೆ ರೀತಿಯ ಎಂಥದ್ದೋ ಒಂದು ಭಾವ ನಮ್ಮಲ್ಲಿ ಇರುತ್ತಿತ್ತು. ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ ಇಂಥದ್ದೇ ಭಾವನೆ ನಮ್ಮಲ್ಲಿ ಮೂಡುತ್ತಿತ್ತು. ಆದರೆ ಈ ಬಾರಿ ಮಾತ್ರ ನಾವು ಎಂದಿಗೂ ನೆನೆಪಿನಲ್ಲಿ ಉಳಿಯುವಂತ ನಮ್ಮ ಗುರುತೊಂದನ್ನು ಅಲ್ಲಿ ಬಿಟ್ಟು ಬರಲು ನಾವು ಬಯಸಿದ್ದೇವೆ' ಎಂದು ಗಬ್ಬಾದಲ್ಲಿ ಭಾರತದ ಅಭ್ಯಾಸದ ವೇಳೆ ಮಾತಿಗೆ ಸಿಕ್ಕ ಶರ್ಮಾ ಹೇಳಿದರು.
'ಹಿಂದಿನ ಸಾರಿ ಟೆಸ್ಟ್ ಸರಣಿಯಲ್ಲಿ ಆಡಿದ್ದಾಗ ಎರಡು ಪಂದ್ಯ ಸೋತು ಮತ್ತೊಂದನ್ನು ಡ್ರಾ ಮಾಡಿಕೊಂಡಿದ್ದೆವು. ಆದರೆ ಈ ಬಾರಿ ಎಲ್ಲಾ ಸಂದರ್ಭಗಳನ್ನು ಗೆಲ್ಲುವ ಸ್ಫೂರ್ತಿಯಲ್ಲಿ ಇಡೀ ತಂಡವಿದೆ' ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.