ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆಲ್ಲಲು ಭಾರತ ತಂಡ ಸಜ್ಜಾಗಿದೆ. ಈ ಸರಣಿಯಲ್ಲಿ ಭಾರತವನ್ನು ಸೂರ್ಯಕುಮಾರ ಯಾದವ್ ನಾಯಕನ್ನಾಗಿ ಮುನ್ನಡೆಸಿದರೆ, ಅಕ್ಸರ್ ಪಟೇಲ್ ಉಪನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಸರ್ ಪಟೇಲ್ ಉಪನಾಯಕನ್ನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ. ಈ ಸರಣಿಯಲ್ಲಿ ಅವರು ಮಿಂಚುವ ನಿರೀಕ್ಷೆಯಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಬುಧವಾರ ಸಂಜೆ 7:00 ಗಂಟೆಗೆ ನಡೆಯಲಿದೆ. ಇದಕ್ಕೂ ಮುನ್ನ ಅಕ್ಸರ್ ಪಟೇಲ್ ಅಭ್ಯಾಸದ ಎರಡನೇ ದಿನದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಅಕ್ಸರ್ ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ್ದಾರೆ. 'ಭಾರತ ತಂಡವು ಟಿ20 ಕ್ರಿಕೆಟ್ನಲ್ಲಿ ಭವಿಷ್ಯದ ಗುರಿಗಳನ್ನು ನಿಗದಿಪಡಿಸಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಅದಕ್ಕೂ ಮುನ್ನ ಉಳಿದಿರುವ ಕೆಲವೇ ಪಂದ್ಯಗಳಲ್ಲಿ ರಣತಂತ್ರ ರೂಪಿಸಬೇಕಿದೆ. ಪಂದ್ಯಗಳನ್ನು ಗೆಲ್ಲಲು ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಯೋಜಿಸುವುದು ಮುಖ್ಯ ಎಂದು ಅಕ್ಸರ್ ಪಟೇಲ್ ಹೇಳಿದ್ದಾರೆ.
ಅಕ್ಸರ್ ಪಟೇಲ್ ಅವರಿಗೆ ರಾಷ್ಟ್ರೀಯ ತಂಡದ ಉಪನಾಯಕ ಎಂದರೆ ಹೆಚ್ಚುವರಿ ಜವಾಬ್ದಾರಿಗಳೇ? ಎಂದು ಪ್ರಶ್ನೆ ಕೇಳಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಅವರು, 'ನಾನು ಒಂದು ದಿನದ ಹಿಂದೆ ಶಿಬಿರಕ್ಕೆ ಸೇರಿದ್ದೆ. ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ. ಜವಾಬ್ದಾರಿ ತುಂಬಾ ಹೆಚ್ಚಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ ಉಪನಾಯಕನಾಗಿ ನೀವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೂರ್ಯ ಮೇಲೆ ನನಗೆ ವಿಶ್ವಾಸ ಹೆಚ್ಚಿದೆ. ನಾವು ಒಬ್ಬರಿಗೊಬ್ಬರು ಡೆಡಿಕೇಟೆಡ್ ಆಗಿದ್ದೇವೆ. ಇದು ತಂಡಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ತಂಡದ ಕಾರ್ಯತಂತ್ರದ ಬಗ್ಗೆ ತಿಳಿಸಿದ್ದಾರೆ.
ಮೊಹಮ್ಮದ್ ಶಮಿ ಕಮ್ ಬ್ಯಾಕ್ ಮಾಡಿರುವ ಬಗ್ಗೆ ಮಾತನಾಡಿದ ಅಕ್ಸರ್, 'ಶಮಿ ಅವರ ಮರಳುವಿಕೆ ತಂಡಕ್ಕೆ ಪಾಸಿಟಿವ್ ಆಗಿದೆ. ಅವರು ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಆಡಿದ್ದರು. ಇದಾದ ನಂತರ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದರು. ಹೊಸ ಚೆಂಡಿನಲ್ಲಿ ಅಥವಾ ಡೆತ್ ಓವರ್ಗಳಲ್ಲಿ ಅವರು ಏನು ಮಾಡಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಹೊಸ ಚೆಂಡಿನಲ್ಲಿ ಅವರ ಪ್ರದರ್ಶನವು ಸ್ಪಿನ್ನರ್ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಹೊಗಳಿದ್ದಾರೆ.
ನನಗೆ ಅವಕಾಶ ಸಿಗುವುದರ ಬಗ್ಗೆ ಯೋಚಿಸುವುದಿಲ್ಲ. ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ಅವಕಾಶ ಸಿಕ್ಕಾಗ ನನ್ನ ಕೈಲಾದಷ್ಟು ಮಾಡುತ್ತೇನೆ. ನಾನು ತಂಡದಲ್ಲಿದ್ದರೆ ನಾನು ಹೇಗೆ ಕೊಡುಗೆ ನೀಡಬಹುದು? ಅದರ ಬಗ್ಗೆ ಯೋಚಿಸುತ್ತೇನೆ. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ತಂಡದಲ್ಲಿ ಇಲ್ಲದಿರುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ. ನಾಯಕ ಮತ್ತು ಬಿಸಿಸಿಐ ಆಯ್ಕೆದಾರರು ಏನು ಹೇಳಿದರೂ ಅದು ನಡೆಯುತ್ತದೆ. ವೈಯಕ್ತಿಕವಾಗಿ ಉತ್ತಮವಾಗುವುದು ನಮ್ಮ ಗುರಿಯಾಗಿದೆ ಎಂದು ಅಕ್ಸರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.