ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಸ್ಟಾರ್ ವಿಕೆಟ್ ಕೀಪರ್- ಬ್ಯಾಟರ್ ಸಂಜು ಸ್ಯಾಮ್ಸನ್ಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಫಾರ್ಮ್ನಲ್ಲಿದ್ದರೂ ಸಂಜು ಸ್ಯಾಮ್ಸನ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದಾರೆ. ನವೆಂಬರ್ 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಎರಡು ಶತಕಗಳನ್ನು ಗಳಿಸಿ ಮಿಂಚಿದ್ದರು. ಆದರೆ, ಸಂಜು ಸ್ಯಾಮ್ಸನ್ ಬದಲಿಗೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗೆ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ವಿಕೆಟ್ ಕೀಪರ್-ಬ್ಯಾಟರ್ಗಳಾಗಿ ಸ್ಥಾನ ಪಡೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗುಳಿಯಲು ಸಂಜು ಸ್ಯಾಮ್ಸನ್ ಮಾಡಿದ ಎಡವಟ್ಟು ಕಾರಣವಾಗಿದೆ ಎನ್ನಲಾಗುತ್ತಿದೆ. ಇದೇ ವೇಳೆ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಅಧ್ಯಕ್ಷ ಜಯೇಶ್ ಜಾರ್ಜ್ ಅವರು ಸಂಜು ಸ್ಯಾಮ್ಸನ್ ಅವರನ್ನು ಟೀಕಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಪರ ಆಡುವ ಬಗ್ಗೆ ಅಸೋಸಿಯೇಷನ್ಗೆ ಕೇವಲ ಒಂದು ಸಾಲಿನ ಸಂದೇಶವನ್ನು ಕಳುಹಿಸಿದ್ದಕ್ಕಾಗಿ ಸಂಜು ಸ್ಯಾಮ್ಸನ್ ವಿರುದ್ಧ ಜಯೇಶ್ ಜಾರ್ಜ್ ಕಿಡಿಕಾರಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ಹೊರಗುಳಿದ ಕಾರಣ ಸಂಜು ಸ್ಯಾಮ್ಸನ್ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಏಕೆ ಹೊರಗಿಡಲಾಗಿದೆ ಎಂದು ನನಗೆ ಖಚಿತವಿಲ್ಲ. ವಿಜಯ್ ಹಜಾರೆ ತಂಡಕ್ಕೆ ಸೇರ್ಪಡೆಯಾಗದಿರಲು ಕಾರಣ, 30 ಮಂದಿಯ ತರಬೇತಿ ಶಿಬಿರಕ್ಕೆ ಅವರು ಲಭ್ಯವಿಲ್ಲ ಎಂದು ಒಂದೇ ಸಾಲಿನ ಸಂದೇಶ ಕಳುಹಿಸಿದ್ದರು. ಅವರು ತಂಡವನ್ನು ಮುನ್ನಡೆಸುತ್ತಾರೆ ಎಂದು ನಾವೆಲ್ಲರೂ ಭಾವಿಸಿದ್ದೇವು. ಏಕೆಂದರೆ ಅವರು ನಮ್ಮ ವೈಟ್-ಬಾಲ್ ನಾಯಕರಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದರು ಎಂದು ಸಂಜು ಸ್ಯಾಮ್ಸನ್ ಅನುಪಸ್ಥಿತಿಯ ಬಗ್ಗೆ ಜಯೇಶ್ ಜಾರ್ಜ್ ಮಾತನಾಡಿದ್ದಾರೆ.
ಸಂಜು ಸ್ಯಾಮ್ಸನ್ ಅಥವಾ ಇತರ ಯಾವುದೇ ಆಟಗಾರನಾಗಿರಲಿ ಕೆಸಿಎ ಗೌರವಾನ್ವಿತ ನೀತಿಯನ್ನು ಹೊಂದಿದೆ. ಸಂಜು ಸ್ಯಾಮ್ಸನ್ ತಂಡಕ್ಕೆ ಬರಲು ಯಾವುದೇ ತರಬೇತಿ ಶಿಬಿರದ ಅಗತ್ಯವಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಕೇರಳ ತಂಡವು ಅವರು ಬಯಸಿದಾಗ ಮಾತ್ರ ಬಂದು ಪ್ರತಿನಿಧಿಸಬಹುದು? ಸ್ಯಾಮ್ಸನ್ ಭಾರತ ತಂಡವನ್ನು ಹೇಗೆ ತಲುಪಿದರು? ಇದು ಕೆಸಿಎಯಿಂದ ಮಾತ್ರ ಸಾಧ್ಯವಾಯಿತು. ಹಾಗೆಂದ ಮಾತ್ರಕ್ಕೆ ಕೇರಳ ತಂಡ ಸೇರಬಹುದು ಎಂದಲ್ಲ ಎಂದು ಸಂಜು ಸ್ಯಾಮ್ಸನ್ ಅವರನ್ನು ಜಯೇಶ್ ಜಾರ್ಜ್ ಟೀಕಿಸಿದ್ದಾರೆ.
ಫೆಬ್ರವರಿ 22 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಜು ಜೊತೆಗೆ ಧ್ರುವ್ ಜುರೆಲ್ ತಂಡದಲ್ಲಿರುವ ಮತ್ತೊಬ್ಬ ವಿಕೆಟ್ ಕೀಪರ್ ಆಗಿದ್ದಾರೆ. ಸರಣಿಯ ಮೊದಲ ಪಂದ್ಯ ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯಲಿದೆ. ಎರಡನೇ ಟಿ20 ಜನವರಿ 25 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮತ್ತು ಮೂರನೇ ಟಿ20 ಜನವರಿ 28 ರಂದು ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ಜನವರಿ 31 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಐದನೇ ಮತ್ತು ಅಂತಿಮ ಟಿ20 ಫೆಬ್ರವರಿ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.