ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫಿಟ್ನೆಸ್ ಮತ್ತು ಭಾರತ ತಂಡ ಸೇರುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಈಗ ಮತ್ತೊಮ್ಮೆ ತಾವು ಯಾವಾಗ ಟೀಮ್ ಇಂಡಿಯಾ ಸೇರಬಹುದು ಎಂಬುದನ್ನು ತಿಳಿಸಿದ್ದಾರೆ.
2023ರ ಏಕದಿನ ವಿಶ್ವಕಪ್ನಲ್ಲಿನ ಅಮೋಘ ಪ್ರದರ್ಶನಕ್ಕಾಗಿ ಮೊಹಮ್ಮದ್ ಶಮಿ ಅವರಿಗೆ ಶನಿವಾರ ಬಂಗಾಳದ ಕ್ರಿಕೆಟ್ ಸಂಸ್ಥೆಯು ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ತಯಾರಿ ನಡೆಸುತ್ತಿರುವ ಕುರಿತು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, "ಮುಂದಿನ ಋತುವಿನಲ್ಲಿ ನಾನು ಖಂಡಿತವಾಗಿಯೂ ರಣಜಿಯಲ್ಲಿ ಬಂಗಾಳ ಪರ ಎರಡರಿಂದ ಮೂರು ಪಂದ್ಯಗಳನ್ನು ಆಡುವ ಭರವಸೆಯಲ್ಲಿದ್ದೇನೆ. ಇದು ಅಂತರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಲು ಸಹಾಯ ಮಾಡುತ್ತದೆ. ಸದ್ಯ ನಾನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ತರಬೇತಿ ಪಡೆಯುತ್ತಿದ್ದೇನೆ. ನಾನು ಸಂಪೂರ್ಣವಾಗಿ ಫಿಟ್ ಆಗಿರುವುದರಿಂದ ಆಡಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
'ಇದು 22 ವರ್ಷಗಳ ಪ್ರಯಾಣವಾಗಿದ್ದು, ನನ್ನನ್ನು ಈ ಹಂತಕ್ಕೆ ಕೊಂಡೊಯ್ದಿದ್ದಕ್ಕಾಗಿ ಬಂಗಾಳಕ್ಕೆ ಹೃತ್ಪೂರ್ವಕವಾಗಿ ಕೃತಜ್ಞನಾಗಿದ್ದೇನೆ. ಬಂಗಾಳ ನನಗೆ ನೀಡಿದ ಪ್ರೀತಿ ಮತ್ತು ಬೆಂಬಲವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಹಿಳಾ ಕ್ರಿಕೆಟ್ ಕೂಡ ಪ್ರಗತಿಯಾಗಬೇಕೆಂದು ನಾನು ಬಯಸುತ್ತೇನೆ. ಜನರು ತಾರತಮ್ಯ ಮಾಡದಿದ್ದರೆ ಮತ್ತು ನಮ್ಮ ಕುಟುಂಬವೂ ಅವರನ್ನು ಬೆಂಬಲಿಸಿದರೆ, ನಾನು ತುಂಬಾ ಸಂತೋಷಪಡುತ್ತೇನೆ ಎಂದು ಶಮಿ ಹೇಳಿದ್ದಾರೆ.
ಮೊಹಮ್ಮದ್ ಶಮಿ ಉತ್ತರಪ್ರದೇಶದವರಾಗಿದ್ದರೂ, ಅಲ್ಲಿ ಹೆಚ್ಚಿನ ಅವಕಾಶ ಸಿಗದ ಕಾರಣ ಬಂಗಾಳ ಆಡುತ್ತಿದ್ದಾರೆ.
2011ರಲ್ಲಿ ಪಾದಾರ್ಪಣೆ ಮಾಡಿದ ನಂತರ ಅವರು ಬಂಗಾಳ ಪರ ತಲಾ 15 ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಂದ್ಯಗಳಲ್ಲಿ ಕಣಕ್ಕೀಳಿದಿದ್ದಾರೆ. 2013ರ ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ಪಡೆದರು.
ಈ ವರ್ಷದ ಕೊನೆಯಲ್ಲಿ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಗ್ಗೆಯೂ ಶಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವರ್ಷ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಲಿದೆ ಎಂದು ಅವರು ಭವಿಷ್ಯ ನುಡಿದ್ದಾರೆ.
ಈ ಸರಣಿಯನ್ನು ಗೆಲ್ಲಲು ಭಾರತ ಪ್ರಬಲ ಸ್ಪರ್ಧಿ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಲವು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಾವು ಯುವ ತಂಡದೊಂದಿಗೆ ಆಡಿದ್ದೇವೆ. ಆದರೂ ನಾವು ಅತ್ಯುತ್ತಮವೆಂದು ಸಾಬೀತುಪಡಿಸಿದ್ದೇವೆ. ನನ್ನ ಪ್ರಕಾರ ಮುಂದಿನ ಸರಣಿ ಕಠಿಣವಾಗಿದ್ದರೂ ಭಾರತ ಖಂಡಿತ ಗೆಲ್ಲಲಿದೆ ಎಂದಿದ್ದಾರೆ.