ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಟೀಮ್ ಇಂಡಿಯಾದಲ್ಲಿ ಅಸಮಾಧಾನದ ಹೊಗೆ ಹೆಚ್ಚುತ್ತಿದೆ. ಎಲ್ಲವನ್ನೂ ಸರಿ ಮಾಡುವ ಉದ್ದೇಶದಿಂದ ಬಿಸಿಸಿಐ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿಕೆ ಸದ್ದು ಮಾಡುತ್ತಿದೆ. ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರಿಗಾಗಿ ಇತರ ಆಟಗಾರರನ್ನು ನಿಂದಿಸುವ ಬಗ್ಗೆ ಅಶ್ವಿನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವರು ಮಾಜಿ ಚಾಂಪಿಯನ್ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅಶ್ವಿನ್, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜಗಳ ಅಪಾಯಕಾರಿಯಾಗುತ್ತಿದೆ. ನಾನು ಯಾವಾಗಲೂ ಹೇಳುತ್ತಿದ್ದೆ, ಕ್ರಿಕೆಟ್ ಅನ್ನು ಕ್ರಿಕೆಟ್ ಎಂದು ಚರ್ಚಿಸೋಣ ಮತ್ತು ಆಟಗಾರನ ಬ್ರ್ಯಾಂಡ್ ಮೌಲ್ಯವಾಗಿ ಅಲ್ಲ. ಒಬ್ಬ ಆಟಗಾರನನ್ನು ಹೆಚ್ಚು ಇಷ್ಟಪಡುವುದು ಎಂದರೆ ನೀವು ಇತರರನ್ನು ನಿಂದಿಸುತ್ತೀರಿ ಎಂದಲ್ಲ. ಇದೀಗ ಫ್ಯಾನ್ ವಾರ್ ಹೊಸ ಟ್ರೆಂಡ್ ಆಗಿದೆ ಎಂದು ಅಶ್ವಿನ್ ಬೇಸರ ಹೊರಹಾಕಿದ್ದಾರೆ.

ನಾನು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಇದರರ್ಥ ನಾನು ರಾಹುಲ್ ದ್ರಾವಿಡ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತೇನೆ ಎಂದಲ್ಲ. ನನಗೂ ರಾಹುಲ್ ದ್ರಾವಿಡ್ ಇಷ್ಟ, ಆದರೆ ನನಗೆ ಸಚಿನ್ ತುಂಬಾ ಇಷ್ಟ. ಅನಿಲ್ ಭಾಯ್ (ಅನಿಲ್ ಕುಂಬ್ಳೆ) ಮತ್ತು ಹರ್ಭಜನ್ ಸಿಂಗ್ ಅವರನ್ನು ನನ್ನ ಆರಾಧ್ಯ ಅಂದುಕೊಂಡಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಆರ್ ಅಶ್ವಿನ್ ನಿವೃತ್ತಿ ಘೋಷಿಸಿದ್ದರು. ಅಶ್ವಿನ್ ನಿವೃತ್ತಿಯ ಬಗ್ಗೆ ಸಾಕಷ್ಟು ವಿವಾದಗಳು ನಡೆದಿದ್ದವು. ಆದರೆ, ನಿವೃತ್ತಿ ನಿರ್ಧಾರ ನನ್ನದೇ ಎಂದು ಸ್ಪಿನ್ ಮಾಸ್ಟರ್ ಹೇಳಿದ್ದಾರೆ. ಆದರೆ ಅವರ ತಂದೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು.