ಐಪಿಎಲ್ 2025 ರ 8 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚೆಪಾಕ್ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಇಂದು ಅಂದರೆ ಶುಕ್ರವಾರ ನಡೆಯಲಿರುವ ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಐಪಿಎಲ್ 2025 ರಲ್ಲ ಉಭಯ ತಂಡಗಳು ಆಡಿರುವ ಮೊದಲ ಪಂದ್ಯಗಳನ್ನು ಗೆದ್ದಿವೆ. ಭಾರೀ ಕುತೂಹಲ ಮೂಡಿಸಿರುವ ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಮಿಂಚಲು ಸಜ್ಜಾಗಿದ್ದಾರೆ.
ಸಿಎಸ್ಕೆ ವಿರುದ್ಧದ ಪಂದ್ಯಕ್ಕಾಗಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ಇದಾದ ನಂತರ ಸಿಎಸ್ಕೆ ವಿರುದ್ಧ ಆರ್ಸಿಬಿ ಗೆಲುವು ಫಿಕ್ಸ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಕಳೆದ ಐಪಿಎಲ್ ಸೀಸನ್ ನಂತರ ನಿವೃತ್ತರಾದ ಮಾಜಿ ಆರ್ಸಿಬಿ ಆಟಗಾರ ಕಾರ್ತಿಕ್ ಈಗ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಈ ಮೂಲಕ ಆರ್ಸಿಬಿ ತಂಡವನ್ನು ಚಾಂಪಿಯನ್ ಮಾಡುವ ಹೊಣೆ ಹೊತ್ತಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಬಗ್ಗೆ ದಿನೇಶ್ ಕಾರ್ತಿಕ್ ಮಾತನಾಡಿರುವುದು ಆರ್ಸಿಬಿ ಅಭಿಮಾನಿಗಳಿಗೆ ಸಂತಸ ತರಿಸಿದೆ.
ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯದ ಮುನ್ನಾದಿನದಂದು ಮಾತನಾಡಿರುವ ದಿನೇಶ್ ಕಾರ್ತಿಕ್, "ಇಂದು ನಾನು ಮೈದಾನಕ್ಕೆ ಬಂದಾಗಲೂ ವಿರಾಟ್ ಕೊಹ್ಲಿ ಇನ್ನೊಂದು ಶಾಟ್ನಲ್ಲಿ ಕೆಲಸ ಮಾಡಲು ಬಯಸಿದ್ದರು. ಈ ಸಮಯದಲ್ಲಿ ಇನ್ನೊಂದು ಶಾಟ್ನಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಆಟದ ಬಗ್ಗೆ ಇನ್ನೂ ಎಷ್ಟು ಹಸಿವಿದೆ ಎಂದು ಹೇಳುತ್ತದೆ. ಅವರು ನಿರಂತರವಾಗಿ ತನ್ನನ್ನು ತಾನು ಸುಧಾರಿಸಿಕೊಳ್ಳಲು ಬದ್ಧರಾಗಿದ್ದಾರೆ. ಅದಕ್ಕಾಗಿಯೇ ಅವರು ವಿಶೇಷ ಆಟಗಾರ. ನಾನು ಈಗ ನೋಡುತ್ತಿರುವಂತೆ ಅವರು ಐಪಿಎಲ್ನಲ್ಲೂ ಹಿಂದಿನಂತೆಯೇ ಆತ್ಮವಿಶ್ವಾಸದಿಂದ ಮತ್ತು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ.
ಸ್ಪಿನ್ ವಿರುದ್ಧ ವಿರಾಟ್ ಕೊಹ್ಲಿ ಅವರ ಇತ್ತೀಚಿನ ಹೋರಾಟಗಳ ಕುರಿತು ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಕೊಹ್ಲಿ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮವಾಗಿ ರನ್ಗಳನ್ನು ಗಳಿಸಿದರು. ಅವರು ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ಸ್ಪಿನ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹಾಗಾಗಿ, ನಾನು ಅಂಕಿ-ಅಂಶಗಳಿಗೆ ಹೆಚ್ಚು ಆಳವಾಗಿ ಹೋಗಲು ಬಯಸುವುದಿಲ್ಲ. ಆದರೆ ನನಗೆ ನೆನಪಿರುವುದು ವಿಶ್ವಕಪ್ ಫೈನಲ್, ಅದರಲ್ಲಿ ಅವರು ಅಗತ್ಯವಿರುವ ಕಡೆ ರನ್ ಗಳಿಸಿದ್ದರು. ಇದಲ್ಲದೆ, ಅವರು ಚಾಂಪಿಯನ್ಸ್ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಟೀಮ್ ಇಂಡಿಯಾ ಪರ ಅವರು ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಸ್ಪಿನ್ ಬೌಲಿಂಗ್ಗೆ ಆಡದೆ ಇದು ಸಾಧ್ಯವಿಲ್ಲ. ಏಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ದುಬೈನಲ್ಲಿ ಸ್ಪಿನ್ನರ್ಗಳಿಗೆ ಎಷ್ಟು ಸಹಾಯ ಸಿಗುತ್ತದೆ. ಅದಕ್ಕಾಗಿಯೇ ಅವರು ಈಗ ಮೊದಲಿನಂತೆಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದೇನೆ ಎನ್ನುವ ಮೂಲಕ ಸಿಎಸ್ಕೆ ಸ್ಪಿನ್ ಜಾಲವನ್ನು ಭೇದಿಸಲು ಕೊಹ್ಲಿ ರೆಡಿ ಎಂದು ತಿಳಿಸಿದ್ದಾರೆ.
ಕಳೆದ 16 ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರಿನಲ್ಲಿ ಆರ್ಸಿಬಿ ಒಮ್ಮೆಯೂ ಸೋಲಿಸಿಲ್ಲ. ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ತಂಡ ಚೆಪಾಕ್ನಲ್ಲಿ ಸಿಎಸ್ಕೆ ಸೋಲಿಸುವುದು ಸುಲಭದ ಮಾತಲ್ಲ. ಸಿಎಸ್ಕೆ ಸೋಲಿಸಲು ಆರ್ಸಿಬಿ ಮೊದಲು ಸ್ಪಿನ್ ಬೌಲಿಂಗ್ ಎದುರಿಸಬೇಕಾಗಿದೆ. ಈ ಬಗ್ಗೆಯೂ ದಿನೇಶ್ ಕಾರ್ತಿಕ್ ಅವರಿಗೆ ಪ್ರಶ್ನೆ ಕೇಳಿದಾಗ, ಯಾವುದೇ ಸಮಸ್ಯೆ ಇದೆ ಅಂತ ನನಗನ್ನಿಸುವುದಿಲ್ಲ. ನಾವು ಈಗಷ್ಟೇ ಒಂದು ಪಂದ್ಯ ಆಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸಂಪೂರ್ಣವಾಗಿ ಹೊಸ ತಂಡ. ನಮ್ಮ ಸಾಮರ್ಥ್ಯಗಳಲ್ಲಿ ಒಂದು ನಾವು ಸ್ಪಿನ್ ಆಡುವ ರೀತಿ ಎಂದು ನಾನು ನಂಬುತ್ತೇನೆ. ಇದನ್ನು ಮುಂದುವರೆಯದಂತೆ ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.