ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರಿಂದ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ ರಿಷಬ್ ಪಂತ್ ನಿರೀಕ್ಷೆಯನ್ನು ಉಳಿಸಿಕೊಳ್ಳವಲ್ಲಿ ವಿಫಲವಾಗಿದ್ದಾರೆ. ಟೆಸ್ಟ್ ಸರಣಿ ಸೋಲಿನ ಬಳಿಕ ರಿಷಬ್ ಪಂತ್ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ್ದಾರೆ. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಪ್ರಶ್ನೆಗೆ ಪಂತ್ ತಪ್ಪಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ರಿಷಬ್ ಪಂತ್ ಭಾರತಕ್ಕೆ ಹಿಂದಿರುಗಿದ್ದಾರೆ. ನಂತರ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೀಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಪಂತ್ ನೀಲಿ ಬಣ್ಣದ ಹೂಡಿ ಮತ್ತು ಕಪ್ಪು ಬಣ್ಣದ ಶಾರ್ಟ್ ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಹೋಗುತ್ತಿದ್ದ ರಿಷಬ್ ಪಂತ್ ಅವರಿಗೆ 'ರಿಷಭ್ ಭಾಯ್, ಚಾಂಪಿಯನ್ಸ್ ಟ್ರೋಫಿ ನಮ್ಮದಾಗುವುದೇ?' ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಪಂತ್ ಇದಕ್ಕೆ ನೇರ ಉತ್ತರ ನೀಡದೆ ಅಲ್ಲಿಂದ ಹೊರಟು ಹೋಗಿದ್ದಾರೆ. ಪಂತ್ ಆಗಾಗ್ಗೆ ಇಂತಹ ಪ್ರಶ್ನೆಗೆ ಉತ್ತರಿಸುವಲ್ಲಿ ಮುಂದಿರುತ್ತಾರೆ. ಆದರೆ ಈ ಬಾರಿ ಪಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ಸೋತಿದೆ. ಇದರೊಂದಿಗೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಲುಪುವ ಕನಸು ಭಗ್ನಗೊಂಡಿದೆ. ಭಾರತವಿಲ್ಲದೆ ಡಬ್ಲ್ಯೂಟಿಸಿ ಫೈನಲ್ ನಡೆಯುತ್ತಿರುವುದು ಇದೇ ಮೊದಲು.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಪ್ರಮುಖ ಸಂದರ್ಭಗಳಲ್ಲಿ ಬೇಜವಾಬ್ದಾರಿ ಹೊಡೆತಗಳನ್ನು ಆಡುವ ಮೂಲಕ ಟೀಕೆಗಳನ್ನು ಎದುರಿಸಬೇಕಾಯಿತು. ಈ ಸರಣಿಯಲ್ಲಿ ಅವರು 5 ಪಂದ್ಯಗಳ 9 ಇನ್ನಿಂಗ್ಸ್ಗಳಲ್ಲಿ 1 ಅರ್ಧಶತಕದೊಂದಿಗೆ 255 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ 61 ರನ್.
ಭಾರತ ತಂಡ ಈಗ ಜನವರಿ 22 ರಿಂದ ಇಂಗ್ಲೆಂಡ್ ವಿರುದ್ಧ 5 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಇದಾದ ನಂತರ ಭಾರತ ತಂಡವು ದುಬೈಗೆ ಹೋಗಲಿದ್ದು, ಅಲ್ಲಿ ಚಾಂಪಿಯನ್ಸ್ ಟ್ರೋಫಿ 2025ರ ಎಲ್ಲಾ ಪಂದ್ಯಗಳನ್ನು ಆಡಲಿದೆ. ಉಳಿದ ಎಲ್ಲಾ ತಂಡಗಳು ಪಾಕಿಸ್ತಾನದಲ್ಲಿ ತಮ್ಮ ಪಂದ್ಯಗಳನ್ನು ಆಡಲಿವೆ. ಈ ಟೂರ್ನಿಯಲ್ಲಿ ವಿಕೆಟ್ ಕೀಪರ್- ಬ್ಯಾಟರ್ ಆಗಿ ರಿಷಬ್ ಪಂತ್ ಭಾರತ ತಂಡದ ಮೊದಲ ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಕೆಎಲ್ ರಾಹುಲ್ ಅಥವಾ ಸಂಜು ಸ್ಯಾಮ್ಸನ್ ಚಾಂಪಿಯನ್ಸ್ ಟ್ರೋಫಿ 2025ರ ಭಾರತ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಅವಕಾಶ ಪಡೆಯಬಹುದು.