ನ್ಯೂಜಿಲೆಂಡ್ ತಂಡ ಭಾರತದಲ್ಲಿ 36 ವರ್ಷಗಳ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್ 8 ವಿಕೆಟ್ಗಳಿಂದ ಸೋಲಿಸಿದೆ. 1988ರಲ್ಲಿ ಜಾನ್ ರೈಟ್ ನಾಯಕತ್ವದಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತವನ್ನು 136 ರನ್ಗಳಿಂದ ಸೋಲಿಸಿತ್ತು.
ಇದೀಗ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 24ರಿಂದ ಪುಣೆಯಲ್ಲಿ ಆರಂಭವಾಗಲಿದೆ. ಈ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಮರೆತು ಟೀಮ್ ಇಂಡಿಯಾ ಸಹಜ ಆಟ ಪ್ರದರ್ಶಿಸಬೇಕಿದೆ. ತವರಿನಲ್ಲಿ ಭಾರತ 2012 ರಿಂದ ಇದುವರೆಗೆ ಯಾವುದೇ ಟೆಸ್ಟ್ ಸರಣಿ ಸೋತಿಲ್ಲ. ಹೀಗಾಗಿ ಭಾರತದ ಮೇಲೆ ಟೆಸ್ಟ್ ಸರಣಿ ಗೆಲ್ಲುವ ನಿರೀಕ್ಷೆ ಬೆಟ್ಟದಷ್ಟಿದೆ.

ಇಂತಹ ಸಂದರ್ಭದಲ್ಲಿ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಗಾಯಗೊಂಡಿರುವುದು ಭಾರತಕ್ಕೆ ತಲೆ ನೋವಾಗಿದೆ. ಬೆಂಗಳೂರು ಟೆಸ್ಟ್ನಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ರಿಷಬ್ ಪಂತ್ ಮೊಣಕಾಲಿಗೆ ಚೆಂಡು ಬಡಿದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಮೊಣಕಾಲಿನ ಗಾಯದ ಹೊರತಾಗಿಯೂ, ರಿಷಬ್ ಪಂತ್ ಬೆಂಗಳೂರು ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿದು 99 ರನ್ ಗಳಿಸಿದರು.
ರಿಷಬ್ ಪಂತ್ ನ್ಯೂಜಿಲೆಂಡ್ನ ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ಕೀಪಿಂಗ್ಗೆ ಬರಲಿಲ್ಲ. ಅವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ಕೀಪಿಂಗ್ ಮಾಡಿದ್ದರು. ಅಕ್ಟೋಬರ್ 24 ರಿಂದ ಪುಣೆಯಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್ನಲ್ಲಿ ರಿಷಬ್ ಪಂತ್ ಆಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ನಾಯಕ ರೋಹಿತ್ ಶರ್ಮಾ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ರೋಹಿತ್, 'ರಿಷಭ್ ಪಂತ್ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಅವರು ಬ್ಯಾಟಿಂಗ್ ಮಾಡುವಾಗ ಆರಾಮವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ನಾವು ಹೆಚ್ಚು ಜಾಗರೂಕರಾಗಿರಬೇಕು. ಕಳೆದ ಕೆಲವು ವರ್ಷಗಳಲ್ಲಿ ಅವರು ಸಾಕಷ್ಟು ಆಘಾತವನ್ನು ಅನುಭವಿಸಿದ್ದಾರೆ. ನೋವಿನೊಂದಿಗೆ ಆಟವಾಡುವುದು ಸುಲಭವಲ್ಲ. ಹಾಗಾಗಿ ಮುಂದಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರಿಗೆ ಹೆಚ್ಚುವರಿ ವಿಶ್ರಾಂತಿ ನೀಡಬೇಕಾಗಿದೆ ಎಂದಿದ್ದಾರೆ.
ಇದಲ್ಲದೆ, ಇದೇ ವೇಳೆ ಎರಡನೇ ಟೆಸ್ಟ್ ಪಂದ್ಯಕ್ಕೆ ಯುವ ಸ್ಟಾರ್ ಬ್ಯಾಟರ್ ಶುಭಮನ್ ಗಿಲ್ ಮರುಳುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಕುತ್ತಿಗೆ ನೋವಿನ ಕಾರಣ ಗಿಲ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.