ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಮೊಣಕಾಲಿನ ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ಪಂದ್ಯದ ಮಧ್ಯದಲ್ಲಿಯೇ ಮೈದಾನ ತೊರೆದಿದ್ದಾರೆ.
2022ರ ಡಿಸೆಂಬರ್ ತಿಂಗಳಲ್ಲಿ ಭೀಕರ ಕಾರು ಅಪಘಾತದಲ್ಲಿ ರಿಷಬ್ ಪಂತ್ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ರಿಷಬ್ ಪಂತ್ ಅವರ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಅದೇ ಕಾಲು ಮತ್ತೊಮ್ಮೆ ಗಾಯಕ್ಕೆ ತುತ್ತಾಗಿದೆ. ರಿಷಬ್ ಪಂತ್ ನೇರವಾಗಿ ನಿಲ್ಲಲೂ ಕಷ್ಟಪಡುತ್ತಿರುವ ಮೈದಾನದಲ್ಲಿ ಕಂಡು ಬಂದಿದೆ.

ರಿಷಬ್ ಪಂತ್ ಮೈದಾನದಿಂದ ಹೊರ ನಡೆದಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಏಕೆಂದರೆ ಅವರು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ನ ಆಧಾರಸ್ತಂಭವಾಗಿದ್ದಾರೆ. 2024ರ ಟಿ20 ವಿಶ್ವಕಪ್ನಲ್ಲಿ ಪಂತ್ ಟೀಮ್ ಇಂಡಿಯಾಗೆ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದರು. ಆದರೆ ಕೇವಲ 3 ತಿಂಗಳ ನಂತರ ಪಂತ್ ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಿಸಿದ್ದಾರೆ.
ಭಾರತ ಮುಂದಿನ ತಿಂಗಳು ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಆಟದ ಮಧ್ಯೆ ಮೈದಾನದಿಂದ ಹೊರ ನಡೆದಿರುವುದು ತಂಡ ಚಿಂತಿಸುವಂತೆ ಮಾಡಿದೆ. ಇದೀಗ ಪಂತ್ ಎಷ್ಟು ದಿನ ಮೈದಾನದಿಂದ ದೂರ ಉಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ರಿಷಬ್ ಪಂತ್ ಗಾಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ಎರಡನೇ ದಿನದಾಟದ ಅಂತ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಅವರು ರಿಷಬ್ ಪಂತ್ ಗಾಯ ಎಷ್ಟು ಗಂಭೀರವಾಗಿದೆ ಮತ್ತು ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. 'ದುರದೃಷ್ಟವಶಾತ್ ರಿಷಬ್ ಪಂತ್ ಮೊಣಕಾಲಿನ ಗಾಯವಾಗಿದೆ. ಚೆಂಡು ನೇರವಾಗಿ ಅವರ ಶಸ್ತ್ರಚಿಕಿತ್ಸೆಗೆ ಒಳಗಾದ ಕಾಲಿಗೆ ಬಡಿದಿದೆ. ಆದ್ದರಿಂದ, ಮೊಣಕಾಲಿನ ಮೇಲೆ ಸ್ವಲ್ಪ ಊತವಿದೆ. ಇಂತಹ ಸಂದರ್ಭದಲ್ಲಿ ಸ್ನಾಯುಗಳು ಸ್ವಲ್ಪ ಮೃದುವಾಗಿರುತ್ತವೆ. ಸದ್ಯ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಪಂತ್ ತಂಡಕ್ಕೆ ಮರಳುವ ಬಗ್ಗೆ ಎಚ್ಚರಿಕೆ ಮ್ಯಾನೇಜ್ಮೆಂಟ್ ವಹಿಸಲಿದೆ. ಈ ಪಂದ್ಯದಲ್ಲಿ ರಿಷಬ್ ಪಂತ್ ಮತ್ತೊಮ್ಮೆ ಮೈದಾನಕ್ಕಿಳಿಯುವ ಭರವಸೆ ಇದೆ ಎಂದು' ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಿಷಬ್ ಪಂತ್ ಎಂದಿನಂತೆ ಚುರುಕಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು. 37ನೇ ಓವರ್ನ ಕೊನೆಯ ಎಸೆತದಲ್ಲಿ, ಸ್ಪಿನ್ನರ್ ರವೀಂದ್ರ ಜಡೇಜಾ ಎಸೆದ ಚೆಂಡು ನೇರವಾಗಿ ಪಂತ್ ಮೊಣಕಾಲಿಗೆ ಬಡಿಯಿತು. ಚೆಂಡು ಬಡಿದ ರಭಸಕ್ಕೆ ಪಂತ್ ನೋವಿನಿಂದ ಮೈದಾನದಲ್ಲೇ ನರಳಲಾರಂಭಿಸಿದರು. ತಕ್ಷಣ ಮೈದಾನಕ್ಕೆ ಬಂದ ಫಿಸಿಯೋ ಪಂತ್ಗೆ ಪ್ರಥಮ ಚಿಕಿತ್ಸೆ ನೀಡಿದರು. ಆದರೆ ಚಿಕಿತ್ಸೆಯಿಂದ ಪಂತ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯ ಕಾದ ನಂತರ ಪಂತ್ ಮೈದಾನದಿಂದ ಹೊರ ನಡೆಯಬೇಕಾಯಿತು. ಅವರ ಅನುಪಸ್ಥಿತಿಯಲ್ಲಿ, ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.