ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಕಿವೀಸ್ ಪಡೆ 8 ವಿಕೆಟ್ಗಳ ಜಯ ಸಾಧಿಸಿದೆ.
ಅದ್ಭುತ ಸಂಘಟಿತ ಪ್ರದರ್ಶನ ನೀಡಿದ ನ್ಯೂಜಿಲೆಂಡ್ 36 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ. ಕೊನೆಯ ವಿಜಯವನ್ನು 1988 ರಲ್ಲಿ ಜಾನ್ ರೈಟ್ ನಾಯಕತ್ವದಲ್ಲಿ ಸಾಧಿಸಿದ್ದರು. ಇದೀಗ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಂದು ಪುಣೆಯಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯದ ಗೆಲುವಿನ ಮೇಲೆ ಟೀಮ್ ಇಂಡಿಯಾ ಕಣ್ಣಿಟ್ಟಿದೆ.

ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಅದೇ ಒತ್ತಡದಲ್ಲಿ ಭಾರತಕ್ಕೆ ಬಂದಿದ್ದ ನ್ಯೂಜಿಲೆಂಡ್ ತಂಡ ರೋಹಿತ್ ಪಡೆಯನ್ನು ಸೋಲಿಸುವುದು ಕಷ್ಟ ಎನ್ನಲಾಗಿತ್ತು. ಇತ್ತ ಬಾಂಗ್ಲಾದೇಶ ವಿರುದ್ದ ಟೆಸ್ಟ್ ಸರಣಿ ಗೆದ್ದಿದ ಭಾರತ ತಂಡ ನ್ಯೂಜಿಲೆಂಡ್ ಸೋಲಿಸಲು ಸಜ್ಜಾಗಿತ್ತು. ಆದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ತೆಗೆದುಕೊಂಡ ಆ ಒಂದು ನಿರ್ಧಾರ ಮೊದಲ ಟೆಸ್ಟ್ ಪಂದ್ಯ ಸೋಲಲು ಕಾರಣವಾಯಿತು. ಇದಲ್ಲದೆ, ಬೆಂಗಳೂರು ಟೆಸ್ಟ್ ಪಂದ್ಯದ ಸೋಲಿನ ಟರ್ನಿಂಗ್ ಪಾಯಿಂಟ್ ಯಾವುದು ಎಂಬುದನ್ನು ರೋಹಿತ್ ತಿಳಿಸಿದ್ದಾರೆ.
ಬೆಂಗಳೂರು ಟೆಸ್ಟ್ ಪಂದ್ಯದ ಬಳಿಕ ಸುದ್ದಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಮೊದಲ ಇನ್ನಿಂಗ್ಸ್ನ ಕಳಪೆ ಬ್ಯಾಟಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಟೀಮ್ ಇಂಡಿಯಾವನ್ನು 46 ರನ್ಗಳಿಗೆ ಕಟ್ಟಿ ಹಾಕಬಹುದು ಎಂದು ನ್ಯೂಜಿಲೆಂಡ್ ನಿರೀಕ್ಷಿಸಿರಲಿಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೊದಲ ಇನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅದು ಅನಿರೀಕ್ಷಿತವಾಗಿತ್ತು. ಹಾಗಾಗಿ ಏನಾಗಲಿದೆ ಎಂದು ನಮಗೆ ತಿಳಿದಿತ್ತು. ಹೀಗಾಗಿ ಕೆಲವು ಆಟಗಾರರು ಮಾತ್ರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಆದರೆ ನಮ್ಮ ಪ್ರಯತ್ನದ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಹೇಳಿದರು.
ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ದ ಕಷ್ಟ ಎಂದು ಗೊತ್ತಿದ್ದರೂ 46 ರನ್ಗಳಿಗೆ ಔಟಾಗುವ ನಿರೀಕ್ಷೆ ಇರಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೆ. ನ್ಯೂಜಿಲೆಂಡ್ ಉತ್ತಮವಾಗಿ ಬೌಲಿಂಗ್ ಮಾಡಿತು. ಅದನ್ನು ನಾವು ಎದುರಿಸುವಲ್ಲಿ ವಿಫಲರಾಗಿದ್ದೇವೆ. ಎರಡನೇ ದಿನದ ನಂತರ ನನ್ನ ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದ್ದೇನೆಂದರೆ, ಆರಂಭದಲ್ಲಿ ಹವಾಮಾನದ ಬಗ್ಗೆ ನಮಗೆ ತಿಳಿದಿತ್ತು. ಇಂತಹ ಆಟಗಳು ನಡೆಯುತ್ತಲೇ ಇರುತ್ತವೆ. ನಾವು ಒಳ್ಳೆಯ ರೀತಿ ಆಟವನ್ನು ತೆಗೆದುಕೊಂಡು ಮುಂದುವರಿಯುತ್ತೇವೆ ಎಂದು ಬ್ಯಾಟಿಂಗ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ನಾವು ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಪಂದ್ಯದಲ್ಲಿ ಸೋತಿದ್ದೇವೆ. ನಂತರ ನಾಲ್ಕು ಪಂದ್ಯಗಳನ್ನು ಗೆದ್ದಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬುದು ನಮಗೆ ತಿಳಿದಿದೆ. ಮುಂದಿನ ಟೆಸ್ಟ್ ಪಂದ್ಯ ಇದೇ ರೀತಿ ಪುನರಾಗಮನ ಮಾಡುತ್ತೇವೆ ಎಂದು ರೋಹಿತ್ ಭರವಸೆ ನೀಡಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ ರಿಷಬ್ ಪಂತ್ ಮತ್ತು ಸರ್ಫರಾಜ್ ಖಾನ್ ಬಗ್ಗೆ ಮಾತನಾಡಿದ ರೋಹಿತ್, "ಇಬ್ಬರೂ ಬ್ಯಾಟ್ ಮಾಡುವಾಗ, ಎಲ್ಲರೂ ಸೀಟಿನ ತುದಿಯಲ್ಲಿರುತ್ತಾರೆ. ರಿಷಭ್ ಕೆಲವು ಎಸೆತಗಳನ್ನು ಬಿಟ್ಟು ನಂತರ ಬಿರುಸಿನ ಬ್ಯಾಟಿಂಗ್ ಮಾಡಿದರು. ಸರ್ಫರಾಜ್ ಕೂಡ ತಮ್ಮ ಬ್ಯಾಟಿಂಗ್ನಲ್ಲಿ ಸಾಕಷ್ಟು ಪ್ರಬುದ್ಧತೆ ತೋರಿದರು ಎಂದು ಹೊಗಳಿದರು.