ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಈ ಇಬ್ಬರು ಶತಕ ಗಳಿಸಿ ಸಂಭ್ರಮಿಸುವುದನ್ನು ನೋಡಿ ಕಣ್ತುಂಬಿಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಎರಡೂ ಇನಿಂಗ್ಸ್ಗಳಲ್ಲಿ ಇಬ್ಬರೂ ಹೆಚ್ಚು ರನ್ ಗಳಿಸಲು ವಿಫಲರಾದರು.
ಇಂತಹ ಪರಿಸ್ಥಿತಿಯಲ್ಲೂ ಬಾಂಗ್ಲಾದೇಶ ಎದುರು ಟೀಮ್ ಇಂಡಿಯಾ 280 ರನ್ಗಳಿಂದ ಗೆದ್ದಿತು. ಈ ಗೆಲುವಿನೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿತು. ಈಗ ಕೊಹ್ಲಿ ಮತ್ತು ರೋಹಿತ್ ಅವರ ಕಳಪೆ ಫಾರ್ಮ್ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.

ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ಕೊಹ್ಲಿ ಮತ್ತು ರೋಹಿತ್ ಕಳಪೆ ಫಾರ್ಮ್ಗೆ ಕೋಪಗೊಂಡಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮಿತಿ ಮೇಲೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್ ಅವರು, 'ದುಲೀಪ್ ಟ್ರೋಫಿ ಟೂರ್ನಿಗೆ ಕೊಹ್ಲಿ ಮತ್ತು ರೋಹಿತ್ ಅವರನ್ನು ಆಯ್ಕೆ ಮಾಡಲು ಅವಕಾಶವಿತ್ತು. ಆದರೆ ಕೆಲವು ಆಟಗಾರರನ್ನು ವಿಭಿನ್ನವಾಗಿ ಪರಿಗಣಿಸುವುದರಿಂದ ಪರಿಣಾಮ ಬೀರಲಿದೆ. ಕೊಹ್ಲಿ ಮತ್ತು ರೋಹಿತ್ ದುಲೀಪ್ ಟ್ರೋಫಿಯಲ್ಲಿ ಆಡದಿರುವುದು ಭಾರತೀಯ ಕ್ರಿಕೆಟ್ ಮತ್ತು ಅವರಿಗೂ ಒಳ್ಳೆಯದಲ್ಲ. ಅವರು ದುಲೀಪ್ ಟ್ರೋಫಿಯಲ್ಲಿ ಆಡಿದ್ದರೆ ವಿಷಯಗಳು ವಿಭಿನ್ನವಾಗಿರುತ್ತಿದ್ದವು.
ಆದರೆ, ಅವರಿಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪುಟಿದೇಳುವ ಸಾಮರ್ಥ್ಯವಿದೆ. ಕೆಲವು ಆಟಗಾರರು ತಮ್ಮ ಸ್ಥಾನಮಾನದ ಕಾರಣದಿಂದ ಬಿಸಿಸಿಐಯಿಂದ ವಿಶೇಷ ಉಪಚಾರ ಪಡೆಯುತ್ತಿದ್ದಾರೆ. ಇದು ಅಂತಿಮವಾಗಿ ಆ ಆಟಗಾರನಿಗೆ ಎಲ್ಲರಿಗಿಂತ ಹೆಚ್ಚು ನೋವುಂಟು ಮಾಡುತ್ತದೆ. ಜೊತೆಗೆ ಭಾರತೀಯ ಕ್ರಿಕೆಟ್ಗೂ ಹಾನಿಯಾಗಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಪ್ರಕಟವಾದ ಟೀಮ್ ಇಂಡಿಯಾ ಆಟಗಾರರ ಪೈಕಿ ರೋಹಿತ್, ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ದುಲೀಪ್ ಟ್ರೋಫಿ ಆಡಲು ಆಯ್ಕೆಯಾಗಿರಲಿಲ್ಲ. ಜೂನ್ ತಿಂಗಳಲ್ಲಿ ಟಿ20 ವಿಶ್ವಕಪ್ ಗೆಲುವಿನ ಬಳಿಕ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮಾತ್ರ ಕೊಹ್ಲಿ ಮತ್ತು ರೋಹಿತ್ ಭಾಗವಹಿಸಿದ್ದರು. ಆ ನಂತರ ಇಬ್ಬರೂ ತಂಡದಿಂದ ದೂರವಾಗಿದ್ದರು.
ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ಕೊಹ್ಲಿ ಮತ್ತು ರೋಹಿತ್ ಮರಳಿದ್ದರು. ಆದರೆ, ಚೆನ್ನೈನ ಚೆಪಾಕ್ ಮೈದಾನದಲ್ಲಿ ಇಬ್ಬರೂ ಅಸ್ಥಿರ ಪ್ರದರ್ಶನ ನೀಡಿದ್ದರು. ಆದರೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶುಭಮನ್ ಗಿಲ್, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಮಿಂಚಿನ ಪ್ರದರ್ಶನದಿಂದಾಗಿ ಭಾರತ ಗೆಲುವಿನ ದಡ ಸೇರಿತ್ತು.