ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆದ ನಂತರ ಆಟಗಾರರಲ್ಲಿ ಹೊಸ ಹೊಳಪು ಕಾಣಿಸಿಕೊಂಡಿದೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಗೌತಮ್ ಗಂಭೀರ್ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಗಂಭೀರ್ ಕೋಚ್ ಆದ ನಂತರ ಟಿ20 ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ಗೆ ಹಸ್ತಾಂತರಿಸಲಾಯಿತು. ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಈ ಮೂಲಕ 2026ರ ಟಿ20 ವಿಶ್ವಕಪ್ಗೆ ತಂಡವನ್ನು ಬಲಪಡಿಸಲು ಸಂಪೂರ್ಣ ಸಿದ್ಧತೆ ನಡೆಯುತ್ತಿದೆ. ಈ ಬಗ್ಗೆ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಅವರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಮುನ್ನ ಮಾತನಾಡಿರುವ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್, ನಾವು ಬಲಿಷ್ಠ ಆಟಗಾರರನ್ನು ಸಿದ್ಧಪಡಿಸುತ್ತಿದ್ದೇವೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ (2025) ಮತ್ತು ವಿಶ್ವಕಪ್ (ಟಿ20 ವಿಶ್ವಕಪ್ 2026) ಟೂರ್ನಿಗಳಿದ್ದು, ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ನಲ್ಲಿ ಆಟಗಾರರ ಸಾಮರ್ಥ್ಯವನ್ನು ತಿಳಿಯಬೇಕಾಗಿದೆ. ನಾವು ಎಲ್ಲಿ ಆಡುತ್ತೇವೆ ಎಂಬುದರ ಆಧಾರದ ಮೇಲೆ ಅನೇಕ ಪಾತ್ರಗಳನ್ನು ನಿರ್ವಹಿಸುವ ಆಟಗಾರರಿದ್ದಾರೆ. ಇದು ತಂಡದ ಸಮತೋಲನಕ್ಕೆ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಪಾದರ್ಪಾಣೆ ಮಾಡಿರುವ ಯುವ ಸ್ಟಾರ್ ಬ್ಯಾಟಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ನಿತೀಶ್ ರೆಡ್ಡಿ ಬಗ್ಗೆಯೂ ಮಾತನಾಡಿರುವ ಸಹಾಯಕ ಕೋಚ್, 4 ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜೊತೆಗೆ ಫಿನಿಶರ್ ಆಗಿರುವ ಆಟಗಾರನನ್ನು ನಾವು ನೋಡಿದ್ದೇವೆ. ಆದ್ದರಿಂದ, ಈ ದ್ವಿಪಕ್ಷೀಯ ಸರಣಿಗಳಲ್ಲಿ ಸಾಧ್ಯವಾದಷ್ಟು ಆಟಗಾರರನ್ನು ಒಟ್ಟುಗೂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಅವರಿಗೆ ಮಹ್ವತದ ಟೂರ್ನಿಗಳನ್ನು ಆಡಲು ಸಾಕಷ್ಟು ಸುಲಭವಾಗಲಿದೆ ಎಂದಿದ್ದಾರೆ.
ನಾವು ಈಗಿರುವಂತೆಯೇ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯಲು ಯೋಜನೆ ರೂಪಿಸಿದ್ದೇವೆ. ಮುಂದಿನ 18 ತಿಂಗಳುಗಳಲ್ಲಿ ಬರುವ ದೊಡ್ಡ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಆಟಗಾರರನ್ನು ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಪಡೆಯಲು ಅವಕಾಶ ನೀಡುತ್ತೇವೆ. ಹೀಗಾಗಿ ಸಂಜು ಸ್ಯಾಮ್ಸನ್ ಅವರಿಗೂ ಮತ್ತೊಂದು ಅವಕಾಶವನ್ನು ನೀಡಲು ಬಯಸುತ್ತೇವೆ. ಸಹಜವಾಗಿಯೇ ಮೂಲ ಯೋಜನೆಯು ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯನ್ನು ಗೆಲ್ಲುವುದಾಗಿತ್ತು. ಈಗ ಕೊನೆ ಪಂದ್ಯಕ್ಕಾಗಿ ಕೆಲವು ಹೊಸ ಮುಖಗಳನ್ನು ಕಣಕ್ಕೀಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.