ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತದ ಆಫ್ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ, ಸುಂದರ್ 7 ವಿಕೆಟ್ ಪಡೆದು ಮಿಂಚಿದರು. ಪರಿಣಾಮ ಪ್ರವಾಸಿ ಕಿವೀಸ್ ಪಡೆ 259 ರನ್ಗಳಿಗೆ ಆಲೌಟ್ ಆಯಿತು.
ಸುಂದರ್ ಮೂರು ವರ್ಷಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿ ಅದ್ಭುತ ಪ್ರದರ್ಶನ ನೀಡಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿ 5 ವಿಕೆಟ್ ಕಬಳಿಸಿದರು. ಇದಲ್ಲದೆ, ಪುಣೆ ಎಂಸಿಎ ಪಿಚ್ನಲ್ಲಿ ಭಾರತದ ಸ್ಪಿನ್ನರ್ಯೊಬ್ಬರು ಮೊದಲ ಬಾರಿಗೆ ಐದು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಸುಂದರ್ ಬರೆದರು.

ಕುಲದೀಪ್ ಯಾದವ್ ಬದಲಿಗೆ ಸುಂದರ್ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದರು. ಸಿಕ್ಕ ಅವಕಾಶದಲ್ಲಿ ಮಿಂಚಿದ ಸುಂದರ್ ಅವರು ರೋಹಿತ್ ಶರ್ಮಾ ಭರವಸೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆಗಳಿದ್ದು, ಅದರಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಒಬ್ಬರು. ಸುಂದರ್ ತಮ್ಮ ಆಯ್ಕೆಗೆ ನ್ಯಾಯ ಕೊಟ್ಟಿದ್ದಾರೆ. ಇನ್ನಿಂಗ್ಸ್ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಸಹಾಯ ಮಾಡಿದವರ ಬಗ್ಗೆ ಬಹಿರಂಗಪಡಿಸಿದ್ದಾರೆ.
'ಬಾಲ್ ತುಂಬಾ ಮೃದುವಾಗಿತ್ತು. ಹಾಗಾಗಿ ಚೆಂಡಿಗೆ ಹೆಚ್ಚಿನ ವೇಗ ನೀಡಬೇಕಾಯಿತು. ಇದರ ಬಗ್ಗೆ ನಾನು ಮತ್ತು ಆಶ್ ಬಾಯ್ಯಾ (ಅಶ್ವಿನ್) ಮಾತನಾಡುತ್ತಲೇ ಇದ್ದೆವು. ವೇಗವಾಗಿ ಬೌಲಿಂಗ್ ಮಾಡಲು
ಊಟದ ನಂತರ ಅವರೇ ಹೇಳಿದರು. ಅಂತೆಯೇ ಅವರು ಕಾನ್ವೇ ಅವರನ್ನು ಔಟ್ ಮಾಡಿದರು. ಬಳಿಕ ನಾನು ಕೂಡ ವೇಗವಾಗಿ ಬೌಲಿಂಗ್ ಮಾಡಲು ಪ್ರಾರಂಭಿಸಿದೆ. ಇದರಿಂದ ವಿಕೆಟ್ಗಳನ್ನು ಪಡೆಯಲು ಸಾಧ್ಯವಾಯಿತು. ಇದು ನಮಗೆ ಸಂತೋಷವಾಗಿದೆ ಎಂದು ಅಶ್ವಿನ್ ಬಗ್ಗೆ ಸುಂದರ್ ಹೇಳಿದ್ದಾರೆ.
ಕುಲದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿಯ ನಿರ್ಧಾರವನ್ನು ಮಾಜಿ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್ ಅವರು ಟೀಕಿಸಿದರು. ಇದಾದ ನಂತರ ವಾಷಿಂಗ್ಟನ್ ಸುಂದರ್ ಪ್ರದರ್ಶನ ನೋಡಿ ಶಾಕ್ ಆದ ಸುನೀಲ್ ಗವಾಸ್ಕರ್ ಯೂಟರ್ನ್ ಹೊಡೆದರು.
ಕಾಮೆಂಟರಿ ಬಾಕ್ಸ್ ನಲ್ಲಿದ್ದ ಸುನೀಲ್ ಗವಾಸ್ಕರ್ ಅವರು, ವಾಷಿಂಗ್ಟನ್ ಸುಂದರ್ ಎಂತಹ ಸ್ಫೂರ್ತಿದಾಯಕ ಆಯ್ಕೆ ಆಗಿದ್ದಾರೆ. ಆತನನ್ನು ಪ್ಲೇಯಿಂಗ್-11 ಗೆ ಕರೆತಂದಿರುವುದರಿಂದ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ತಂಡಕ್ಕೆ ಸಾಕಷ್ಟು ನೆರವಾಗಲಿದೆ ಎಂದು ಹೊಗಳಿದಿದ್ದಾರೆ.