ಆಗಸ್ಟ್ 6, ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ಘಟನೆಗಳು ಮತ್ತು ವಿದ್ಯಮಾನಗಳು ನಡೆದಿವೆ. ಒಂದೆಡೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ನಡೆದಿದೆ, ಮತ್ತೊಂದೆಡೆ ಬಿಸಿಸಿಐ ಐಪಿಎಲ್ ಕುರಿತಾಗಿ ಹೊಸ ವಿಷಯಗಳನ್ನು ಹಂಚಿಕೊಂಡಿದೆ, ಇನ್ನೊಂದೆಡೆ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯ ನಡೆದಿದೆ. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಆಗಸ್ಟ್6ರಂದು ನಡೆದಿರುವ ಪ್ರಮುಖ ಸುದ್ದಿಗಳ ಮಾಹಿತಿ ಈ ಕೆಳಕಂಡಂತಿದೆ ಓದಿ...
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿರುವ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ.
* ಭಾರತದ ಮಾಜಿ ನಾಯಕ ಎಂಎಸ್ ಧೋನಿ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಕಿತ್ತುಕೊಂಡು ಕೆಲಕಾಲ ಗೊಂದಲವನ್ನು ಸೃಷ್ಟಿಸಿದ್ದ ಟ್ವಿಟ್ಟರ್ ಸ್ವಲ್ಪ ಸಮಯದ ನಂತರ ಮತ್ತೆ ಮಹೇಂದ್ರ ಸಿಂಗ್ ಧೋನಿ ಅಧಿಕೃತ ಖಾತೆಗೆ ಬ್ಲೂ ಟಿಕ್ ನೀಡಿದೆ.
* ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ್ದು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ಕೆಎಲ್ ರಾಹುಲ್ ನೋಡಿ ವಿರಾಟ್ ಕೊಹ್ಲಿ ಕಲಿಯಬೇಕು ಎಂದು ರಮೀಜ್ ರಾಜಾ ಹೇಳಿಕೆ ನೀಡಿದ್ದಾರೆ.
* ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಮುಂದುವರಿಯಲಿರುವ 14ನೇ ಐಪಿಎಲ್ ಆವೃತ್ತಿಯಲ್ಲಿ ಭಾಗವಹಿಸಲಿರುವ ಆಟಗಾರರಿಗೆ ಹೊಸ ಷರತ್ತನ್ನು ವಿಧಿಸಿರುವ ಬಿಸಿಸಿಐ ಯುಎಇ ಪ್ರಯಾಣವನ್ನು ಕೈಗೊಳ್ಳಲಿರುವ ಪ್ರತಿ ಆಟಗಾರರೂ 2 ಡೋಸ್ ಕೊರೊನಾವೈರಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಲೇಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.
ಐಪಿಎಲ್ 2021: ಯುಎಇ ಪ್ರವೇಶಿಸಲು ಆಟಗಾರರಿಗೆ ಹೊಸ ಷರತ್ತು ವಿಧಿಸಿದ ಬಿಸಿಸಿಐ
* ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾಪಟು ಹೆಸರನ್ನು ನಾಮಕರಣ ಮಾಡಿರುವುದು ಖುಷಿಯ ವಿಚಾರವೇ ಸರಿ, ಆದರೆ ಇದೇ ನಿಯಮವನ್ನು ಕ್ರೀಡಾಂಗಣಗಳಿಗೂ ಅನುಸರಿಸಬೇಕು ಎಂದಿದ್ದಾರೆ. ಈ ಮೂಲಕ ಇತ್ತೀಚೆಗಷ್ಟೇ ಅಹ್ಮದಾಬಾದ್ ನಗರದಲ್ಲಿರುವ ಮೊಟೆರಾ ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ನಾಮಕರಣ ಮಾಡಿದ್ದ ಕುರಿತು ಇರ್ಫಾನ್ ಪಠಾಣ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
'ರಾಜೀವ್ ಗಾಂಧಿ ಖೇಲ್ ರತ್ನ' ಹೆಸರು ಬದಲಾವಣೆ ಬೆನ್ನಲ್ಲೇ ನರೇಂದ್ರ ಮೋದಿಗೆ ಕುಟುಕಿದ ಇರ್ಫಾನ್ ಪಠಾಣ್!?
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವೂ ವರುಣನ ಆರ್ಭಟ ಹೆಚ್ಚಾಗಿದೆ. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 278 ರನ್ಗಳಿಗೆ ಆಲ್ ಔಟ್ ಆಗಿದೆ. ಹಾಗೂ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದ್ದು ವರುಣನ ಆಗಮನವಾಗಿದೆ. ಸದ್ಯ ಇಂಗ್ಲೆಂಡ್ ತಂಡ 70 ರನ್ ಹಿನ್ನಡೆಯಲ್ಲಿದೆ.
* ಸತತವಾಗಿ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವ ಚೇತೇಶ್ವರ್ ಪೂಜಾರ ಕುರಿತು ನೆಟ್ಟಿಗರು ಕಿಡಿಕಾರಿದ್ದು, ಮುಂದಿನ ಪಂದ್ಯಗಳಲ್ಲಿ ಚೇತೇಶ್ವರ್ ಪೂಜಾರಾ ಬದಲು ಸೂರ್ಯಕುಮಾರ್ ಯಾದವ್ ರೀತಿಯ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಬೇಕೆಂದು ಬಿಸಿಸಿಐಗೆ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.
'ಪೂಜಾರ ಯಾವತ್ತಿಗೂ ರಾಹುಲ್ ದ್ರಾವಿಡ್ ಆಗಲು ಸಾಧ್ಯವಿಲ್ಲ'; ತಂಡದಿಂದ ಹೊರಬೀಳುತ್ತಾರಾ ಪೂಜಾರ?
* ಆಸ್ಟ್ರೇಲಿಯಾ ಮತ್ತು ಬಾಂಗ್ಲಾ ದೇಶದ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿಯೂ ಆಸ್ಟ್ರೇಲಿಯ ಹೀನಾಯವಾಗಿ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಕಲೆಹಾಕಿತು. 128 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ 10 ರನ್ಗಳ ಸೋಲನ್ನು ಅನುಭವಿಸಿತು. ಈ ಮೂಲಕ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಬಾಂಗ್ಲಾದೇಶ 3-0 ಅಂತರದಿಂದ ಸರಣಿಯನ್ನು ಮುನ್ನಡೆಸಿದ್ದು, ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.