ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಮೆಗಾ ಹರಾಜಿನ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ನಿಯಮಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ತಂಡಗಳ ಪರ್ಸ್, ರೈಟ್ ಟು ಮ್ಯಾಚ್ ಕಾರ್ಡ್ (ಆರ್ಟಿಎಂ) ಮತ್ತು ವಿದೇಶಿ ಆಟಗಾರರ ಬಗ್ಗೆಯೂ ನಿಯಮಗಳನ್ನು ಹೊರಡಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಹತ್ವದ ನಿರ್ಧಾರ ವಿದೇಶಿ ಆಟಗಾರರ ಹುಬ್ಬೇರಿಸುವಂತೆ ಮಾಡಿದೆ. ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ನಂತರ ಆವೃತ್ತಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರನ್ನು ಎರಡು ವರ್ಷಗಳ ನಿಷೇಧಿಸಲು ನಿರ್ಧರಿಸಲಾಗಿದೆ. ಅನಾರೋಗ್ಯದ ಸಂದರ್ಭದಲ್ಲಿ ಮಾತ್ರ ಅವರಿಗೆ ಲೀಗ್ ತೊರೆಯಲು ಅವಕಾಶ ನೀಡಲಾಗಿದೆ. ಇದರ ನಡುವೆ ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಗಡುವು ನೀಡಿದೆ.

ಐಪಿಎಲ್ನ ಎಲ್ಲಾ ಹತ್ತು ಫ್ರಾಂಚೈಸಿ ತಂಡಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ತಿಳಿಸಿದೆ. ಅಂದರೆ ತಂಡಗಳು ಆಟಗಾರರನ್ನು ಉಳಿಸಿಕೊಳ್ಳಲು ಗಡುವು ಪಡೆದಿವೆ. ಇದಕ್ಕೂ ಮುನ್ನ ಅನುಭವಿ ಆಟಗಾರರಾದ ಎಂಎಸ್ ಧೋನಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಭವಿಷ್ಯ ನಿರ್ಧಾರವಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಬಹುದು. ಮತ್ತೊಂದೆಡೆ, ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತೊರೆಯಬಹುದು. ಇನ್ನೊಂದೆಡೆ ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ನಿಂದ ಹೊರಬರಬಹುದು ಎಂಬ ಗೊಂದಲಗಳಿವೆ. ಈ ಎಲ್ಲಾ ಗೊಂದಲಗಳಿಗೆ ಅಕ್ಟೋಬರ್ 31 ರಂದು ತೆರೆ ಬೀಳಲಿದೆ.
ಧೋನಿ ಈ ಬಾರಿ ಐಪಿಎಲ್ ಆಡುವುದು ಅನುಮಾನ ಎನ್ನಲಾಗುತ್ತಿದೆ. 43 ವಯಸ್ಸಿನ ಧೋನಿ ದೀರ್ಘಕಾಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಒಂದು ವೇಳೆ ಅವರು ಮುಂದಿನ ಆವೃತ್ತಿ ಐಪಿಎಲ್ನಲ್ಲಿ ಕಾಣಿಸಿಕೊಂಡರೆ ಚೆನ್ನೈ ಮತ್ತೊಮ್ಮೆ ಚಾಂಪಿಯನ್ ಆಗುವ ಸಾಧ್ಯತೆಯಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಾಹುಲ್ ಹೊರ ಬರುವ ಬಗ್ಗೆ ಸಾಕಷ್ಟು ಮಾತುಕತೆಗಳು ನಡೆಯುತ್ತಿವೆ. ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಕೂಡ ರಾಹುಲ್ ಪರೋಕ್ಷವಾಗಿ ಹೇಳಿಕೆಗಳನ್ನು ಕೊಟ್ಟಿದ್ದು, ಅಕ್ಟೋಬರ್ 31 ರಂದು ರಾಹುಲ್ ಆರ್ಸಿಬಿಗೆ ಬರುವ ಭವಿಷ್ಯ ತಿಳಿಯಲಿದೆ.
ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಎಲ್ಲರ ಕಣ್ಣು ಮುಂಬೈ ಇಂಡಿಯನ್ಸ್ ತಂಡ ಮೇಲಿರಲಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡದ ನಾಯಕನ್ನಾಗಿ ಮಾಡಿದ ಬಳಿಕ ಆಟಗಾರರ ನಡುವೆ ಅಂತರ ಹೆಚ್ಚಾಗಿದೆ. ಹಾರ್ದಿಕ್ ಮುಂಬೈ ಸೇರುವ ಮುನ್ನ ರೋಹಿತ್ ಶರ್ಮಾ ತಂಡ ನಾಯಕನ್ನಾಗಿದ್ದರು. ಇವರನ್ನು ಕೆಳಗಿಳಿಸಿ ಹಾರ್ದಿಕ್ ಅವರನ್ನು ನಾಯಕನ್ನಾಗಿ ಮಾಡಲಾಯಿತು. ಇದರಿಂದ ಐಪಿಎಲ್ 2025ರಲ್ಲಿ ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಬೇರೆ ತಂಡ ಸೇರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಕ್ಟೋಬರ್ 31 ರಂದು ಸ್ಟಾರ್ ಕ್ರಿಕೆಟಿಗರ ಭವಿಷ್ಯ ನಿರ್ಧಾರವಾಗಲಿದೆ.