ಶನಿವಾರ, ಜೂನ್ 29ರಂದು ಬಾರ್ಬಡೋಸ್ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ಕ್ರಿಕೆಟ್ ತಂಡವು 17 ವರ್ಷಗಳ ನಂತರ ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕೇರಿತು.
ಈ ಫಲಿತಾಂಶವು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಐಸಿಸಿ ಪ್ರಶಸ್ತಿ ಗೆಲ್ಲುವ 11 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಏಕೆಂದರೆ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವು ತಂಡದ ಕೊನೆಯ ಐಸಿಸಿ ಟ್ರೋಫಿ. ಅದಕ್ಕೂ ಮುನ್ನ 2011ರಲ್ಲಿ ಏಕದಿನ ವಿಶ್ವಕಪ್ ಗೆಲುವು ಸಾಧಿಸಿದ್ದರೆ, 2007ರಲ್ಲಿ ಟಿ20 ವಿಶ್ವಕಪ್ ಜಯಿಸಿತ್ತು.

ಇದೀಗ 2024ರ ಟಿ20 ವಿಶ್ವಕಪ್ ಫಲಿತಾಂಶದಿಂದ ಹರ್ಷಗೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ದಾಖಲೆಯ ಬಹುಮಾನ ಮೊತ್ತವನ್ನು ಘೋಷಿಸಿತು.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್ಗೆ ತೆರಳಿದ್ದ 2024ರ ಟಿ20 ವಿಶ್ವಕಪ್ ವಿಜೇತ 42 ಸದಸ್ಯರ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಆದರೆ, 2024ರ ಟಿ20 ವಿಶ್ವಕಪ್ ಅಭಿಯಾನಕ್ಕಾಗಿ ಬಿಸಿಸಿಐ ನೀಡಿದ ಬಹುಮಾನ ಮೊತ್ತವು, ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಹಿಂದಿನ ಐಸಿಸಿ ಪ್ರಶಸ್ತಿ ಗೆದ್ದಾಗ ನೀಡಿದ ಬಹುಮಾನ ಮೊತ್ತಕ್ಕೆ ಹೋಲಿಸಲಾಗುತ್ತಿದೆ.

2013ರಲ್ಲಿ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ, ಬಿಸಿಸಿಐ ಪ್ರತಿ ಆಟಗಾರನಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಅಲ್ಲದೆ, ಆ ಸಂದರ್ಭದಲ್ಲಿ ಸಹಾಯಕ ಸಿಬ್ಬಂದಿಗೆ ತಲಾ 30 ಲಕ್ಷ ರೂಪಾಯಿ ನೀಡಿತ್ತು.
2011ರ ಏಕದಿನ ವಿಶ್ವಕಪ್ಗಿಂತ ಮೊದಲೇ ಬಿಸಿಸಿಐ ಆಡಳಿತ ಮಂಡಳಿ ಪ್ರಶಸ್ತಿ ಗೆಲ್ಲುವ ತಂಡದ ಆಟಗಾರರಿಗೆ ತಲಾ 1 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಆದರೆ ನಂತರ ಅದನ್ನು ತಲಾ 2 ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲಾಗಿತ್ತು. ಇದೇ ವೇಳೆ ಸಹಾಯಕ ಸಿಬ್ಬಂದಿಗೆ 50 ಲಕ್ಷ ರೂಪಾಯಿ, ಆಯ್ಕೆಗಾರರಿಗೆ ತಲಾ 25 ಲಕ್ಷ ರೂಪಾಯಿ ಬಹುಮಾನ ನೀಡಲಾಗಿತ್ತು.
2007ರ ಐಸಿಸಿ ವಿಶ್ವ ಟಿ20 ಪಂದ್ಯಾವಳಿಯನ್ನು ಭಾರತ ಗೆದ್ದ ನಂತರ, ಇಡೀ ತಂಡಕ್ಕೆ 12 ಕೋಟಿ ರೂಪಾಯಿಗಳ ಸಂಚಿತ ಮೊತ್ತವನ್ನು ಘೋಷಿಸಲಾಗಿತ್ತು.

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಬಹುಮಾನ ಹಣದ ಪಾಲು ಆಟಗಾರರಿಂದ ಆಟಗಾರರಿಗೆ, ಪಾತ್ರದಿಂದ ಪಾತ್ರಕ್ಕೆ ಬದಲಾಗುತ್ತದೆ. ಒಂದು ಪಂದ್ಯವನ್ನು ಆಡಲು ಸಾಧ್ಯವಾಗದವರೂ ಸೇರಿದಂತೆ, ಭಾರತ ತಂಡದ ಮೊದಲ 15 ಆಟಗಾರರು ತಲಾ 5 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರೆ.
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಬಹುಮಾನ ಮೊತ್ತದಿಂದ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಮನೆಗೆ ಕೊಂಡೊಯ್ಯಲಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ನೀಡಲಾಗುತ್ತದೆ.
ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆ ಸಮಿತಿಯ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿಗಳನ್ನು ವಿತರಿಸಲಾಗುವುದು.
ಸಹಾಯಕ ಸಿಬ್ಬಂದಿಗಳಲ್ಲಿ ಮೂವರು ಫಿಸಿಯೋಥೆರಪಿಸ್ಟ್ಗಳು, ಮೂವರು ಥ್ರೋಡೌನ್ ತಜ್ಞರು, ಇಬ್ಬರು ಮಸಾಜ್ಗಳು ಮತ್ತು ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ತಲಾ 2 ಕೋಟಿ ರೂಪಾಯಿ ಪಡೆಯಲಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿಯು 2024ರ ಟಿ20 ವಿಶ್ವಕಪ್ಗಾಗಿ 15 ಸದಸ್ಯರ ತಂಡದೊಂದಿಗೆ ನಾಲ್ವರು ಮೀಸಲು ಆಟಗಾರರನ್ನು ಸಹ ಒಳಗೊಂಡಿತ್ತು. ಅವರೆಂದರೆ ರಿಂಕು ಸಿಂಗ್, ಶುಭ್ಮನ್ ಗಿಲ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್. ಅವರಿಗೆ ತಲಾ 1 ಕೋಟಿ ರೂಪಾಯಿ ಬಹುಮಾನವನ್ನೂ ನೀಡಲಾಗುತ್ತದೆ.