ಜುಲೈ 19 ಶುಕ್ರವಾರ, ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾಗೆ ಮರಳಿದ್ದಾರೆ. ಅಯ್ಯರ್ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.
ಕಳೆದ ವರ್ಷ 2023ರ ಏಕದಿನ ವಿಶ್ವಕಪ್ನಲ್ಲಿ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ದೇಶೀಯ ಕ್ರಿಕೆಟ್ ಆಡುವ ಬಿಸಿಸಿಐ ಆದೇಶವನ್ನು ತಿರಸ್ಕರಿಸಿದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

ಪರಿಣಾಮ ಇಬ್ಬರೂ ಆಟಗಾರರು ಕೇಂದ್ರ ಒಪ್ಪಂದದಿಂದ ಹೊರಗುಳಿದಿದ್ದರು. ಆದರೆ, ಇದೀಗ ಅಯ್ಯರ್ ಏಕದಿನ ತಂಡಕ್ಕೆ ಮರಳಿದ್ದು, ಕಿಶನ್ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಈ ಬೆಳವಣಿಗೆ ನಂತರ ಎಡಗೈ ಸ್ಪೋಟಕ ಬ್ಯಾಟರ್ನ ಕೆರಿಯರ್ ಮುಗಿಯಿತೇ? ಎಂಬ ಚರ್ಚೆಗಳು ಕ್ರಿಕೆಟ್ ಗಲ್ಲಿಯಲ್ಲಿ ಶುರುವಾಗಿವೆ.
ಭಾರತ ತಂಡಕ್ಕೆ ಗೌತಮ್ ಗಂಭೀರ್ ಕೋಚ್ ಆಗುತ್ತಿದ್ದಂತೆಯೇ ಶ್ರೇಯಸ್ ಅಯ್ಯರ್ ಅವರ ಅದೃಷ್ಟದ ಬಾಗಿಲು ತೆರೆದಿದೆ. ಅಯ್ಯರ್ ನಾಯಕತ್ವದಲ್ಲಿ ಗಂಭೀರ್ ಅವರು ಈ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಈ ಸಂದರ್ಭದಲ್ಲಿ ಗಂಭೀರ್ ಕೆಕೆಆರ್ ತಂಡ ಮಾರ್ಗದರ್ಶಕರಾಗಿದ್ದರು.
ಮತ್ತೊಂದೆಡೆ, ಗಂಭೀರ್ ಕೋಚ್ ಆದ ಮೇಲೆ ಇಶಾನ್ ಕಿಶನ್ ವಿಷಯದಲ್ಲಿ ಇದು ಯಾವುದು ನಡೆದಿಲ್ಲ. ಇಶಾನ್ ಕೊನೆಯ ಬಾರಿಗೆ ನವೆಂಬರ್ 2023ರಲ್ಲಿ ಭಾರತ ಪರ ಆಡಿದ್ದರು. ಇದಲ್ಲದೆ ಗುವಾಹಟಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಆಡಿದ್ದರು.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಟೀಮ್ ಇಂಡಿಯಾ ಪರ ಕೂಡ ಅಮೋಘ ಇನ್ನಿಂಗ್ಸ್ಗಳನ್ನು ಆಡಿರುವ ಇಶಾನ್ ಕಿಶಾನ್ ದ್ವಿಶತಕ ಬಾರಿಸಿರುವ ದಾಖಲೆಯನ್ನು ಹೊಂದಿದ್ದಾರೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಆಯಾಸದಿಂದ ಇಶಾನ್ ವಿಶ್ರಾಂತಿ ಕೇಳಿದ್ದರು. ಆ ಬಳಿಕ ದೇಶಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಈ ಅವಧಿಯಲ್ಲಿ ಕಿಶನ್ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ತರಬೇತಿ ಪಡೆದಿದ್ದರು.
ನಂತರ 2024ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಂಡ್ಯ ನಾಯಕತ್ವದಲ್ಲಿ ಇಶಾನ್ ಮುಂಬೈ ಇಂಡಿಯನ್ಸ್ಗಾಗಿ ಆಡಿದ್ದರು. ಈ ಸಂದರ್ಭದಲ್ಲೂ ಇಶಾನ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ.
ಈಗ ಮುಂಬರುವ ದೇಶೀಯ ಋತುವಿನ ನಂತರವೇ ಕಿಶನ್ ಮರಳಲು ಸಾಧ್ಯವಾಗುವ ಸಾಧ್ಯತೆ ಹೆಚ್ಚಿದೆ. ಕೇವಲ ಐಪಿಎಲ್ ಆಡುವುದು ಅವರಿಗೆ ಮುಂದಿನ ಕೆರಿಯರ್ಗೆ ಕಷ್ಟವಾಗಬಹುದು.
ಹೀಗಾಗಿ ಇಶಾನ್ ಟೀಮ್ ಇಂಡಿಯಾಗೆ ಮರಳಲು ಇರುವ ಏಕೈಕ ಮಾರ್ಗವೆಂದರೆ ಮುಂಬರುವ ದೇಶೀಯ ಕ್ರಿಕೆಟ್ನಲ್ಲಿ ಆಡಿ ಬಿಸಿಸಿಐ ಗಮನ ಸೆಳೆಯುವುದು. ಇದರಲ್ಲಿ ಇಶಾನ್ ಯಶಸ್ವಿಯಾದರೆ ಟೀಮ್ ಇಂಡಿಯಾಕ್ಕೆ ಪುನರಾಗಮನ ಮಾಡಬಹುದು. ಇಲ್ಲವಾದರೆ, ಹೀಗಿರುವ ಟೀಮ್ ಇಂಡಿಯಾದಲ್ಲಿ ಸ್ಥಾನನ ಪಡೆಯಲು ಆಟಗಾರರ ನಡೆಸುತ್ತಿರುವ ಹೋರಾಟದಲ್ಲಿ ಇಶಾನ್ ಸೋಲುವುದು ಪಕ್ಕ ಎನ್ನುತ್ತಿದ್ದಾರೆ ಅಭಿಮಾನಿಗಳು.
ಮುಂಬರುವ 2024-25ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಟಗಾರರ ಲಭ್ಯತೆ ಮತ್ತು ಭಾಗವಹಿಸುವಿಕೆಯನ್ನು ಮಂಡಳಿಯು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ಬಿಸಿಸಿಐನ ಮಾಧ್ಯಮ ಹೇಳಿಕೆ ತಿಳಿಸಿದೆ.
ಅಸ್ಸಾಂನ ರಿಯಾನ್ ಪರಾಗ್ ಕಳೆದ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಅರ್ಧಶತಕಗಳನ್ನು ಗಳಿಸಿದ್ದರು. ಈ ಅದ್ಭುತ ಪ್ರದರ್ಶನದಿಂದ ರಿಯಾನ್ ಪರಾಗ್ ಜಿಂಬಾಬ್ವೆ ಸರಣಿಯಲ್ಲಿ ಫ್ಲಾಪ್ ಆದರೂ ಶ್ರೀಲಂಕಾ ಪ್ರವಾಸದ ಎರಡು ತಂಡಕ್ಕೂ ಆಯ್ಕೆಯಾಗಿದ್ದಾರೆ.
ಆಟಗಾರರ ದೇಶಿಯ ಕ್ರಿಕೆಟ್ ಪ್ರದರ್ಶನಕ್ಕೆ ರಾಷ್ಟ್ರೀಯ ಆಯ್ಕೆ ಸಮಿತಿ ಸಂಪೂರ್ಣ ಪ್ರಾಮುಖ್ಯತೆ ನೀಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಮತ್ತೊಮ್ಮೆ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಅವಕಾಶವಿದೆ.