ಚಂಡೀಗಢ, ಮೇ.29: ರಾಜಸ್ಥಾನದ ಗುಜ್ಜಾರ್ ಸಮುದಾಯದವರು ನಡೆಸಿದ್ದ ಟ್ರಕ್ ಮುಷ್ಕರದ ಬಿಸಿ ದೆಹಲಿ-ಮುಂಬೈ ಮಾರ್ಗಕ್ಕೆ ತಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. ಸರ್ಕಾರದ ಜೊತೆಗೆ ಡೀಲ್ ಕುದುರಿಸಿದ ಮೇಲೆ ಟ್ರಕ್ ಗಳು ಚಾಲನೆಗೊಂಡಿವೆ. ಆದರೆ, ಶುಕ್ರವಾರ ಕ್ರಿಕೆಟರ್ ಹರ್ಭಜನ್ ಸಿಂಗ್ ಕಣ್ಣಿಗೆ ಬಿದ್ದ ಟ್ರಕ್ ಅವರ ಪಿತ್ತ ನೆತ್ತಿಗೇರಿಸಿದೆ.
ಹಲವು ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ವಾಪಸ್ ಆಗಿರುವ ಹರ್ಭಜನ್ ಸಿಂಗ್ ಅವರು ಇನ್ನೂ ಐಪಿಎಲ್ 2015 ಗೆದ್ದ ಮೂಡ್ ನಲ್ಲಿದ್ದಾರೆ. ಶುಕ್ರವಾರ ವಾಹನ ಚಲಾಯಿಸುತ್ತಿದ್ದಾಗ ಅವರ ಕಣ್ಮುಂದೆ ಭಾರಿ ಲೋಡ್ ಹೊತ್ತ ಟ್ರಕ್ ಸಾಗುತ್ತಿರುವುದು ಕಾಣಿಸಿದೆ. [ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

ಹೆದ್ದಾರಿಯಲ್ಲಿ ಇಂಥ ಓವರ್ ಲೋಡ್ ಟ್ರಕ್ ಹೇಗೆ ಬಿಟ್ಟರು, ಈಡಿಯಟ್ಸ್ ಯಾವಾಗಾ ಈ ಹುಚ್ಚಾತ ನಿಲ್ಲಿಸುತ್ತಾರೆ? ಎಂದು ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಸಿಟ್ಟಿನಿಂದ ಪ್ರಶ್ನಿಸಿದ್ದಾರೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಟೀಂ ಇಂಡಿಯಾದಿಂದ ಬಾಂಗ್ಲಾ ಪ್ರವಾಸ]
ಖ್ಯಾತ ಕ್ರಿಕೆಟರ್ ಆಗಿ ಭಾರತದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳುವುದಕ್ಕೂ ಮುನ್ನ ಹರ್ಭಜನ್ ಅವರು ಟ್ರಕ್ ಚಾಲಕನಾಗಲು ಯುಎಸ್ಎ ಗೆ ತೆರಳಲು ಸಿದ್ಧರಾಗಿದ್ದರಂತೆ. ಆದರೆ, ವಿಧಿ ಬರಹ ಅವರ ಅವರನ್ನು ಕ್ರಿಕೆಟ್ ಅಂಗಳಕ್ಕೆ ತಂದು ಬಿಟ್ಟಿತು.
ಜೂ.6ರಂದು ಕೋಲ್ಕತ್ತಾಕ್ಕೆ ತೆರಳಲಿರುವ ಹರ್ಭಜನ್ ಸಿಂಗ್ ಅವರು ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿರುವ ಟೀಂ ಇಂಡಿಯಾ ಸೇರಲಿದ್ದಾರೆ. ಬಹುತೇಕ ಇದು ಅವರ ವಿದಾಯ ಟೆಸ್ಟ್ ಸರಣಿಯಾಗಲಿದೆ. ಅದರೆ, ನನಗೆ ಇನ್ನೂ ಐದು ವರ್ಷ ಆಡುವ ಸಾಮರ್ಥ್ಯ ಹಾಗೂ ಹುಮ್ಮಸ್ಸು ಇದೆ ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)