ಭಾರತದ ಈ 11 ಆಟಗಾರರು ಆಂಗ್ಲರೆದುರು ಟೆಸ್ಟ್ ಸರಣಿ ಗೆಲ್ಲಿಸಬಲ್ಲರು!

ಲಂಡನ್, ಆಗಸ್ಟ್ 13: ಇಂಗ್ಲೆಂಡ್ ನ ಎಜ್ ಬಾಸ್ಟನ್ ಮತ್ತು ಲಾರ್ಡ್ಸ್ ಎರಡೂ ಸ್ಟೇಡಿಯಂಗಳಲ್ಲೂ ನಡೆದ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲಾಗಿದೆ. ಇನ್ನೂ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳು ಬಾಕಿ ಉಳಿದುಕೊಂಡಿದ್ದು, ಪಂದ್ಯ ಗೆಲುವಿನ ನೆಲೆಯಲ್ಲಿ ಭಾರತ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಇಂಗ್ಲೆಂಡ್ ಎದುರಿನ ಮೊದಲ ಪಂದ್ಯವನ್ನು 31 ರನ್ ಗಳಿಂದ ಸೋತಿದ್ದ ಭಾರತಕ್ಕೆ ದ್ವಿತೀಯ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನೀಡಿದ್ದ 396 ಬೃಹತ್ ರನ್ನನ್ನು ಎರಡು ಇನ್ನಿಂಗ್ಸ್ ಗಳಿಂದಲೂ (107+130) ಹಿಂದಿಕ್ಕಲಾಗಲಿಲ್ಲ. ಇದರ ಪರಿಣಾಮ ಭಾರತಕ್ಕೆ ದ್ವಿತೀಯ ಟೆಸ್ಟನ್ನು 159 ರನ್ ಗಳಿಂದ ಹೀನಾಯವಾಗಿ ಸೋತಿತ್ತು.
ಎರಡೂ ಟೆಸ್ಟ್ ಗಳಲ್ಲಿ ಭಾರತದ ಪ್ರದರ್ಶನವನ್ನು ಗಮನಿಸಿದಾಗಿ ತಂಡದ ಬೌಲಿಂಗ್, ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೂರೂ ವಿಭಾಗದಲ್ಲೂ ಆಟಗಾರರ ಬದಲಾವಣೆ ಅಗತ್ಯವಿರುವಂತೆ ತೋರುತ್ತಿದೆ. ಮುಂಬರುವ ನಾಟಿಂಗ್ಹ್ಯಾಮ್ ಟೆಸ್ಟ್ ಗೆ ಭಾರತ ತಂಡದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡರೆ ಮತ್ತೆ ಗೆಲುವಿನ ಹಾದಿಗೆ ಬರಲು ಸಾಧ್ಯವಿದೆ.

ಆರಂಭಿಕರಾಗಲಿ ಮಯಾಂಕ್-ಪೃಥ್ವಿ
ಎರಡೂ ಟೆಸ್ಟ್ ಗಳಲ್ಲಿ ಆರಂಭಿಕರಾಗಿ ಇಳಿದ ಮುರಳಿ ವಿಜಯ್, ಶಿಖರ್ ಧವನ್ ಮತ್ತು ಕೆಎಲ್ ರಾಹುಲ್ ಈ ಮೂರೂ ಆಟಗಾರರ ಪ್ರದರ್ಶನ ತೃಪ್ತಿ ನೀಡಿಲ್ಲ. ಹಾಗಾಗಿ ಇನ್ನೂ ಕಾಯುವುದು ಸರಿಯಲ್ಲವೆನಿಸುತ್ತದೆ. ಆರಂಭಿಕರ ಸ್ಥಾನಕ್ಕೆ ಯುವ ಆಟಗಾರರಾದ ಮಯಾಂಗ್ ಅಗರ್ವಾಲ್ ಮತ್ತು ಪೃಥ್ವಿ ಶಾ ಅವರನ್ನು ತಂದರೆ ತಂಡಕ್ಕೆ ಅನುಕೂಲವಿದೆ.

ಮಧ್ಯಮ ಕ್ರಮಾಂಕದಲ್ಲೂ ಬದಲಾವಣೆ ಬೇಕು
ಮೊದಲ ಟೆಸ್ಟ್ ನಿಂದ ಚೇತೇಶ್ವರ ಪೂಜಾರ ಟೀಮ್ ಇಂಡಿಯಾದಿಂದ ಹೊರಗುಳಿದಾಗ ಕ್ರಿಕೆಟ್ ವಲಯದಲ್ಲಿ ಬಹಳಷ್ಟು ಚರ್ಚೆಗಳಾಗಿದ್ದವು. ದ್ವಿತೀಯ ಟೆಸ್ಟ್ ಗೆ ಪೂಜಾರ ಅವನ್ನು ಕರೆತರಲಾದರೂ ತಂಡಕ್ಕೆ ಅಂಥ ಲಾಭವಾಗಲಿಲ್ಲ. ಇದಕ್ಕೆ ಪೂಜಾರ ಅವರನ್ನು ಸಂಪೂರ್ಣ ಹೊಣೆ ಮಾಡುವಂತೆ ಇಲ್ಲ. ಯಾಕೆಂದರೆ ದ್ವಿತೀಯ ಟೆಸ್ಟ್ ವೇಳೆ ಮಳೆಯ ಅಡ್ಡಿಯೂ ಭಾರತದ ಬ್ಯಾಟ್ಸ್ಮನ್ ಗಳ ಪ್ರದರ್ಶನಕ್ಕೆ ಅಡ್ಡಿಯಾಗಿದ್ದು ನಿಜವೆ. ಆದರೆ ಮೂರನೇ ಟೆಸ್ಟ್ ಗೆ ತಂಡದ ಮಧ್ಯಮ ಕ್ರಮಾಂಕದಲ್ಲಿ ಪೂಜಾರ, ಕೊಹ್ಲಿ, ರಹಾನೆ ಮತ್ತು ಯುವ ಆಟಗಾರ ಹನುಮ ವಿಹಾರಿ ಅವರನ್ನು ತಂದರೆ ಸಕಾರಾತ್ಮಕ ಫಲಿತಾಂಶ ತರಲು ಸಾಧ್ಯವಿದೆ.

ಕೀಪಿಂಗ್ ಗೆ ಪಂತ್ ಬೆಸ್ಟ್
ವೃದ್ಧಿಮಾನ್ ಸಾಹ ಗಾಯಕ್ಕೀಡಾದ ಕಾರಣ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಸೇರಿಸಿಕೊಳ್ಳಲಾಯಿತು. ಆದರೆ ಕಾರ್ತಿಕ್ ಮೇಲಿನ ನಿರೀಕ್ಷೆ ಮುರಿದು ಬೀಳುತ್ತಿದೆ. ಎರಡೂ ಟೆಸ್ಟ್ ನಲ್ಲಿ ಕಾರ್ತಿಕ್ ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ಸೋತಿದ್ದು ಕಂಡುಬಂತು. ಹೀಗಾಗಿ ಕೀವಿಂಗ್ ಸ್ಥಾನಕ್ಕೆ ರಿಶಬ್ ಪಂತ್ ಹೆಚ್ಚು ಸೂಕ್ತ ಆಟಗಾರನಾಗಿ ಕಾಣಿಸುತ್ತಿದ್ದಾರೆ.

ಆಲ್ ರೌಂಡರ್ ಆಗಿ ಭುವನೇಶ್ವರ್, ಅಶ್ವಿನ್
ಸ್ಪಿನ್ ಬೌಲರ್ ಕುಲದೀಪ್ ಯಾದವ್ ಹೊರತುಪಡಿಸಿದರೆ ಆರ್ ಅಶ್ವಿನ್ ಅವರೇ ಈಗ ಭಾರತದ ನಂ. 1 ಟೆಸ್ಟ್ ಸ್ಪಿನ್ನರ್. ಅಶ್ವಿನ್ ತನ್ನ ಪ್ರತಿಭೆಯನ್ನು ಎಜ್ ಬಾಸ್ಟನ್ ನಲ್ಲಿ ಪ್ರದರ್ಶಿಸಿದ್ದರು. ಜೊತೆಗೆ ದ್ವಿತೀಯ ಟೆಸ್ಟ್ ವೇಳೆ ಅಶ್ವಿನ್ ಅವರ ಅಧಿಕ ರನ್ (29+33) ಗಮನ ಸೆಳೆದಿತ್ತು. ಹೀಗಾಗಿ ಮುಂಬರುವ ಟೆಸ್ಟ್ ಗೆ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಅವರ ಅಗತ್ಯ ತಂಡಕ್ಕಿದೆ.

ಇಶಾಂತ್, ಬುಮ್ರಾರ ವೇಗದ ಬಲ
ಈಗಿರುವ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಜಸ್ ಪ್ರೀತ್ ಬುಮ್ರಾ ಅವರ ಬೆಂಬಲದ ಅಗತ್ಯವಿದೆ. ಗಾಯದಿಂದಾಗಿ ಬುಮ್ರಾ ಎರಡೂ ಟೆಸ್ಟ್ ನಿಂದ ಹೊರಗುಳಿದಿದ್ದರು. ಆದರೆ ಇಶಾಂತ್ ತಕ್ಕಮಟ್ಟಿನ ಪ್ರದರ್ಶನ ತೋರಿದ್ದರು. ಹೀಗಾಗಿ ಮುಂದಿನ ಟೆಸ್ಟ್ ಗೆ ಈ ಇಬ್ಬರೂ ಆಟಗಾರರು ಆಡುವ 11 ಆಟಗಾರರೊಳಗೆ ಇರಬೇಕಿದೆ. ಒಟ್ಟಿನಲ್ಲಿ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಇವರಲ್ಲಿ ಒಬ್ಬರನ್ನು ಆರಿಸಿ ತಂಡಕ್ಕಿರಿಸಿಕೊಂಡರೆ ಒಳ್ಳೇದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications