2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಶುಭಮನ್ ಗಿಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರು ತಂಡದ ಉಪನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದರೂ ಸಹ ಇವರನ್ನು ತಂಡ ಕೈ ಬಿಟ್ಟಿದೆ. ಶುಭಮನ್ ಗಿಲ್ ಅವರನ್ನು ತಂಡದಿಂದ ಹೊರಗಿಟ್ಟ ಬಗ್ಗೆ ಈಗ ಪರ ಹಾಗೂ ವಿರೋಧ ಚರ್ಚೆಗಳು ಆರಂಭವಾಗಿವೆ. ಶುಭಮನ್ ಗಿಲ್ ಭಾರತ ತಂಡವನ್ನು ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮುನ್ನಡೆಸುತ್ತಿದ್ದಾರೆ. ಆದರೂ ಸಹ ಇವರಿಗೆ ತಂಡದಲ್ಲಿ ಸ್ಥಾನ ಏಕೆ ನೀಡಲಾಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ವೇಳೆ ಭಾರತ ತಂಡವನ್ನು ಪ್ರಕಟಿಸಿದಾಗ ಶುಭಮನ್ ಗಿಲ್ ಈ ತಂಡದ ಭಾಗವಾಗಿದ್ದರು. ಅಲ್ಲದೆ ಅವರಿಗೆ ತಂಡದ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ವಿಫಲರಾದರು. ಅಲ್ಲದೆ ರನ್ ಬರವನ್ನು ಅನುಭವಿಸಿದರು. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಇವರನ್ನು ತಂಡದಿಂದ ಕೈ ಬಿಟ್ಟಿದೆ. ಶುಭಮನ್ ಗಿಲ್, ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಂದ ಕಲಿಯಬಹುದಾದ ಪಾಠಗಳ ಏನು ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ 2011ರ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಲಭಿಸಿರಲಿಲ್ಲ. ಇದರಿಂದ ರೋಹಿತ್ ಹಿಂಜರಿಯಲಿಲ್ಲ. ಬದಲಿಗೆ ಅವರು ತಮ್ಮ ಆಟದ ಶೈಲಿಯನ್ನು ಬದಲಿಸಿಕೊಂಡರು. ಅಲ್ಲದೆ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಭರವಸೆ ಮೂಡಿಸಿದರು. ಸಿಕ್ಕ ಅವಕಾಶವನ್ನು ಬಳಸಿಕೊಂಡು ರೋಹಿತ್ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಈಗ ಬೆಸ್ಟ್ ಓಪನರ್ ಆಗಿ ಬೆಳೆದು ನಿಂತಿದ್ದಾರೆ. ಇವರ ಮಾರ್ಗವನ್ನು ಈಗ ಶುಭಮನ್ ಗಿಲ್ ಅನುಸರಿಸಿದರೆ ಬೆಸ್ಟ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಟಿ20 ಕ್ರಿಕೆಟ್ ಈಗ ಬದಲಾಗುತ್ತಿದೆ. ಶುಭಮನ್ ಗಿಲ್ ಅವರ ಆಟದ ಶೈಲಿ ಈಗಿನ ಆಟಕ್ಕೆ ಹೊಂದಿಕೊಳ್ಳುವುದು ಕೊಂಚ ಕಷ್ಟ. ಇವರು ನಿಧಾನವಾಗಿ ರನ್ ಗಳಿಸುವ ಬ್ಯಾಟರ್. ಈಗ ಟಿ20 ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟವನ್ನು ಆಡುವ ಆಟಗಾರರ ಸಂಖ್ಯೆ ಹೆಚ್ಚಿದೆ. ಅದರಂತೆ ಶುಭಮನ್ ಗಿಲ್ ಸಹ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುವುದು ಅನಿವಾರ್ಯ. ರೋಹಿತ್ ಶರ್ಮಾ ಈ ಹಿಂದೆ ಇದನ್ನೇ ಮಾಡಿ ಯಶಸ್ಸು ಕಂಡಿದ್ದರು.

ಶುಭಮನ್ ಗಿಲ್ ಅವರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗುವುದಿಲ್ಲ ಎಂಬ ವಿಷಯ ಅವರಿಗೂ ಸಹ ತಡವಾಗಿ ತಿಳಿದಿರಬಹುದು. ಇದಕ್ಕೆ ಧೃತಿ ಗೆಡದೆ ರೋಹಿತ್ ಅವರಂತೆ ಶಾಂತ ಹಾಗೂ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಗಿಲ್ ಸಹ ಅಬ್ಬರಿಸಬಹುದು. ಗಿಲ್ ತಮ್ಮನ್ನು ತಂಡದಿಂದ ಕೈ ಬಿಡಲಾಗಿದೆ ಎಂದು ದೂರುವ ಬದಲು ಮೈದಾನದಲ್ಲಿ ಬ್ಯಾಟ್ನಿಂದ ಉತ್ತರಿಸುವ ಅನಿವಾರ್ಯತೆ ಇದೆ.