ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯನ್ನು ಭಾರತ ತಂಡ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕಾನ್ಪುರ ಟೆಸ್ಟ್ ಭಾರೀ ಕುತೂಹಲ ಕೆರಳಿಸಿತ್ತು. ಡ್ರಾದತ್ತ ಸಾಗುತ್ತಿದ್ದ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಗೆದ್ದು ಅಚ್ಚರಿಗೊಳಿಸಿದೆ. ಮಳೆಯಿಂದಾಗಿ ಕಾನ್ಪುರ ಟೆಸ್ಟ್ನ ಮೂರು ದಿನಗಳು ಹಾಳಾಗಿತ್ತು. ನಂತರ ನಾಲ್ಕು ಮತ್ತು ಐದನೇ ದಿನ ಆಟ ಶುರುವಾಯಿತು. ನಾಲ್ಕನೇ ದಿನದಾಟದಲ್ಲಿ ಭಾರತ ಎದುರು ಬಾಂಗ್ಲಾದೇಶ ತಂಡ ಪ್ರತಿರೋಧ ತೋರಿತು. ಆದರೆ ಟೀಮ್ ಇಂಡಿಯಾ ಬೌಲರ್ಗಲು ಬಾಂಗ್ಲಾ ಹುಲಿಗಳಿಗೆ ಲಾಗಮು ಹಾಕಿದರು.

ಭಾರತ ವಿರುದ್ಧ ಎರಡನೇ ಟೆಸ್ಟ್ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ಗೆ ಭಾವನಾತ್ಮಕ ಪಂದ್ಯವಾಗಿತ್ತು. ಈ ಆರಂಭಕ್ಕೂ ಮುನ್ನ ಶಕೀಬ್ ಅಲ್ ಹಸನ್ ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮಿರ್ಪುರದಲ್ಲಿ ನನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲು ಬಯಸುತ್ತೇನೆ. ಅದು ನನ್ನ ಕೊನೆಯ ಟೆಸ್ಟ್ ಪಂದ್ಯವಾಗಲಿದೆ. ಒಂದು ವೇಳೆ ತವರಿನಲ್ಲಿ ವಿದಾಯ ಪಂದ್ಯವನ್ನು ಆಡಲು ಅವಕಾಶ ಸಿಗದಿದ್ದರೆ ಭಾರತ ವಿರುದ್ಧ ಪಂದ್ಯವೇ ಅಂತಿಮ ಟೆಸ್ಟ್ ಎಂದು ಹೇಳಿದ್ದರು.
ಕಾನ್ಪುರ ಟೆಸ್ಟ್ ಪಂದ್ಯವನ್ನು ಗೆದ್ದು ಶಕೀಬ್ ಅಲ್ ಹಸನ್ ಅವರಿಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿ ಬಾಂಗ್ಲಾದೇಶ ತಂಡವಿತ್ತು. ಆದರೆ, ಬಾಂಗ್ಲಾದೇಶ ಕನಸನ್ನು ಟೀಮ್ ಇಂಡಿಯಾ ಬೌಲರ್ಗಳು ಭಗ್ನಗೊಳಿಸಿದರು. ಕಾನ್ಪುರ ಟೆಸ್ಟ್ನಲ್ಲಿ ಗೆಲುವಿನ ಬಳಿಕ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ತಾವು ಸಹಿ ಮಾಡಿದ ಬ್ಯಾಟ್ ಅನ್ನು ಶಕೀಬ್ ಅಲ್ ಹಸನ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿರಾಟ್ನಿಂದ ಬ್ಯಾಟ್ ಗಿಫ್ಟ್ ಪಡೆದ ಶಾಕಿಬ್ ತುಂಬಾ ಖುಷಿಯಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಶಕೀಬ್ ಅವರ ಭವಿಷ್ಯಕ್ಕಾಗಿ ವಿರಾಟ್ ಅಭಿನಂದನೆ ಸಲ್ಲಿಸಿದ್ದಾರೆ.
ಚೆನ್ನೈನ ಚೆಪಾಲ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 280 ರನ್ಗಳಿಂದ ಮತ್ತು ಕಾನ್ಪುರ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮುಕ್ತಾಯವಾದ ಎರಡನೇ ಟೆಸ್ಟ್ನಲ್ಲಿ ಭಾರತ 7 ವಿಕೆಟ್ಗಳಿಂದ ಸೋಲಿಸಿತ್ತು. ಈ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಎರಡು ಟಸ್ಟ್ ಪಂದ್ಯಗಳಿಂದ 114 ರನ್ ಗಳಿಸಿ ಒಟ್ಟು 11 ವಿಕೆಟ್ ಪಡೆದರು. ಭಾರತ ತಂಡವು ಅಕ್ಟೋಬರ್ 6 ರಿಂದ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.