
ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕಿರಿಯ ವಯಸ್ಸಿನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದು ಸೈ ಎನಿಸಿಕೊಂಡವರು. ಅದರಲ್ಲೂ ಇರ್ಫಾನ್ ಪಠಾಣ್ ತಮ್ಮ ಪದಾರ್ಪಣಾ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅದರದ್ದೇ ನೆಲದಲ್ಲಿ ಆಡಿ ಮಿಂಚಿದ್ದರು. ಆದರೆ ಈ ಸರಣಿಯ ಕುತೂಹಲಕಾರಿ ಸಂಗತಿಯೊಂದನ್ನು ಪಠಾಣ್ ಬಹಿರಂಗಗೊಳಿಸಿದ್ದಾರೆ.
ಪ್ರಥಮ ಸರಣಿಯಾದರೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇರ್ಫಾನ್ ಪಠಾಣ್ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿ ಮಿಂಚಿದ್ದರು. ಆದರೆ ಆ ಸರಣಿಗೆ ಇರ್ಫಾನ್ ಪಠಾಣ್ ಆಯ್ಕೆಯಾಗುವುದನ್ನು ಗಂಗೂಲಿ ಬಯಸಿರಲಿಲ್ಲವಂತೆ. ಇದನ್ನು ಸ್ವತಃ ಗಂಗೂಲಿಯೇ ಇರ್ಫಾನ್ ಪಠಾಣ್ ಬಳಿ ಸರಣಿಯ ಅಂತಿಮ ಹಂತದಲ್ಲಿ ಹೇಳಿಕೊಂಡಿದ್ದರು ಎಂದು ಇರ್ಫಾನ್ ಪಠಾಣ್ ಸ್ಮರಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಸರಣಿಯಲ್ಲಿ ಇರ್ಫಾನ್ ಉತ್ತಮ ದಾಳಿಯನ್ನು ಸಂಘಟಿಸಿದ್ದರು. ಈ ಪ್ರವಾಸದ ಅಂತಿಮ ಸಂದರ್ಭದಲ್ಲಿ ಸೌರವ್ ಗಂಗೂಲಿ ಇರ್ಫಾನ್ ಬಳಿ ಬಂದು ಇರ್ಫಾನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಬರುವುದು ನನ್ನ ಬಯಕೆಯಾಗಿರಲಿಲ್ಲ ಎಂಬುದನ್ನು ಹೇಳಿಕೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಒಳ್ಳೆಯ ಉದ್ದೇಶವಿತ್ತು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ನಿಜಕ್ಕೂ ಕಠಣವಾಗಿರುತ್ತದೆ. ಅದರಲ್ಲೂ ಹದಿಹರೆಯದ ಆಟಗಾರರು ಪ್ರವಾಸಕ್ಕೆ ಹೋದರೆ ಅಲ್ಲಿ ಸರಿಯಾಗಿ ಹೊಡೆತ ತಿನ್ನಬೇಕಾಗುತ್ತದೆ. ಅದಕ್ಕೆ ಗಂಗೂಲಿ ನನ್ನ ಬಳಿ ಆಯ್ಕೆ ಸಮಿತಿಯ ಸಭೆಯಲ್ಲಿ ಈ ಪ್ರವಾಸಕ್ಕೆ ನೀನು ಆಯ್ಕೆಯಾಗುವುದನ್ನು ನಾನು ಬಯಸಿರಲಿಲ್ಲ ಎಂದು ಹೇಳಿಕೊಂಡಿದ್ದ ಸಂದರ್ಭವನ್ನು ಬಹಿರಂಗಪಡಿಸಿಪಡಿಸಿದ್ದಾರೆ.
ನಿನ್ನ ಆಯ್ಕೆಯನ್ನು ತಿರಸ್ಕರಿಸಿದ್ದೆ. ನಿನ್ನ ಬೌಲಿಂಗ್ ನಾನು ನೋಡಿದ್ದ ಕಾರಣಕ್ಕಲ್ಲ. ಕಠಿಣ ಆಸ್ಟ್ರೇಲಿಯಾ ಪ್ರವಾಸಕ್ಕೆ 19ರ ಹರೆಯದ ಆಟಗಾರನನ್ನು ಕರೆತರುವುದು ನನಗೆ ಇಷ್ಟವಿರಲಿಲ್ಲ. ಆದರೆ ನಿನ್ನನ್ನು ನೋಡಿದಾಗ ಉತ್ತಮವಾಗಿ ಪ್ರದರ್ಶನ ನೀಡುವ ಖಾತ್ರಿಯಿತ್ತು ಎಂದು ಗಂಗೂಲಿ ಹೇಳಿದ್ದರು ಎಂದು ಇರ್ಫಾನ್ ಪಠಾಣ್ ವಾಹಿನಿಯೊಂದಕ್ಕೆ ನೀಡದ ಸಂದರ್ಶನದಲ್ಲಿ ಹೇಳಿದ್ದಾರೆ.