ಟೀಮ್ ಇಂಡಿಯಾದ ಇಬ್ಬರು ಅನುಭವಿ ಬ್ಯಾಟರ್ಗಳು ಜನವರಿ 30 ರಂದು ಕಣಕ್ಕಿಳಿಯಲಿದ್ದಾರೆ. ವಿರಾಟ್ ಕೊಹ್ಲಿ 12 ವರ್ಷಗಳ ನಂತರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಕೆಎಲ್ ರಾಹುಲ್ 5 ವರ್ಷಗಳ ನಂತರ ಆಡಲಿದ್ದಾರೆ. ಕೊಹ್ಲಿ ದೆಹಲಿ ಪರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ರೈಲ್ವೇಸ್ ವಿರುದ್ಧ ಆಡಲಿದ್ದು, ರಾಹುಲ್ ಕರ್ನಾಟಕ ಪರ ಹರಿಯಾಣ ವಿರುದ್ಧ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದ್ದಾರೆ. ಇಬ್ಬರೂ ಆಟಗಾರರು ಯಾವ ಸಂಖ್ಯೆಯಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದೂ ಸ್ಪಷ್ಟವಾಗಿದೆ.
ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ದೆಹಲಿ ರಣಜಿ ತಂಡದ ನಾಯಕ ಆಯುಷ್ ಬದೋನಿ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಅವರು ನಮ್ಮನ್ನು ಸಕಾರಾತ್ಮಕವಾಗಿ ಮತ್ತು ಆತ್ಮವಿಶ್ವಾಸದಿಂದ ಇರಲು ಕೇಳಿಕೊಂಡಿದ್ದಾರೆ. ನಾನು ಐಪಿಎಲ್ನಲ್ಲಿ ವಿರಾಟ್ ಭಯ್ಯಾ ವಿರುದ್ಧ ಆಡಿದ್ದೇನೆ. ಸತತ ಎರಡು ಪಂದ್ಯಗಳಲ್ಲಿ ರಿಷಭ್ ಮತ್ತು ವಿರಾಟ್ ಭಯ್ಯಾ ಅವರನ್ನು ಮುನ್ನಡೆಸಿರುವುದು ಗೌರವದ ಸಂಗತಿ ಎಂದು ಆಯುಷ್ ಬದೋನಿ ಹೇಳಿದ್ದಾರೆ.

ಕೆಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಕರ್ನಾಟಕ ರಣಜಿ ತಂಡದ ಕೋಚ್ ಯೆರೆ ಗೌಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 'ರಾಹುಲ್ ಸಾಕಷ್ಟು ಅನುಭವವನ್ನು ತರುತ್ತಾರೆ. ಆಟದ ಎಲ್ಲಾ ಅಂಶಗಳಲ್ಲಿ ತಂಡಕ್ಕೆ ಬಹಳ ಮುಖ್ಯ. ನಾವು ಪರಿಸ್ಥಿತಿಗಳನ್ನು ಮೌಲ್ಯಮಾಪನ ಮಾಡುತ್ತೇವೆ. ಜೊತೆಗೆ ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸುತ್ತೇವೆ. ಆದರೆ ರಾಹುಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ಭಾರತ ಟೆಸ್ಟ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಖಾಯಂ ಸ್ಥಾನ ಪಡೆಯಲು ಕೆಎಲ್ ರಾಹುಲ್ ಹೆಣಗಾಡುತ್ತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆಯಾಗಿದ್ದ ರಾಹುಲ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಓಪನಿಂಗ್ ಮಾಡಿದ್ದರು. ನಂತರ ತಂಡಕ್ಕೆ ರೋಹಿತ್ ಶರ್ಮಾ ಮರಳಿದಾಗ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕೂಡ ಮಾಡಿದ್ದರು.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಟ್ಟುನಿಟ್ಟಿನ ಮಾರ್ಗಸೂಚಿ ಅನುಸರಿಸಿ ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗರು ದೇಶಿಯ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ಕೊಹ್ಲಿ, ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಹೆಸರು ಸೇರಿದೆ. ಈ ಸ್ಟಾರ್ ಆಟಗಾರರು ತಮ್ಮ ತಮ್ಮ ತವರಿನ ರಣಜಿ ತಂಡಗಳ ಪರ ಆಡುತ್ತಿದ್ದಾರೆ.