ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲಿಪ್ ಸ್ವೀಪ್ ಮುಖಭಂಗದ ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನ ಮುಂದುವರೆದಿತ್ತು. ಹೀಗಾಗಿ 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕಳೆದುಕೊಂಡಿತ್ತು. ಇದಾದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರಲು ಯೋಜನೆ ರೂಪಿಸುತ್ತಿದೆ. ಇತ್ತೀಚೆಗೆ ಬಿಸಿಸಿಐನ ಪರಿಶೀಲನಾ ಸಭೆ ನಡೆದಿದ್ದು, ಈ ವೇಳೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ನೇಮಕದ ಬಗ್ಗೆಯೂ ಚರ್ಚೆ ನಡೆದಿದೆ.
ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟಾಫ್ ಗೆ ಹೊಸ ಹೆಸರು ಸೇರ್ಪಡೆಯಾಗಲಿದೆ ಎಂಬ ಸುದ್ದಿ ಬರುತ್ತಿದೆ. ವರದಿಗಳ ಪ್ರಕಾರ, ಭಾರತದ ಅನುಭವಿ ಬ್ಯಾಟಿಂಗ್ ಕೋಚ್ ಎನಿಸಿಕೊಂಡಿರುವ ಶಿತಾಂಶು ಕೊಟಕ್ ಅವರನ್ನು ನೇಮಿಸಲು ಬಿಸಿಸಿಐ ಯೋಚಿಸುತ್ತಿದೆ.

ಬಿಸಿಸಿಐ ಮಾಜಿ ದೇಶೀಯ ಕ್ರಿಕೆಟ್ನ ದಿಗ್ಗಜ ಬ್ಯಾಟರ್ ಶಿತಾಂಶು ಕೊಟಕ್ ಅವರನ್ನು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ನೇಮಿಸುವ ಸಾಧ್ಯತೆಯಿದೆ. ಶಿತಾಂಶು ಪ್ರಸ್ತುತ ಭಾರತ ಎ ತಂಡದ ಹೆಡ್ ಕೋಚ್ ಆಗಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೋಟಕ್ ಭಾರತ ಎ ತಂಡದ ಹೆಡ್ ಕೋಚ್ ಆಗಿದ್ದರು. ಅವರು ಆಗಸ್ಟ್ 2023 ರಲ್ಲಿ ಟಿ20 ಸರಣಿಗಾಗಿ ಐರ್ಲೆಂಡ್ಗೆ ಪ್ರವಾಸ ಮಾಡಿದ ಜಸ್ಪ್ರೀತ್ ಬುಮ್ರಾ ನಾಯಕತ್ವದ ಭಾರತ ತಂಡಕ್ಕೂ ಹೆಡ್ ಕೋಚ್ ಆಗಿದ್ದರು.
ಸೌರಾಷ್ಟ್ರದ ನಾಯಕರಾಗಿದ್ದ 52 ವರ್ಷದ ಮಾಜಿ ಎಡಗೈ ಬ್ಯಾಟರ್ ಶಿತಾಂಶು ಕೊಟಕ್ ದೇಶೀಯ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅವರು 1992-93 ಋತುವಿನಿಂದ 2013 ರವರೆಗೆ ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದ್ದಾರೆ. ಅವರು ಆಡಿರುವ 130 ಪ್ರಥಮ ದರ್ಜೆ ಪಂದ್ಯಗಳಲ್ಲಿ 41.76 ಸರಾಸರಿಯಲ್ಲಿ 15 ಶತಕಗಳು ಮತ್ತು 55 ಅರ್ಧ ಶತಕಗಳೊಂದಿಗೆ 8061 ರನ್ಗಳನ್ನು ಬಾರಿಸಿದ್ದಾರೆ.
ಶಿತಾಂಶು ಕೊಟಕ್ ಅವರು ನಿವೃತ್ತಿಯ ನಂತರ ಪೂರ್ಣ ಪ್ರಮಾಣದ ಕೋಚಿಂಗ್ ಪಾತ್ರವನ್ನು ವಹಿಸಲು ಪ್ರಾರಂಭಿಸಿದರು. ಮೊದಲು ಸೌರಾಷ್ಟ್ರ ತಂಡಕ್ಕೆ ತರಬೇತಿ ಆರಂಭಿಸಿದ್ದರು. ಇದಾದ ಬಳಿಕ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ನಲ್ಲಿ ಬ್ಯಾಟಿಂಗ್ ಕೋಚ್ ಆದರು. ಕಳೆದ ನಾಲ್ಕು ವರ್ಷಗಳಿಂದ ಬಿಸಿಸಿಐ ನಿಯಮಿತ ಆಧಾರದ ಮೇಲೆ ಭಾರತ ಎ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೂ ಮುನ್ನವೇ ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಭಾರತದ ಬ್ಯಾಟಿಂಗ್ ಕೋಚ್ ಆಗಿ ಕೋಟಕ್ ಅವರನ್ನು ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಬಹುದು. ನಮ್ಮ ಹೆಚ್ಚಿನ ಅನುಭವಿ ಮತ್ತು ಯುವ ಬ್ಯಾಟರ್ಗಳು ಕಳೆದ ಎರಡು ಸರಣಿಗಳಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಬ್ಯಾಟಿಂಗ್ ದೃಷ್ಟಿಕೋನದಿಂದ ಭಾರತ ಪುರುಷರ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯನ್ನು ಬಲಪಡಿಸುವುದು ಅವಶ್ಯಕತೆಯಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.
ಪ್ರಸ್ತುತ, ಭಾರತದ ಕೋಚಿಂಗ್ ಸ್ಟಾಫ್ನಲ್ಲಿ ಹೆಡ್ಕೋಚ್ ಗೌತಮ್ ಗಂಭೀರ್ ಹೊರತುಪಡಿಸಿ, ಮೋರ್ನೆ ಮೊರ್ಕೆಲ್ (ಬೌಲಿಂಗ್ ಕೋಚ್), ಅಭಿಷೇಕ್ ನಾಯರ್ (ಸಹಾಯಕ ಕೋಚ್), ರಿಯಾನ್ ಟೆನ್ ಡೋಸ್ಚೇಟ್ (ಸಹಾಯಕ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಇದ್ದಾರೆ. ತಂಡಕ್ಕೆ ಬ್ಯಾಟಿಂಗ್ ಕೋಚ್ ಇಲ್ಲ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಸ್ಪೆಷಲಿಸ್ಟ್ನ ಅವಶ್ಯಕತೆ ಇದೆ.