ಮುಂಬರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅದ್ಭುತವಾದ ತಂಡ ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೂನ್ 1 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಜೂನ್ 29 ರಂದು ಮುಕ್ತಾಯವಾಗಲಿದೆ.
ಈಗಾಗಲೇ ಈ ವಿಶ್ವಸಮರಕ್ಕೆ ವಿಶ್ವದ 20 ತಂಡಗಳು ಅಧಿಕೃತಗೊಂಡಿದ್ದು, ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಆದರೆ ಟೀಮ್ ಇಂಡಿಯಾದಲ್ಲಿ ಯಾರೆಲ್ಲ ಆಟಗಾರರು ಅವಕಾಶ ಪಡೆಯುತ್ತಾರೆ ಎಂಬುದು ಸದ್ಯದ ಕುತೂಹಲ ಮೂಡಿಸಿದೆ.
ಏಕೆಂದರೆ ಪ್ರಸ್ತುತ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅನುಭವಿ ಆಟಗಾರ ಜೊತೆಗೆ ಯುವ ಆಟಗಾರರು ಸಹಾ ಗಮರ್ನಾಹ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾವ ಆಟಗಾರರನ್ನು ಟಿ20 ವಿಶ್ವಕಪ್ನ ತಂಡದಲ್ಲಿ ಆಡಿಸಿದರೆ ಭಾರತ ಚಾಂಪಿಯನ್ ಆಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ಆನೇಕ ಕ್ರಿಕೆಟ್ ದಿಗ್ಗಜರು ತಮ್ಮ ತಮ್ಮ ನೆಚ್ಚಿನ ಆಟಗಾರರ ಸಂಭ್ಯಾವ ತಂಡವನ್ನು ಹೆಸರಿಸಿದ್ದಾರೆ. ಆದರೆ ತಂಡದಲ್ಲಿ ಆಡುವ ಹನ್ನೊಂದು ಜನ ಆಟಗಾರರಲ್ಲಿ ಕೇವಲ ಒಬ್ಬ ಆಟಗಾರ ಮಾತ್ರ ವಿಕೆಟ್ ಕೀಪರ್ ಆಗಬಹುದು. ಈ ವಿಕೆಟ್ ಕೀಪರ್ ಆಯ್ಕೆಯೆ ಇದೀಗ ಬಿಸಿಸಿಗೆ ದೊಡ್ಡ ತಲೆ ನೋವಾಗಿದೆ.
ಅಷ್ಟರ ಮಟ್ಟಿಗೆ 2024ರ ಐಪಿಎಲ್ನಲ್ಲಿ ಈ ಐವರು ವಿಕೆಟ್ ಕೀಪರ್ಗಳು ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್, ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿನಿಶರ್ ನಿರ್ವಹಿಸುತ್ತಿರುವ ದಿನೇಶ್ ಕಾರ್ತಿಕ್ ಹಾಗು ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ಇಶಾನ್ ಕಿಶನ್ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನ ಪಡೆಯುವ ರೇಸ್ನಲ್ಲಿದ್ದಾರೆ. ಹೀಗಾಗಿ ಬಿಸಿಸಿಐ ವಿಕೆಟ್ ಕೀಪಿಂಗ್ ಆಯ್ಕೆಗಳನ್ನು ನಿರ್ಧರಿಸುವ ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಆರ್ಸಿಬಿ ಪರ ಆಡುತ್ತಿರುವ ದಿನೇಶ್ ಕಾರ್ತಿಕ್ ಅವರು ಪ್ರಸ್ತುತ ಐಪಿಎಲ್ನಲ್ಲಿ ತಮ್ಮ ಅಮೋಘ ಪ್ರದರ್ಶನದಿಂದ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಅಚ್ಚರಿಯ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ. ವಿಶೇಷವಾಗಿ ಡೆತ್ ಓವರ್ಗಳಲ್ಲಿ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕಾರ್ತಿಕ್ 262 ರನ್ ಗಳಿಸಿದ್ದಾರೆ. ಹೀಗಾಗಿ ಈ ಅನುಭವಿ ಆಟಗಾರನಿಗೆ ಬಿಸಿಸಿಐ ಮಣೆ ಹಾಕುವುದೆ ಎಂಬುದು ಪ್ರಶ್ನೆಯಾಗಿದೆ.

ಇನ್ನೊಂದೆಡೆ 14 ತಿಂಗಳ ಬಳಿಕ ಐಪಿಎಲ್ ಟೂರ್ನಿಗೆ ಮರಳಿ ಬಂದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಈ ಋತುವಿನಲ್ಲಿ ತಮ್ಮ ಲಯ ಕಂಡುಕೊಂಡಿದ್ದಾರೆ. ಈವರೆಗೆ ಆಡಿರುವ 9 ಪಂದ್ಯಗಳಿಂದ ಮೂರು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಒಟ್ಟು 342 ರನ್ ಗಳಿಸಿರುವ ಪಂತ್ ಟಾಪ್ ಸ್ಕೋರರ್ ಪಟ್ಟಿಯಲ್ಲಿ ಅಗ್ರ ಐವರಲ್ಲಿ ಒಬ್ಬರಾಗಿದ್ದಾರೆ. ಕೇವಲ ರನ್ ಗಳಿಸುವುದಲ್ಲದೆ ವಿಕೆಟ್ ಕೀಪಿಂಗ್ನಲ್ಲೂ ಪಂತ್ ಕಮಾಲ್ ಮಾಡಿದ್ದಾರೆ. ಬಿಸಿಐ ಪಂತ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ. ಆದರೆ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಹೆಚ್ಚು ರನ್ ಹೊಡೆಯುವ ಮೂಲಕ ಈ ಋತುವಿನ ಐಪಿಎಲ್ನಲ್ಲಿ ಅಬ್ಬರಿಸಿದ್ದಾರೆ. ಜೊತೆಗೆ ರಾಜಸ್ಥಾನ್ ತಂಡವನ್ನು ಗೆಲುವಿನೊಂದಿಗೆ ಮುನ್ನೆಡೆಸುತ್ತಿದ್ದಾರೆ. ಸಂಜು ಕೂಡ ಆಡಿರುವ ಎಂಟು ಪಂದ್ಯಗಳಿಂದ 314 ರನ್ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬಹುದಾದ ಮತ್ತೊಬ್ಬ ಆಟಗಾರ ಸಂಜು ಸ್ಯಾಮ್ಸನ್.

ಕೆಎಲ್ ರಾಹುಲ್ ಕೂಡ ಬ್ಯಾಟರ್ ಹಾಗೂ ವಿಕೆಟ್ ಕೀಪಿಂಗ್ ಮಾಡುವ ಆಟಗಾರನಾಗಿ ಕಾಣಿಸಿಕೊಂಡಿದ್ದು, ಲಕ್ನೋ ಸೂಪರ್ ಜೆಂಟ್ಸ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆಡಿರುವ ಎಂಟು ಪಂದ್ಯಗಳಿಂದ ಕೆ.ಎಲ್ ರಾಹುಲ್ 302 ರನ್ ಪೇರಿಸಿದ್ದು, ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತ ಬ್ಯಾಟರ್ ಆಗಿದ್ದಾರೆ. ಜೊತೆಗೆ ಹೆಚ್ಚು ಅನುಭವವಿರುವ ಆಟಗಾರನಾಗಿರುವ ಕಾರಣಕ್ಕೆ ಬಿಸಿಸಿಐ ಕೆ.ಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.

ಇನ್ನು ಇಶಾನ್ ಕಿಶನ್ ಎಡಗೈ ಬ್ಯಾಟರ್ ಆಗಿದ್ದು, ವಿಕೆಟ್ ಕೀಪಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಕಣಕ್ಕೀಳಿಯುವ ಇಶಾನ್ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಆದರೆ ಈ ಋತುವಿನಲ್ಲಿ ಇಶಾನ್ ಬ್ಯಾಟ್ನಿಂದ ರನ್ ಹರಿದು ಬಂದಿಲ್ಲ. ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ 192 ರನ್ ಹೊಡೆದಿದ್ದಾರೆ. ಹೀಗಾಗಿ ಇಶಾನ್ ಆಯ್ಕೆ ಆಗುವ ಸಾಧ್ಯತೆ ಕಡಿಮೆ ಇದೆ.