ಭಾರತ ತಂಡ ನವೆಂಬರ್ 22 ರಿಂದ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಕಾಂಗೂರು ನೆಲದಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಭಾರತ ಹಿನ್ನಡೆ ಅನುಭವಿಸಿದೆ.
ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳ ಪೈಕಿ ಒಂದನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಡುವುದು ಅನುಮಾನ ಎನ್ನಲಾಗುತ್ತಿದೆ. ವೈಯಕ್ತಿಕ ಕಾರಣಗಳಿಂದ ರೋಹಿತ್ ಶರ್ಮಾ ಮೊದಲ ಅಥವಾ ಎರಡನೇ ಪಂದ್ಯವನ್ನು ಆಡುತ್ತಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ಮಾಹಿತಿ ನೀಡಿವೆ. ಇದು ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಅವರಿಗೆ ತಲೆ ನೋವು ತರಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ನಾಯಕ ರೋಹಿತ್ ಶರ್ಮಾ ಹೊರಗುಳಿದರೆ, ಗೌತಮ್ ಗಂಭೀರ್ ಅವರಿಗೆ ದೊಡ್ಡ ಸವಾಲು ಎದುರಾಗಲಿದೆ. ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳಲ್ಲಿ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್ವುಡ್ ಅವರಂತಹ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಲು ಭಾರತ ಪರ ಕ್ಲಾಸಿಕ್ ಆರಂಭಿಕ ಬ್ಯಾಟರ್ ಕಣಕ್ಕೀಳಿಯಬೇಕಾಗುತ್ತದೆ. ಈ ಆಟಗಾರ ಯಾರು ಎಂಬುದನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮೂವರು ಆಟಗಾರರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ಅವಕಾಶವನ್ನು ಹೊಂದಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಬದಲಿಗೆ ಭಾರತಕ್ಕೆ ಇನ್ನಿಂಗ್ಸ್ ತೆರೆಯಲು ಎಡಗೈ ಬ್ಯಾಟರ್ ಇಶಾನ್ ಕಿಶನ್ ಮೊದಲ ಆಯ್ಕೆಯಾಗಿದ್ದಾರೆ. ಈಗಾಗಲೇ ಇಶಾನ್ ವಿದೇಶಿ ಪಿಚ್ಗಳಲ್ಲಿ ಆಡಿರುವ ಅನುಭವನ್ನು ಹೊಂದಿದ್ದು, ಆಸ್ಟ್ರೇಲಿಯಾ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡಬಹುದು. ಅಲ್ಲದೆ ಬೌಂಡರಿ, ಸಿಕ್ಸರ್ಗಳನ್ನು ಬಾರಿಸುವುದಕ್ಕೆ ಹೆಸರು ವಾಸಿಯಾಗಿರುವ ಇಶಾನ್ ಕಾಂಗೂರು ಪಡೆಯ ಬೌಲಿಂಗ್ ದಾಳಿಯನ್ನು ಎದುರಿಸಲು ಸಮರ್ಥರಾಗಿದ್ದಾರೆ. ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಇಶಾನ್ ಕಿಶನ್ನಂತಹ ಕ್ಲಾಸಿಕ್ ಬ್ಯಾಟರ್ ಆಡುವುದು ಭಾರತಕ್ಕೆ ಅಗತ್ಯವಿದೆ. ಪ್ರಸ್ತುತ ಭಾರತ ತಂಡದಿಂದ ಹೊರಗುಳಿದಿರುವ ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶತಕದ ಮೇಲೆ ಶತಕ ಬಾರಿಸುವ ಮೂಲಕ ಬಿಸಿಸಿಐ ಗಮನ ಸೆಳೆದಿದ್ದಾರೆ.
ಇತ್ತೀಚಿಗೆ ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ರಾಹುಲ್ ಪಾತ್ರ ಮರೆಯುವಂತಿಲ್ಲ. ಈ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಟಿಕೆಟ್ ಫಿಕ್ಸ್ ಆಗಿದೆ. ಈ ವೇಳೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ಓಪನರ್ ಪಾತ್ರವನ್ನು ನಿರ್ವಹಿಸಬಹುದು.
ರಾಹುಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಹೆಚ್ಚಾಗಿ ಆರಂಭಿಕ ಸ್ಥಾನದಲ್ಲಿ ಆಡಿದ್ದಾರೆ. ಆರಂಭದಲ್ಲಿ, ಕೆಎಲ್ ರಾಹುಲ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಇನ್ನಿಂಗ್ಸ್ ತೆರೆಯುತ್ತಿದ್ದರು. ಆದರೆ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಯುವ ಬ್ಯಾಟರ್ಗಳಿಂದಾಗಿ ಅವರು ಆರಂಭಿಕ ಸ್ಥಾನವನ್ನು ಕಳೆದುಕೊಂಡರು. ಭಾರತ ಟೆಸ್ಟ್ ತಂಡದಲ್ಲಿ ರಾಹುಲ್ ಆರಂಭಿಕನಿಂದ 6ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡಲು ಹೊಂದಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಋತುರಾಜ್ ಗಾಯಕ್ವಾಡ್ ಅವರನ್ನು ರೋಹಿತ್ ಶರ್ಮಾ ಬದಲಿಗೆ ಕಣಕ್ಕೀಳಿಸಲು ನೋಡಲಾಗುತ್ತಿದೆ. ವರದಿಗಳ ಪ್ರಕಾರ ಋತುರಾಜ್ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಮೂರನೇ ಆರಂಭಿಕ ಆಟಗಾರನಾಗುವುದು ಪಕ್ಕಾ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಬಿಸಿಸಿಐ ನೀಡಿಲ್ಲ. ಋತುರಾಜ್ ಅವರು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಪ್ರತಿಭಾವಂತ ಬ್ಯಾಟರ್ ಆಗಿರುವ ಅವರು ಆಸ್ಟ್ರೇಲಿಯಾದ ಕಠಿಣ ಪಿಚ್ಗಳಲ್ಲಿ ತಮ್ಮ ಕೌಶಲ್ ತೋರಿಸುವ ನಿರೀಕ್ಷೆಯಿದೆ.