ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರದರ್ಶನ ಅಭಿಮಾನಿಗಳು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ. ಕೆಕೆಆರ್ ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಕಾಣಲು ಸಾಧ್ಯವಾಗಿದೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೆಕೆಆರ್ ತವರಿನಲ್ಲಿ ಸೋಲು ಕಂಡಿತು.
ಸತತ ಸೋಲಿನ ನಂತರ ಕಮ್ಬ್ಯಾಕ್ ಮಾಡುವ ಉತ್ಸಾಹದಲ್ಲಿರುವ ಕೆಕೆಆರ್ ಹೊಸ ಯುವ ಆಟಗಾರನನ್ನು ತಂಡಕ್ಕೆ ಕರೆ ತಂದಿದೆ. ಈ ಆಟಗಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಭಿಷೇಕ್ ದಲ್ಹೋರ್ ಅವರನ್ನು ಕೆಕೆಆರ್ ನೆಟ್ ಬೌಲರ್ ಆಗಿ ಸೇರಿಸಿಕೊಂಡಿದೆ.

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನ ಕಳೆದೆರಡು ಸೀಸನ್ನಲ್ಲಿ ಮಾಜಿ ಮುಂಬೈ ತಂಡ ಟ್ರೋಫಿ ಗೆಲ್ಲುವಲ್ಲಿ ಅಭಿಷೇಕ್ ಪ್ರಮುಖ ಪಾತ್ರ ವಹಿಸಿದರು. ಈ ಟೂರ್ನಿಯ ಮೂಲಕ ಅಭಿಷೇಕ್ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾವು ಮೂಡಿಸಿದ್ದಾರೆ. ಅಭಿಷೇಕ್ ತಮ್ಮ ವೇಗ, ಸ್ಥಿರತೆ, ಕೌಶಲ್ಯ ಮತ್ತು ಪಂದ್ಯ ಗೆಲ್ಲುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದು, ಕಳೆದು ಎರಡು ಸೀಸನ್ಗಳಲ್ಲಿ ಉತ್ತಮ ದಾಖಲೆಗಳನ್ನು ಮಾಡಿದ್ದಾರೆ.
ಹರಿಯಾಣದ ಅಂಬಾಲದಲ್ಲಿ ಜನಿಸಿದ ಅಭಿಷೇಕ್ ದಬ್ಹೋರ್ ಅವರು ಐಎಸ್ಪಿಎಲ್ನ ಎರಡು ಸೀಸನ್ಗಳಲ್ಲಿ 19 ಪಂದ್ಯಗಳಲ್ಲಿ 324 ರನ್ ಗಳಿಸಿ 33 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಸೀಸನ್-1 ರಲ್ಲಿ ಪ್ಲೇಯರ್ ಆಫ್ ಸೀಸನ್ ಪ್ರಶಸ್ತಿ ಮತ್ತು ಸೀಸನ್-2 ರಲ್ಲಿ ಟೂರ್ನಿಯ ಅತ್ಯುತ್ತಮ ಬೌಲರ್ ಪ್ರಶಸ್ತಿ ಸಿಕ್ಕಿತು. ಈ ಲೀಗ್ ಮೂಲಕ ಅವರು ಕ್ರಿಕೆಟ್ನಲ್ಲಿ ಅಭಿಷೇಕ್ ಸಂಚಲನ ಮೂಡಿಸಿದ್ದಾರೆ. ಇದರ ಪ್ರತಿಫಲವಾಗಿ ಹರಿಯಾಣದ ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಅಭಿಷೇಕ್ ಈಗ ಐಪಿಎಲ್ ಎಂಬ ಶ್ರೀಮಂತ್ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಐಪಿಎಲ್ 2020ರ ಸಮಯದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಕೆಕೆಆರ್ ತಂಡಕ್ಕೆ ನೆಟ್ ಬೌಲರ್ ಆಗಿ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ವರುಣ್ ಚಕ್ರವರ್ತಿ ಕೆಕೆಆರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅವರು ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ವರುಣ್ ಹಾದಿಯಲ್ಲಿ ಅಭಿಷೇಕ್ ಸಾಗುವ ನಿರೀಕ್ಷೆಯಲ್ಲಿದ್ದಾರೆ.