ಟೆನಿಸ್ ಬಾಲ್ ಕ್ರಿಕೆಟ್ ನಿಂದ ವೈಟ್ ಬಾಲ್ ಕ್ರಿಕೆಟ್ ತನಕ
ಚೆನ್ನೈನ ಎಸ್ ಆರ್ ಎಂ ವಿಶ್ವವಿದ್ಯಾಲಯದಲ್ಲಿ 5 ವರ್ಷದ ವಾಸ್ತುಶಿಲ್ಪ ಕೋರ್ಸ್ (ಆರ್ಕಿಟೆಕ್ಟ್) ಅಭ್ಯಾಸ ಮಾಡಿ ಪದವಿ ಪಡೆದರು. ಫ್ರೀಲ್ಯಾನ್ಸರ್ ಆಗಿ ಆರ್ಕಿಟೆಕ್ಟ್ ವೃತ್ತಿ ಆರಂಭಿಸಿದ ವರುಣ್ ಅವರು 2015ರ ನಂತರ ಹಣಕಾಸು ಸಮಸ್ಯೆಯಿಂದಾಗಿ ಟೆನಿಸ್ ಬಾಲ್ ಕ್ರಿಕೆಟ್ ಆಡಲು ಆರಂಭಿಸಿದೆ ಎಂದು ಹೇಳಿಕೊಂಡಿದ್ದಾರೆ. ಕ್ರೊಮ್ ಬೆಸ್ಟ್ ಕ್ರಿಕೆಟ್ ಕ್ಲಬ್ ಸೇರಿ ಆಲ್ ರೌಂಡರ್ ಆಗಿ ಗುರುತಿಸಿಕೊಂಡರು.
ಸರಿ ಸುಮಾರು 7 ಮಾದರಿ ಎಸೆತಗಳು
ವಿಕೆಟ್ ಕೀಪರ್ ಬ್ಯಾಟ್ಸ್ ಮನ್, ವೇಗದ ಬೌಲರ್ ಆಗಿದ್ದ ವರುಣ್ ಅವರು ಮೊಣಕಾಲಿಗೆ ಆದ ಗಾಯದಿಂದಾಗಿ ಸ್ಪಿನ್ ಬೌಲಿಂಗ್ ಮಾಡತೊಡಗಿದರು. ವಿಶಿಷ್ಟ ಬೌಲಿಂಗ್, ವಿಕೆಟ್ ಕಬಳಿಸುವ ಜಾಣ್ಮೆಯಿಂದಾಗಿ ಜ್ಯುಬಿಲಿ ಕ್ರಿಕೆಟ್ ಕ್ಲಬ್ ನಲ್ಲಿ ನಾಲ್ಕನೇ ಡಿವಿಷನ್ ಆಡಿದರು. ಪೃಥ್ವಿ ಕ್ರಿಕೆಟ್ ಕ್ಲಬ್ ವಿರುದ್ಧ 74ರನ್ ಗಳಿಸಿದ್ದಲ್ಲದೆ 7 ಪಂದ್ಯಗಳಲ್ಲಿ 34 ವಿಕೆಟ್ (3.06 ಎಕಾನಾಮಿ) ಗಳಿಸಿ ಮಿಂಚಿದರು. ಸರಿ ಸುಮಾರು 7 ಮಾದರಿ(ಗೂಗ್ಲಿ, ಕೇರಂಬಾಲ್, ಫ್ಲಿಪ್ಪರ್, ಆಫ್ ಬ್ರೇಕ್, ಟಾಪ್ ಸ್ಪಿನ್ನರ್, ಯಾರ್ಕ್ ಲೆಂಗ್ತ್, ಲೆಗ್ ಬ್ರೇಕ್) ಎಸೆತದಲ್ಲಿ ಪರಿಣತಿ ಹೊಂದಿದರು.
ತಮಿಳುನಾಡು ಪರ ಕ್ಲಬ್ ಕ್ರಿಕೆಟ್ ನಿಂದ ರಣಜಿ ತನಕ
2018ರಲ್ಲಿ ತಮಿಳುನಾಡಿನ ಪರ ಲಿಸ್ಟ್ ಎ ಪಂದ್ಯದ ಮೂಲಕ ಪದಾರ್ಪಣೆ ಮಾಡಿದರು. ಟಿಎನ್ ಪಿಎಲ್ ನಲ್ಲಿ ಮದುರೈ ಚೊಚ್ಚಲ ಕಪ್ ಗೆಲ್ಲಲು ನೆರವಾದರು.
2018ರ ಸೆಪ್ಟೆಂಬರ್ 20ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ಪರ 9 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ (22) ಗಳಿಸಿದ ಸಾಧನೆ(4.23 ಎಕಾನಮಿ) ಮಾಡಿದರು. 2018-19ರಲ್ಲೇ ತಮಿಳುನಾಡಿನ ರಣಜಿ ತಂಡಕ್ಕೆ ಆಯ್ಕೆಯಾದರು.
ಆಡಿರುವ ತಂಡಗಳು: ಕಾರೈಕುಡಿ ಕಾಲೈ, ಕಿಂಗ್ಸ್ ಎಲೆವನ್ ಪಂಜಾಬ್, ಕೋಲ್ಕತ್ತಾ ನೈಟ್ ರೈಡರ್ಸ್, ಸೈಚೆಮ್ ಮದುರೈ ಪ್ಯಾಂಥರ್ಸ್, ತಮಿಳುನಾಡು.
ಶೈಲಿ: ಬಲಗೈ ಬ್ಯಾಟ್ಸ್ ಮನ್, ಲೆಗ್ ಬ್ರೇಕ್ ಗೂಗ್ಲಿ ಬೌಲರ್
ಪ್ರಥಮ ದರ್ಜೆ ಪಂದ್ಯ: 1 ಪಂದ್ಯ, 1 ವಿಕೆಟ್
ಲಿಸ್ಟ್ ಎ ಪಂದ್ಯ: 9 ಪಂದ್ಯ, 22 ವಿಕೆಟ್, 5/38 ಶ್ರೇಷ್ಠ ಪ್ರದರ್ಶನ.
ಟಿ20: 12 ಪಂದ್ಯ, 14 ವಿಕೆಟ್, 5/20
ಐಪಿಎಲ್ ಏಳು ಬೀಳು
ಟಿಎನ್ ಪಿಎಲ್ ನಲ್ಲಿ ಆಡಿದ್ದ ವರುಣ್ ಚೆನ್ನೈ ಸೂಪರ್ ಕಿಂಗ್ಸ್ ಪರ ನೆಟ್ ಬೌಲರ್ ಆಗಿದ್ದರು. ದಿನೇಶ್ ಕಾರ್ತಿಕ್ ಹಾಗೂ ಅನಾಲಿಸ್ಟ್ ಎಆರ್ ಶ್ರೀಕಾಂತ್ ಅವರು ಕೆಕೆಅರ್ ನೆಟ್ ಅಭ್ಯಾಸಕ್ಕೂ ಕರೆಸಿಕೊಂಡರು. ಸುನಿಲ್ ನರೇನ್ ಹಾಗೂ ಕೋಚ್ ಕಾರ್ಲ್ ಕ್ರೋವ್ ರಿಂದ ಕಲಿತ್ತಿದ್ದು ಐಪಿಎಲ್ ತಂಡಕ್ಕೆ ಸೇರಲು ನೆರವಾಯಿತು.
2018ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡಕ್ಕೆ ಆಯ್ಕೆಯಾದರೂ ಮೊದಲ ಪಂದ್ಯವಾಡಿದ್ದು 2019ರ ಮಾರ್ಚ್ 27ರಂದು, ಆ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ 25ರನ್ ಚೆಚ್ಚಿಸಿಕೊಂಡರು. ಈ ರೀತಿ ಹೊಡೆಸಿಕೊಳ್ಳಲು 8.4 ಓವರ್ ನೀಡಬೇಕಾಗಿತ್ತಾ ಎಂದು ಫ್ರಾಂಚೈಸಿಯನ್ನು ಎಲ್ಲರೂ ಪ್ರಶ್ನಿಸಿದರು. ಮೊದಲ ಪಂದ್ಯವಾಡುವ ಬೌಲರ್ ಒಬ್ಬ ಒಂದು ಓವರ್ ನಲ್ಲಿ ನೀಡಿದ ಅತ್ಯಧಿಕ ರನ್ ಇದಾಗಿದೆ.
2020ರಲ್ಲಿ ಪಂಜಾಬ್ ತಂಡ ತ್ಯಜಿಸಿದ್ದರಿಂದ ವರುಣ್ ಐಪಿಎಲ್ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪಾಲಾದರು. 2020ರ ಅಕ್ಟೋಬರ್ 24ರಂದು ಅಬುಧಾಬಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 4 ಓವರ್ ಗಳಲ್ಲಿ 20ರನ್ ನೀಡಿ 5 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಈ ಎಲ್ಲಾ ಸಾಧನೆಯ ಫಲವಾಗಿ ಅ. 26ರಂದು ಪ್ರಕಟವಾದ ಟೀಂ ಇಂಡಿಯಾದ ಟಿ20ಐ ತಂಡದಲ್ಲಿ ವರುಣ್ ಸ್ಥಾನ ಪಡೆದುಕೊಂಡಿದ್ದಾರೆ.
ವರುಣ್ ಕ್ರಿಕೆಟ್ ಬದುಕಿಗೆ ತಿರುವು ನೀಡಿದವರು
ವರುಣ್ ಕ್ರಿಕೆಟ್ ಬದುಕಿಗೆ ತಿರುವು ನೀಡಿದವರು ಎಂ ರಂಗರಾಜನ್ (ಆರ್ ಸಿಬಿಯ ಹಾಲಿ ಫೀಲ್ಡಿಂಗ್ ಕೋಚ್) ಹಾಗೂ ದಿನೇಶ್ ಕಾರ್ತಿಕ್. ರಂಗರಾಜನ್ ಅವರು 2015ರಲ್ಲಿ ವರುಣ್ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ನೆಟ್ ಬೌಲರ್ ಆಗಲು ನೆರವಾದರು. ನಂತರ ತಮಿಳುನಾಡು ಕ್ರಿಕೆಟ್ ಲೀಗ್ ನ ಹರಾಜಿನಲ್ಲಿ ಹೆಸರು ಸೇರಿಸಿದರು.
ಕಾರೈಕುಡಿ ಕಾಲೈ ನಂತರ ಮದುರೈ ಪ್ಯಾಂಥರ್ಸ್ ಪರ ಆಡಿದ್ದಲ್ಲದೆ ಚೆನ್ನೈನ ಪ್ರಥಮ ದರ್ಜೆಯ ವಿಜಯ್ ಕ್ರಿಕೆಟ್ ಕ್ಲಬ್ ಪರ ಆಡುವ ಅವಕಾಶ ಪಡೆದರು. ಒಂದು ಕಾಲದಲ್ಲಿ ರಾಹುಲ್ ದ್ರಾವಿಡ್ ಕೂಡಾ ಈ ಕ್ಲಬ್ ಪರ ಆಡಿದ್ದಾರೆ. 2018ರಲ್ಲಿ 8.4ಕೋಟಿ ರುಗೆ ಪಂಜಾಬ್ ಪಾಲಾದರು ಒಂದು ಪಂದ್ಯದ ನಂತರ ಮತ್ತೆ ಆಡಲಿಲ್ಲ, ಬೆರಳಿಗೆ ಗಾಯ ಮಾಡಿಕೊಂಡು ಒಂದು ವರ್ಷ ಕ್ರಿಕೆಟ್ ಅಭ್ಯಾಸ ಕಳೆದುಕೊಂಡರು.
2020ರ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರು ಮೂಲಬೆಲೆ ಹೊಂದಿದ್ದ ವರುಣ್ ಕೊಳ್ಳಲು ರಂಗರಾಜನ್ ಯತ್ನಿಸಿ 3.8 ಕೋಟಿ ರು ತನಕ ಬಿಡ್ ಕೂಗಿದರು.ಆದರೆ, ಅಂತಿಮವಾಗಿ ದಿನೇಶ್ ಅವರು 4 ಕೋಟಿ ರುಗೆ ಕೆಕೆಆರ್ ಸೇರಲು ನೆರವಾದರು.
ಕಳೆದ ವರ್ಷ ತಲಾ ಧೋನಿ ಅವರ ಆಟವನ್ನು ಪೆವಿಲಿಯನ್ ನಿಂದ ನೋಡಿ ಆನಂದಿಸುತ್ತಿದ್ದೆ. ಈ ಬಾರಿ ಅವರ ವಿಕೆಟ್ ಪಡೆದಿದ್ದು ನನ್ನ ಸಾಧನೆ, ಅದರೆ, ತಲಾ ಎಂದಿದ್ದರೂ ತಲಾನೆ ಎಂದು ಧೋನಿ ವಿಕೆಟ್ ಪಡೆದಿದ್ದರ ಬಗ್ಗೆ ವರುಣ್ ಸಂತಸ ವ್ಯಕ್ತಪಡಿಸಿದ್ದಾರೆ.