ಭಾರತ ಚಾಂಪಿಯನ್ಸ್ ಟ್ರೋಫಿಗೆ ಇಂದು ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಶನಿವಾರ ಪ್ರಕಟವಾಗುವ ತಂಡದಲ್ಲಿ ಯಾವೆಲ್ಲಾ ಆಲ್ರೌಂಡರ್ ಸ್ಥಾನ ಪಡೆಯುತ್ತಾರೆ ಎಂಬುದು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಟೀಮ್ ಇಂಡಿಯಾದ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. ಯುವ ಆಲ್ರೌಂಡರ್ ಗಳಲ್ಲಿ ಯಾರಿಗೆ ಸ್ಥಾನ ಲಭಿಸುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಇತ್ತೀಚಿಗೆ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಪದಾರ್ಪಣೆ ಮಾಡಿ ಎಲ್ಲರ ಚಿತ್ತ ಕದ್ದಿರುವ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸಹ ದುಬೈ ಫ್ಲೈಟ್ ಏರುವ ಕನಸಿನಲ್ಲಿದ್ದಾರೆ. ಇವರು ಆಸ್ಟ್ರೇಲಿಯಾದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ತಮ್ಮನ್ನು ಚಾಂಪಿಯನ್ಸ್ ಟ್ರೋಫಿಗೆ ಪರಿಗಣಿಸುವಂತೆ ಆಯ್ಕೆ ಸಮಿತಿಗೆ ತಮ್ಮ ಆಟದ ಮೂಲಕ ಒತ್ತಾಯಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಇವರಿಗೆ ತಂಡದಲ್ಲಿ ಸ್ಥಾನ ನೀಡಿದರೆ ಬೆಸ್ಟ್ ಎಂಬ ಮಾತು ಅಭಿಮಾನಿಗಳಲ್ಲೂ ಇದೆ.

ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಗಳ ಪಟ್ಟಿಯಲ್ಲಿ ಎದ್ದು ಕಾಣುವ ಆಟಗಾರ ಹಾರ್ದಿಕ್ ಪಾಂಡ್ಯ. ಇವರು ವೆಸ್ಟ್ ಇಡೀಸ್ ಹಾಗೂ ಅಮೆರಿಕಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೆ ದೇಶೀಯ ಟೂರ್ನಿಗಳಲ್ಲಿ ರನ್ ಬಾರಿಸಿ, ವಿಕೆಟ್ ಪಡೆಯುತ್ತಿದ್ದು, ಆಯ್ಕೆ ಸಮಿತಿ ಇವರನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ಇವರು ದೊಡ್ಡ ಟೂರ್ನಿಗಳಲ್ಲಿ ಹೇಗೆ ಆಡಬೇಕೆಂದು ಅರಿತಿದ್ದಾರೆ. ಈ ಬಾರಿ ಟಿ20 ವಿಶ್ವಕಪ್ನ ಫೈನಲ್ ಓವರ್ ನ್ನು ಒತ್ತಡದಲ್ಲೂ ಶಿಸ್ತು ಬದ್ಧವಾಗಿ ಸಂಘಟಿಸಿದ್ದರು. ಹೀಗಾಗಿ ಇವರು ಆಯ್ಕೆ ಸುಲಭವಾಗಿ ಆಗುವು ಸಾಧ್ಯತೆ ಇದೆ.
ಇನ್ನು ಬಿಸಿಸಿಐ ಆಯ್ಕೆ ಸಮಿತಿ ತಂಡದಲ್ಲಿ ಲೆಫ್ಟ್ ಹ್ಯಾಂಡ್ ಸ್ಪಿನ್ ಬೌಲರ್ ಹಾಗೂ ಇನ್ನೋಬ್ಬ ಲೆಫ್ಟ್ ಹ್ಯಾಂಡ್ ಬ್ಯಾಟರ್ ಬೇಕು ಎಂದು ಪ್ಲ್ಯಾನ್ ಮಾಡಿದರೆ, ಈ ಟಿಕೆಟ್ ಅಕ್ಷರ್ ಪಟೇಲ್ ಪಡೆಯಲಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಅಷ್ಟೇ ಏಕೆ ಫೀಲ್ಡಿಂಗ್ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಇವರಿಗೆ ಪೈಪೋಟಿ ನೀಡಲು ರವೀಂದ್ರ ಜಡೇಜಾ ಸಹ ಕ್ಯೂ ನಲ್ಲಿ ನಿಂತಿದ್ದಾರೆ. ಆದರೆ ಜಡೇಜಾ ಅವರ ಫಾರ್ಮ್ ಕಳೆದ ಕೆಲವು ದಿನಗಳಲ್ಲಿ ಸರಿಯಾಗಿಲ್ಲ. ಹೀಗಾಗಿ ಇವರಿಗೆ ತಂಡದಿಂದ ಹೊರಗಿಡುವ ಸಾಧ್ಯತೆ ಇದೆ. ಆದರೆ ಬಿಸಿಸಿಐ ಆಯ್ಕೆ ಸಮಿತಿ ಏನಾದ್ರೂ ಬೇರೆ ಪ್ಲ್ಯಾನ್ ಮಾಡಿದರೆ ಇವರಿಗೆ ಅವಕಾಶ ಸಿಗುತ್ತದೆ.

ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ಎಂಟ್ರಿ ನೀಡಿದ ಆಫ್ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್. ತವರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಆದರೆ, ಈ ಸರಣಿಯಲ್ಲಿ ವಾಷಿಂಗ್ಟನ್ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಬ್ರಿಸ್ಬೇನ್ ಟೆಸ್ಟ್ ಬಳಿಕ ಅಶ್ವಿನ್ ನಿವೃತ್ತರಾದ ಬಳಿಕ ವಾಷಿಂಗ್ಟನ್ ಅವರ ಸ್ಥಾನವನ್ನು ತುಂಬಲು ರೆಡಿಯಾಗಿದ್ದಾರೆ.