ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಮೊದಲ ಪಂದ್ಯ ಅಕ್ಟೋಬರ್ 6 ರಂದು ಗ್ವಾಲಿಯರ್ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಹಲವು ವರ್ಷಗಳ ಬಳಿಕ ಗ್ವಾಲಿಯರ್ನಲ್ಲಿ ಕ್ರಿಕೆಟ್ ಪಂದ್ಯ ಅಯೋಜಿಸಿಲಾಗಿದ್ದು, ಈ ಪಂದ್ಯಕ್ಕೂ ಮುನ್ನ ಆಟಗಾರರು ಪಿಚ್ ಅರ್ಥಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ಪಿಚ್ ಬ್ಯಾಟಿಂಗ್ ಅಥವಾ ಬೌಲಿಂಗ್ ಯಾವುದಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದು ಕುತೂಹಲ ಮೂಡಿಸಿದೆ.

14 ವರ್ಷಗಳ ನಂತರ ಗ್ವಾಲಿಯರ್ನ ಪಿಚ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆತಿಥ್ಯ ವಹಿಸಲಿದೆ. ಅಕ್ಟೋಬರ್ 6 ರಂದು ಗ್ವಾಲಿಯರ್ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ರನ್ಗಳ ಹೊಳೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಮುಕ್ತಾಯವಾದ ಚೊಚ್ಚಲ ಮಧ್ಯಪ್ರದೇಶ ಲೀಗ್ (ಎಂಪಿಎಲ್) ವೇಳೆ ತಂಡಗಳು ಗಳಿಸಿದ ರನ್ಗಳನ್ನು ನೋಡಿದರೆ, ಭಾರತ ಮತ್ತು ಬಾಂಗ್ಲಾದೇಶ ಪಂದ್ಯದಲ್ಲಿಯೂ ಹೆಚ್ಚು ರನ್ಗಳು ಬರುವ ಸಾಧ್ಯತೆಯಿದೆ.
ಉಭಯ ತಂಡಗಳಲ್ಲಿಯೂ ಸ್ಪೋಟಕ ಬ್ಯಾಟರ್ಗಳಿದ್ದು, ರನ್ ಮಳೆ ಸುರಿಸುವ ಸಾಧ್ಯತೆಯಿದೆ. ಮೊದಲ ಟಿ20 ಪಂದ್ಯವನ್ನು ಗೆಲ್ಲಲು ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಇದೆ. ಹೀಗಾಗಿ ಚೇಸಿಂಗ್ ಮಾಡುವ ತಂಡ ಗೆಲುವಿನ ಸಿಹಿ ಕಾಣಬಹುದು.
ಮಾಧ್ಯಮವೊಂದಕ್ಕೆ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಂಪಿಸಿಎ) ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, 'ಜೂನ್ ತಿಂಗಳಲ್ಲಿ ನಡೆದ ಮಧ್ಯಪ್ರದೇಶ ಲೀಗ್ನಲ್ಲಿ ಆಡಿದ 12 ಪಂದ್ಯಗಳಲ್ಲಿ ತಂಡಗಳು ನಾಲ್ಕು ಬಾರಿ 200 ಕ್ಕೂ ಹೆಚ್ಚು ರನ್ಗಳ್ನ ಕಲೆ ಹಾಕಿವೆ. ಇಲ್ಲಿನ ಪಿಚ್ಗಳು ಬ್ಯಾಟರ್ಗಳಿಗೆ ಸಹಕಾರಿಯಾಗಿದ್ದು, ಭಾನುವಾರವೂ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದ್ದಾರೆ.
ಈಗಾಗಲೇ ಗ್ವಾಲಿಯರ್ ತಲುಪಿರುವ ಭಾರತ ಟಿ20 ತಂಡ ಅಭ್ಯಾಸದಲ್ಲಿ ನಿರತವಾಗಿದೆ. ಮೊದಲ ನೆಟ್ ಸೆಷನ್ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಅವರು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕೋಚ್ ರನ್ ಅಪ್ ಮೇಲೆ ಗಮನ ಹರಿಸಿದರೆ ಪಾಂಡ್ಯ ತಮ್ಮ ಆ್ಯಕ್ಷನ್ ಮೇಲೆ ಗಮನ ಹರಿಸಿದ್ದಾರೆ. ಇದಲ್ಲದೇ, ಮಯಾಂಕ್ ಯಾದವ್ ಮತ್ತು ಅರ್ಷದೀಪ್ ಸೇರಿದಂತೆ ಇತರ ಆಟಗಾರರು ಕೂಡ ಬೌಲಿಂಗ್ ಕೋಚ್ ಗಮನ ಸೆಳೆದಿದ್ದಾರೆ.
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷದೀಪ್ ಸಿಂಗ್ , ಹರ್ಷಿತ್ ರಾಣಾ, ಮಯಾಂಕ್ ಯಾದವ್.
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂತೊ (ನಾಯಕ), ತಂಝೀದ್ ಹಸನ್ ತಮೀಮ್, ಪರ್ವೇಜ್ ಹೊಸೈನ್ ಅಮೋನ್, ತೌಹೀದ್ ಹೃದಯೋಯ್, ಮಹಮೂದ್ ಉಲ್ಲಾ, ಲಿಟನ್ ದಾಸ್ (ವಿಕೆಟ್ ಕೀಪರ್), ಝೆಕರ್ ಅಲಿ ಅನಿಕ್, ಮೆಹದಿ ಹಸನ್ ಮಿರಾಜ್, ಮೆಹದಿ ಹಸನ್, ರಿಶಾದ್ ಹೊಸೈನ್, ಮುಸ್ತಾಫಿಜುರ್ ಇಸ್ಲಾಂ, ತಸ್ರಿಕಿನ್, ತಾಸ್ರಿಕಿನ್ ಅಹ್ಮದ್ ಹಸನ್ ಸಾಕಿಬ್, ರಕಿಬುಲ್ ಹಸನ್.