ದೇಶದ ವಿವಿಧ ಹತ್ತು ನಗರಗಳಲ್ಲಿ 46 ದಿನಗಳ ಕಾಲ ನಡೆಯುವ ಕ್ರಿಕೆಟ್ ಆಟದ ದೊಡ್ಡ ಹಬ್ಬ ವಿಶ್ವಕಪ್ ಟೂರ್ನಮೆಂಟ್ ಈಗಾಗಲೇ ಆರಂಭವಾಗಿದೆ. ಶನಿವಾರದ (ಅ 7) ಹೊತ್ತಿಗೆ ಎರಡು ಪಂದ್ಯಗಳು ಮುಗಿದಿದೆ ಮತ್ತು ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾದ ವಿರುದ್ದ ಆಡಲಿದೆ.
ದೇಶ ವಿದೇಶಗಳ ರಾಜಕೀಯ ಮತ್ತು ರಾಜಕೀಯೇತರ ಪ್ರಮುಖ ವಿದ್ಯಮಾನಗಳು ನಡೆದಾಗ ಅದರ ಸುತ್ತ ಜ್ಯೋತಿಷಿಗಳು ಭವಿಷ್ಯವನ್ನು ನುಡಿಯುವುದು ಸಾಮಾನ್ಯ. ಅದರಲ್ಲಿ ಒಂದಷ್ಟು ಕರಾರುವಕ್ಕಾಗಿರುತ್ತದೆ, ಇನ್ನಷ್ಟು ನಿಜವಾಗಿರುವುದಿಲ್ಲ.

ಭಾರತದಲ್ಲಿ ಈಗ ಎಲ್ಲೆಲ್ಲೂ ಕ್ರಿಕೆಟ್ ಜ್ವರ, ಕ್ರಿಕೆಟ್ ಪ್ರೇಮಿಗಳು ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಟ್ರೋಫಿ ಎತ್ತುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಬಲಾಢ್ಯ ಆಸ್ಟ್ರೇಲಿಯಾ ಜೊತೆ ಇದೇ ಭಾನುವಾರ (ಅ 8) ಆಡಲಿದೆ.
ಈ ಬಾರಿಯ ವಿಶ್ವಕಪ್ ಯಾವ ದೇಶದ ಪಾಲಾಗಲಿದೆ? ಈ ಬಗ್ಗೆ ಕೆಲವು ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದಾರೆ. ಖ್ಯಾತ ಜ್ಯೋತಿಷಿ ಅನಿರುದ್ದ್ ಕುಮಾರ್ ಮಿಶ್ರಾ ಎನ್ನುವವರು ಈ ಬಗ್ಗೆ ಭವಿಷ್ಯವನ್ನು ಬರೆದು ಕೊಂಡಿದ್ದಾರೆ.
ಮೈಕ್ರೋ ಬ್ಲಾಗಿಂಗ್ ಸೈಟ್ X ನಲ್ಲಿ (ಹಿಂದಿನ ಟ್ವಿಟ್ಟರ್) ತನ್ನ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಮಿಶ್ರಾ ಭವಿಷ್ಯ ನುಡಿದಿದ್ದು, ಇದರ ಪ್ರಕಾರ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಲಿದೆ ಎನ್ನುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
"2011ರ ವಿಶ್ವಕಪ್ ಅನ್ನು ಭಾರತ ಗೆಲ್ಲಲಿದೆ ಎಂದು ಟೂರ್ನಮೆಂಟ್ ಆರಂಭವಾಗುವ ಒಂದೂವರೆ ತಿಂಗಳ ಮುಂಚಿತವಾಗಿಯೇ ನಾನು ಹೇಳಿದ್ದೆ. ಈಗ, ಮತ್ತೆ ಭವಿಷ್ಯ ನುಡಿಯುವಂತೆ ಸಾಕಷ್ಟು ಮನವಿಗಳು ಬಂದ ಹಿನ್ನಲೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ"ಎಂದು ಅನಿರುದ್ದ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಫೆಬ್ರವರಿ 26, 2011ರಲ್ಲಿ ತಾನು ನುಡಿದಿದ್ದ ಭವಿಷ್ಯದ ಸ್ಕ್ರೀನ್ ಶಾಟ್ ಅನ್ನು ಮಿಶ್ರಾ ಹಂಚಿಕೊಂಡಿದ್ದಾರೆ. 1,27,000 ಫಾಲೋವರ್ಸ್ ಅನ್ನು ಹೊಂದಿರುವ ಮಿಶ್ರಾ ಅವರ ಈ ಟ್ವೀಟಿಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ಓದುಗರು ನೀಡಿದ್ದಾರೆ.