ಕ್ರಿಕೆಟ್ ಮೈದಾನದಲ್ಲಿ ಸಾಮಾನ್ಯವಾಗಿ ಬ್ಯಾಟು ಚೆಂಡುಗಳ ಆಟ ನಡೆಯುತ್ತದೆ. ಆದರೆ ಈಗ ಕಾಲ ಬದಲಾಗಿದೆ. 22 ಯಾರ್ಡ್ ಸರ್ಕಲ್ನಲ್ಲಿ ಚದುರಂಗವನ್ನು ಚೆನ್ನಾಗಿ ಆಡಬಹುದು ಎಂಬುದು ತಿಳಿಯುತ್ತಿದೆ. ಚದುರಂಗದಾಟಕ್ಕೆ ಹೋಲಿಸಿ ನೋಡಿದಾಗ ಮೊದಲು ಚೆಸ್ ಆಟದ ಮಂತ್ರಿ, ಕ್ರಿಕೆಟ್ ತಂಡದ ನಾಯಕನಾಗಿರುತ್ತಿದ್ದ. ಆತನ ಅಣತಿಗೆ ಅನುಗಣವಾಗಿ ಉಳಿದ ಆಟಗಾರರು ತಮ್ಮ ಸ್ಥಾನವನ್ನು ಬದಲಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಚದುರಂಗದ ಆಟದ ಮಂತ್ರಿಯನ್ನೇ ಹೊರಗಿಟ್ಟು, ಟೀಮ್ ಇಂಡಿಯಾದ ಕೋಚ್ ತಾನೇ ಮಂತ್ರಿಯಾಗಲು ಹೋರಟಿದ್ದಾರಾ ಎಂಬ ಊಹಾಪೋಗಳು ಹರಿದಾಡಲು ಆರಂಭವಾಗಿವೆ. ಸೂಪರ್ ಸ್ಟಾರ್ ಸಂಸ್ಕೃತಿಗೆ ಕೌಂಟರ್ ಆಗಿ ಸೂಪರ್ ಕೋಚ್ ಸಂಸ್ಕೃತಿ ಬೆಳೆಯುತ್ತಿದೆಯಾ ಎಂಬ ಅನುಮಾನ ಆರಂಭವಾಗಿದೆ.
ಅಂದಹಾಗೆ ಈ ಅನುಮಾನ ಮೂಡಲ ಟೀಮ್ ಇಂಡಿಯಾದ ಈಗಿನ ಪರಿಸ್ಥಿತಿ ಬೆಸ್ಟ್ ಎಕ್ಸಾಮ್ಪಲ್. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಸಿಡ್ನಿಯಲ್ಲಿ ಟೆಸ್ಟ್ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರಿಗೆ ನೀವು ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟು ಕೊಟ್ಟಿರೋ ಅಥವಾ ನಿವೃತ್ತಿ ಪಡೆಯುತ್ತಿರೋ ಎಂದು ಕೇಳಿದಾಗ, ರೋಹಿತ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದರು. ನಾನು ತಂಡದ ಹಿತಕ್ಕಾಗಿ ಮಾತ್ರ ಸದ್ಯ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದೇನೆ. ಮುಂದಿನ ದಿನಗಳಲ್ಲಿ ಲಯಕ್ಕೆ ಮರಳಿ ತಂಡದ ಗೆಲುವಿನಲ್ಲಿ ಶ್ರಮಿಸುವೆ ಎಂದು ಹೇಳಿದ್ರು.

ಟೀಮ್ ಇಂಡಿಯಾದ ಬ್ಯಾಟಿಂಗ್ ಆಧಾರ ಸ್ಥಂಬ ಎಂದೇ ಖ್ಯಾತಿ ಪಡೆದಿದ್ದ ವಿರಾಟ್ ಕೊಹ್ಲಿ ಸಹ, ತಮಗೆ ಟೆಸ್ಟ್ ಕ್ರಿಕೆಟ್ ನೆಚ್ಚಿನ ಫಾರ್ಮೆಟ್ ಎಂದು ಹೇಳಿದ್ದರು. ಇವರ ಈ ಮಾತು ಕೇಳಿದ್ದ ಅಭಿಮಾನಿಗಳು ಇನ್ನು ಇವರು ಹೆಚ್ಚಿನ ದಿನಗಳ ಕಾಲ ಟೆಸ್ಟ್ ಆಡುತ್ತಾರೇ ಎಂದೇ ಭಾವಿಸಿದ್ದರು. ಆದರೆ ಈ ಅಭಿಮಾನಿಗಳಿಗೆ ಒಂದೇ ವಾರದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರು ಕ್ರಿಕೆಟ್ನ ಅಸಲಿ ಫಾರ್ಮೆಟ್ಗೆ ವಿದಾಯ ಹೇಳುತ್ತಾರೆ ಎಂದು ಭಾವಿಸಿರಲಿಲ್ಲ. ಒಂದು ವಾರದ ಅಂತರದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ಗಳಿಬ್ಬರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಟೀಮ್ ಇಂಡಿಯಾ ಬೇರೆ ತಂಡಗಳ ವಿರುದ್ಧ ಟೆಸ್ಟ್ ಆಡುತ್ತದೆ ಎಂದಾಗಲೇ, ತಂಡದಲ್ಲಿರುವ ಹೆಸರುಗಳನ್ನು ನೋಡಿದ್ರೆ ಎದುರಾಳಿಗಳಿಗೆ ನಡುಕ ಆರಂಭವಾಗುತ್ತಿತ್ತು. ಆದರೆ ಈಗ ತಂಡದಲ್ಲಿ ಜಸ್ಪ್ರಿತ್ ಬುಮ್ರಾ ಎಂಬ ಹೆಸರು ಬಿಟ್ಟರೆ ಉಳಿದ ಆಟಗಾರರಿಗೆ ವಿದೇಶಿ ಪಿಚ್ನಲ್ಲಿ ಆಡಿದ ಅನುಭವ ಹೆಚ್ಚಾಗಿಲ್ಲ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಮತ್ತೊಮ್ಮೆ ಚುಕ್ಕಾಣಿ ಹಿಡಿಯುವ ಆಸೆಯನ್ನು ವ್ಯಕ್ತ ಪಡಿಸಿದ್ದರು. ಆದರೆ ಇವರು ನಾಯಕರಾಗುವುದು ಕೋಚ್ ಸಾಹೇಬರಿಗೆ ಇಷ್ಟ ಇರಲಿಲ್ಲ. ಕ್ರಿಕ್ಬ್ಲಾಗರ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ, ಕೋಚ್ ವರ್ತನೆಯಿಂದ ಮನನೊಂದು ವಿದಾಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬರುತ್ತಿದೆ. ಕೊನೆಗೆ ಗೌತಮ್ ಗಂಭೀರ್ ಅವರ ಹಠಮಾರಿತನ ವಿರಾಟ್ ಕೊಹ್ಲಿ ಟೆಸ್ಟ್ ನಿಂದ ನಿವೃತ್ತಿ ಹೊಂದುವಂತೆ ಮಾಡಿತು.
ಟೀಮ್ ಇಂಡಿಯಾದ ಕೋಚ್ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ಹಾಗೂ ಬಾರ್ಡರ್ ಗವಾಸ್ಕರ್ ಸರಣಿಯ ಸೋಲನ್ನು ಮತ್ತೆ ಮರುಕಳುಹಿಸಿದಂತೆ ಮಾಡಲು ಯಂಗ್ ಟೀಮ್ ಕಟ್ಟಲು ಬಯಸಿದ್ದರು ಎಂದು ತಿಳಿದುಬಂದಿದೆ. ಇನ್ನು ಹೊಸ ನಾಯಕ ಶುಭಮನ್ ಗಿಲ್ ಗಂಭೀರ್ ಅವರ ಮಾತುಗಳನ್ನು ಕೇಳುತ್ತಾನೆ ಎಂದು ಅವರಿಗೆ ಪಟ್ಟವನ್ನು ಕಟ್ಟುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನು ಕೋಚ್ ನಿರ್ಧಾರವನ್ನು ಗಿಲ್ ಪ್ರಶ್ನಿಸುವ ಸಾಧ್ಯತೆ ಕಡಿಮೆ ಎಂದು ಭಾವಿಸಿ ಇವರಿಗೆ ಪಟ್ಟ ಕಟ್ಟಬಹುದಾಗಿದೆ. ಇನ್ನು ಗೌತಮ್ ಗಂಭೀರ್ ಕೋಚ್ ಸ್ಥಾನವನ್ನು ಅಲಂಕರಿಸಿದಾಗಿನಿಂದಲೂ ಹಿರಿಯ ಆಟಗಾರರು ಹಾಗೂ ಅವರ ನಡುವೆ ಮುಸುಕಿನ ಯುದ್ಧ ನಡೆಯುತ್ತಲೇ ಇತ್ತು. ಈಗ ಇದಕ್ಕೆಲ್ಲಾ ಫುಲ್ ಸ್ಟಾಪ್ ಬಿದ್ದಂತೆ ಕಾಣುತ್ತಿದೆ.