ನವದೆಹಲಿ, ಡಿ.04: ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಸ್ಮರಣಿಕೆ ನೀಡಿ ಸನ್ಮಾನಿಸಿತು. ಈ ಸಂದರ್ಭದಲ್ಲಿ ಸೆಹ್ವಾಗ್ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅದರೆ, ನಾಯಕ ಧೋನಿ ಅವರ ಹೆಸರನ್ನು ಅಪ್ಪಿ ತಪ್ಪಿ ಕೂಡಾ ಹೇಳಲಿಲ್ಲ.
ಭಾರತದ ಮಾಜಿ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹಾಗೂ ಸಚಿನ್ ತೆಂಡೂಲ್ಕರ್ ನನ್ನ ವೃತ್ತಿಜೀವನದಲ್ಲಿ ಮಾರ್ಗದರ್ಶನ ನೀಡಿದರು. ಅಜಯ್ ಶರ್ಮ, ಅಜಯ್ ಜಡೇಜ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಸೆಹ್ವಾಗ್ ಕೃತಜ್ಞತೆ ಸಲ್ಲಿಸಿದರು. [ಮಗನಿಗೆ ಸೆಹ್ವಾಗ್ ಫೆರಾರಿ ಆಫರ್ ಕೊಟ್ಟಿದ್ದೇಕೆ?]

ಜಾಣ ಮರೆವು ಏಕೆ?: ಆರು ವರ್ಷಗಳ ಕಾಲ ಎಂ.ಎಸ್. ಧೋನಿ ನಾಯಕತ್ವದಲ್ಲಿ ಆಡಿದ್ದರೂ ಧೋನಿ ಹೆಸರನ್ನು ಉಲ್ಲೇಖಿಸಲಿಲ್ಲ.
ಕೋಟ್ಲಾ ಸ್ಟೇಡಿಯಂನಲ್ಲಿ ನಾಲ್ಕನೆ ಟೆಸ್ಟ್ ಆರಂಭಕ್ಕೆ ಮೊದಲು ನಡೆದ ಸರಳ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಸೆಹ್ವಾಗ್ ಅವರಿಗೆ ಸ್ಮರಣ ಫಲಕ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸೆಹ್ವಾಗ್ ಅವರ ತಾಯಿ ಕೃಷ್ಣ ಸೆಹ್ವಾಗ್, ಪತ್ನಿ ಆರತಿ, ಇಬ್ಬರು ಪುತ್ರರಾದ ಆರ್ಯವೀರ್ ಹಾಗೂ ವೇದಾಂತ್ ಜೊತೆಗಿದ್ದರು.
ತನ್ನ ವಿದಾಯದ ಭಾಷಣದಲ್ಲಿ ಸೆಹ್ವಾಗ್ ಅವರು ಬಿಸಿಸಿಐಯಿಂದ ಆರಂಭಿಸಿ ಡಿಡಿಸಿಎ ವರೆಗಿನ ಎಲ್ಲರನ್ನೂ ಸ್ಮರಿಸಿಕೊಂಡರು. ಅಂಡರ್-19 ತಂಡದಲ್ಲಿ ತನಗೆ ಮೊದಲು ಕೋಚ್ ನೀಡಿದ್ದ ಎ.ಎನ್. ಶರ್ಮ ಹಾಗೂ ಸತೀಶ್ ಶರ್ಮರನ್ನು ನೆನಪಿಸಿಕೊಂಡರು. ಅರುಣ್ ಜೇಟ್ಲಿ, ರಣಬೀರ್ ಸಿಂಗ್ ಮಹೇಂದ್ರ, ಶ್ರೀನಿವಾಸನ್ ಹೆಸರುಗಳು ಕೇಳಿ ಬಂದಿತು.

14 ವರ್ಷಗಳ ವೃತ್ತಿಜೀವನದಲ್ಲಿ ಫಿಸಿಯೋ ಹಾಗೂ ಟ್ರೈನರ್ಗಳ ಕೊಡುಗೆಯನ್ನು ಉಲ್ಲೇಖಿಸಿದರು. ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಎರಡು ಬಾರಿ ತ್ರಿಶತಕವನ್ನು ಸಿಡಿಸಿದ್ದರೂ 400 ರನ್ ಗಳಿಸಿ ಬ್ರಿಯಾನ್ ಲಾರಾ ದಾಖಲೆ ಮುರಿಯಲು ಆಗಲಿಲ್ಲ ಎಂಬ ಬೇಸರವಿದೆ. ಚೊಚ್ಚಲ ಟೆಸ್ಟ್ ಶತಕ ನನ್ನ ಪಾಲಿಗೆ ಸ್ಮರಣೀಯ ಎಂದರು. 104 ಟೆಸ್ಟ್ ಪಂದ್ಯ, 251 ಏಕದಿನ ಪಂದ್ಯ, 19 ಟಿ 20 ಪಂದ್ಯಗಳನ್ನಾಡಿದ್ದಾರೆ.
ಆದರೆ, ಸೆಹ್ವಾಗ್ ಅವರು ನಿವೃತ್ತಿ ಹೊಂದಿದಾಗ ಸೆಹ್ವಾಗ್ ಬಗ್ಗೆ ಟ್ವೀಟ್ ಮಾಡಿದ್ದ ಧೋನಿ ಅವರು ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಗೆ ಸೆಹ್ವಾಗ್ ರನ್ನು ಹೋಲಿಸಿದ್ದರು. ನಿವೃತ್ತಿ ಹಾಗೂ ತಂಡದಲ್ಲಿ ಆಯ್ಕೆಯಾಗದಿರುವುದಕ್ಕೆ ಧೋನಿ ಅವರೇ ಕಾರಣ ಎಂದು ಸೆಹ್ವಾಗ್ ಅವರ ಅಭಿಮಾನಿಗಳ ವಾದ. ಒಟ್ಟಾರೆ, ಇಬ್ಬರ ನಡುವಿನ ಮುನಿಸು ಇನ್ನೂ ಆರಿಲ್ಲ. (ಒನ್ ಇಂಡಿಯಾ ಸುದ್ದಿ)