ಭಾರತವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. 5 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದ ಸೋಲನ್ನು ಭಾರತ ಎದುರಿಸಬೇಕಾಯಿತು. ಸಿಡ್ನಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಕಾಂಗರೂ ಪಡೆ 6 ವಿಕೆಟ್ಗಳ ಜಯ ಸಾಧಿಸಿತ್ತು. ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ದೊಡ್ಡ ಹಿನ್ನಡೆ ಅನುಭವಿಸಿತು. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಮಾಡಿದರು, ಆದರೆ ಅವರು ಬೌಲಿಂಗ್ ಮಾಡಲು ಬರಲಿಲ್ಲ. ಬುಮ್ರಾ ಅನುಪಸ್ಥಿಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಒಟ್ಟಿಗೆ ಬೌಲಿಂಗ್ ದಾಳಿ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ನೀಡಿದ 162 ರನ್ಗಳ ಗೆಲುವಿನ ಗುರಿಯನ್ನು ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಬೆನ್ನಟ್ಟಿತ್ತು.
ಜಸ್ಪ್ರೀತ್ ಬುಮ್ರಾ ಸಿಡ್ನಿ ಟೆಸ್ಟ್ ಪಂದ್ಯದ ಎರಡನೇ ದಿನ ಮೈದಾನದಿಂದ ಹೊರ ನಡೆದರು. ಬಮ್ರಾ ಏಕೆ ಹೊರ ನಡೆದರು, ಎಂಬುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆಯಾಗಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬಮ್ರಾ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಸತತವಾಗಿ ಬೌಲಿಂಗ್ ಮಾಡಿದ ಕಾರಣ ಬುಮ್ರಾ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಎಂಆರ್ಐ ಸ್ಕ್ಯಾನ್ ಮಾಡಿಸಲು ಬುಮ್ರಾ ಪಂದ್ಯದ ಮಧ್ಯೆದಲ್ಲೇ ಹೊರ ನಡೆದಿದ್ದರು. ನಂತರ ಬಂದು ಬ್ಯಾಟಿಂಗ್ ಮಾಡಿದರೂ, ಬೌಲಿಂಗ್ ಮಾಡಲಿಲ್ಲ.

ಜಸ್ಪ್ರೀತ್ ಬುಮ್ರಾ ಅವರು ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿದರು. ಹೀಗಾಗಿ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ಬುಮ್ರಾ ಬೌಲಿಂಗ್ ಮಾಡದಿರಲು ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕೆಲವೊಮ್ಮೆ ನಿಮ್ಮ ದೇಹವನ್ನು ಕೇಳಬೇಕಾಗುತ್ತದೆ. ಸಿಡ್ನಿ ಪಿಚ್ ಸರಣಿಯ ಅತ್ಯಂತ ಶಕ್ತಿಶಾಲಿ ಪಿಚ್. ಇಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗದೆ ನಿರಾಸೆಯಾಗಿದೆ ಎಂದು ಬುಮ್ರಾ ಬೇಸರ ಹೊರಹಾಕಿದ್ದಾರೆ.
ಸಿಡ್ನಯಲ್ಲಿ ಬೌಲಿಂಗ್ ಮಾಡದಿರುವುದು ಸ್ವಲ್ಪ ನಿರಾಸೆಯ ಸಂಗತಿಯಾಗಿದೆ. ಆದರೆ ಕೆಲವೊಮ್ಮೆ ನಿಮ್ಮ ದೇಹವನ್ನು ಗೌರವಿಸಬೇಕು. ನಿಮ್ಮ ದೇಹವನ್ನು ಹೋರಾಡಲು ಸಾಧ್ಯವಿಲ್ಲ ಎಂದಿದ್ದಾರೆ. ದೇಹ ಧಣಿದಾಗ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂಬುದು ಇದರರ್ಥ. ಸರಣಿಯುದ್ದಕ್ಕೂ ಟೀಮ್ ಇಂಡಿಯಾ ಪರ ಬುಮ್ರಾ ಏಕಾಂಗಿಯಾಗಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.
ಪರ್ತ್ ಮತ್ತು ಸಿಡ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಬುಮ್ರಾ, ಕಲಿಕೆಗಳು ಭವಿಷ್ಯದಲ್ಲಿ ನಮಗೆ ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ. ಇಡೀ ಸರಣಿಯಲ್ಲಿ ಕಠಿಣ ಪೈಪೋಟಿ ಇತ್ತು. ಆಟದಲ್ಲಿ ದೀರ್ಘಕಾಲ ಉಳಿಯುವುದು, ಒತ್ತಡ ಹೇರುವುದು, ಒತ್ತಡವನ್ನು ತಡೆದುಕೊಳ್ಳುವುದು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಆಟವಾಡುವುದು ಮುಖ್ಯ. ನೀವು ಸಂದರ್ಭಗಳಿಗೆ ಹೊಂದಿಕೊಳ್ಳಬೇಕು ಎಂದು ತಿಳಿಸಿದ್ದಾರೆ.