ಟೀಮ್ ಇಂಡಿಯಾ ಆಟಗಾರರ ಮೊದಲ ಬ್ಯಾಚ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದೆ. ಈ ಪ್ರವಾಸದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದಲ್ಲಿ ಯುವ ಮತ್ತು ಅನುಭವಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ಸರಣಿಗೆ ಸ್ಟಾರ್ ವೇಗದ ಬೌಲರ್ಗಳಾದ ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶದೀಪ್ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಅಭಿಮಾನಿಗಳಿಗೆ ಅಚ್ಚರಿಯ ಆಯ್ಕೆಗಳಾಗಿವೆ. ಈ ಕುರಿತು ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮಾಹಿತಿ ನೀಡಿದ್ದಾರೆ.
ಗೌತಮ್ ಗಂಭೀರ್ ಸೋಮವಾರ ಭಾರತ ತಂಡದ ಎರಡನೇ ತಂಡದೊಂದಿಗೆ ಪ್ರಯಾಣಿಸಿದ್ದಾರೆ. ಇದಕ್ಕೂ ಮುನ್ನಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶದೀಪ್ ಅವರನ್ನು ಆಯ್ಕೆ ಮಾಡಿರುವುದು ಏಕೆ ಎಂಬುದನ್ನು ಗೌತಮ್ ಗಂಭೀರ್ ವಿವರಿಸಿದ್ದಾರೆ. ಹರ್ಷಿತ್ ರಾಣಾ ಅವರು ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯಗಳಿಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಿಲ್ಲ.

ರಣಜಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ ಹರ್ಷಿತ್ ರಾಣಾ ಉತ್ತಮ ಪ್ರದರ್ಶನ ನೀಡಿದರು. 5 ವಿಕೆಟ್ ಪಡೆಯುವುದರ ಜೊತೆಗೆ ಅರ್ಧಶತಕವನ್ನು ಬಾರಿಸಿದ್ದರು. ಹೀಗಾಗಿ ಅವರಿಗೆ ಬೌಲಿಂಗ್ ಮಾಡಿದ ಅನುಭವ ಸಾಕಷ್ಟಿರುವ ಕಾರಣ ಅವರನ್ನು ಇನ್ನೊಂದು ಫಸ್ಟ್ ಕ್ಲಾಸ್ ಪಂದ್ಯವನ್ನಾಡಲು ಕಳುಹಿಸುವ ಅಗತ್ಯವಿಲ್ಲ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ನ ಭಾರವನ್ನು ಹೊರಲು ಜಸ್ಪ್ರೀತ್ ಬುಮ್ರಾ ಮೇಲೆ ಹೆಚ್ಚಿನ ಒತ್ತಡವಿದೆ. ಆದರೆ ಅನನುಭವಿ ವೇಗದ ಬೌಲರ್ಗಳಾದ ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶದೀಪ್ ಅವರ ಬೌಲಿಂಗ್ ದಾಳಿಯು ಉತ್ತಮವಾಗಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ನಮ್ಮಲ್ಲಿ ಉತ್ತಮ ಗುಣಮಟ್ಟದ ಬೌಲರ್ಗಳಿದ್ದಾರೆ. ಪಿಚ್ನಲ್ಲಿ ಚೆಂಡನ್ನು ಹೊಡೆಯಬಲ್ಲ ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಂತಹ ಎತ್ತರದ ಬೌಲರ್ಗಳು ನಮ್ಮಲ್ಲಿದ್ದಾರೆ. ಎಲ್ಲಾ ಐವರು ಆಟಗಾರರು ವಿಭಿನ್ನ ಪ್ರತಿಭೆಗಳನ್ನು ಹೊಂದಿದ್ದಾರೆ. ಇದು ನಮ್ಮ ವೇಗದ ಬೌಲಿಂಗ್ ದಾಳಿಯನ್ನು ಅತ್ಯಂತ ಶಕ್ತಿಯುತವಾಗಿಸಿದೆ. ಮುಂದಿನ 10 ದಿನಗಳಲ್ಲಿ ಆಸ್ಟ್ರೇಲಿಯಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ತಂಡಕ್ಕೆ ಮುಖ್ಯವಾಗಿದೆ. ಆಸ್ಟ್ರೇಲಿಯಾಕ್ಕೆ ಹಲವು ಬಾರಿ ಬಂದಿರುವ ಅನುಭವಿ ಆಟಗಾರರು ನಮ್ಮಲ್ಲಿದ್ದಾರೆ. ಅವರ ಅನುಭವ ಯುವ ಆಟಗಾರರಿಗೂ ಉಪಯುಕ್ತವಾಗಲಿದೆ. ಈ 10 ದಿನಗಳು ಬಹಳ ಮುಖ್ಯವಾಗಲಿವೆ. ಆದರೆ ನವೆಂಬರ್ 22ರ ಬೆಳಿಗ್ಗೆ ನಾವು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಮೊದಲ ಬಾಲ್ನಿಂದಲೇ ಅಬ್ಬರಿಸಬೇಕು ಎಂದು ಗಂಭೀರ್ ತಿಳಿಸಿದ್ದಾರೆ.