ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ನಡುವೆ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಒಂದು ವೇಳೆ ತವರಿನಲ್ಲಿ ವಿದಾಯ ಪಂದ್ಯವಾಡಲು ಅವಕಾಶ ನೀಡದೇ ಇದ್ದರೆ, ಭಾರತದ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್ಯಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ ನಿರ್ಧಾರವನ್ನು ತಿಳಿಸಿದ್ದಾರೆ. ಇದಾದ ಬಳಿಕ ಅವರು ಬಾಂಗ್ಲಾದೇಶಕ್ಕೆ ಮರಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ ಮುಗಿಲೆದ್ದಿದೆ. ಈ ಹಿಂಸಾಚಾರದ ಕಲೆ ಬಾಂಗ್ಲಾದೇಶ ಕ್ರಿಕೆಟ್ಗೆ ಅಂಟಿಕೊಂಡಿದ್ದು, ಹಲವು ಬದಲಾವಣೆಗಳು ನಡೆದಿವೆ. ಮತ್ತೊಂದೆಡೆ ರಾಜಕೀಯ ಬಿಕ್ಕಟ್ಟಿನಿಂದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಆಗಸ್ಟ್ 5 ರಂದು ಅಡಾಬೋರ್ನ ರಿಂಗ್ ರೋಡ್ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗಾರ್ಮೆಂಟ್ಸ್ ಕೆಲಸಗಾರ ಮೊಹಮ್ಮದ್ ರುಬೆಲ್ ಎಂಬಾತನನ್ನು ಪೂರ್ವ ಯೋಜಿತ ಗುಂಪೊಂದು ಹತ್ಯೆ ಮಾಡಿತ್ತು.
ಮೃತ ರುಬೆಲ್ ತಂದೆ ರಫೀಕುಲ್ ಇಸ್ಲಾಂ ಅವರು ಆಗಸ್ಟ್ 7 ರಂದು ಪ್ರಕರಣ ದಾಖಲಿಸಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಅಲ್ ಹಸನ್ ಅವರ ವಿರುದ್ಧ ಆಗಸ್ಟ್ 22ರ ರಾತ್ರಿ ಢಾಕಾದ ಅಡ್ಬೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶಕೀಬ್ 28ನೇ ಆರೋಪಿ ಆಗಿದ್ದು, ಅವರಿಗೆ ಪ್ರಾಣ ಬೆದರಿಕೆಗಳು ಕೂಡ ಇತ್ತೀಚೆಗೆ ಬರುತ್ತಿವೆ. ಹೀಗಾಗಿ ಅವರು ಸೂಕ್ತ ಭದ್ರತೆ ವ್ಯವಸ್ಥೆಯ ಭರವಸೆ ಸಿಗದಿದ್ದರೆ ಭಾರತ ವಿರುದ್ಧದ ಟೆಸ್ಟ್ ಸರಣಿಯ ನಂತರ ಬಾಂಗ್ಲಾದೇಶಕ್ಕೆ ಹೋಗುವುದಿಲ್ಲ ಎಂದು ಶಕೀಬ್ ತಿಳಿಸಿದ್ದಾರೆ.
2024ರ ಜನವರಿಯಲ್ಲಿ ಅವಾಮಿ ಲೀಗ್ ಪಕ್ಷದಿಂದ ಸಂಸದರಾಗಿ ಶಕೀಬ್ ಅಲ್ ಹಸನ್ ಆಯ್ಕೆಯಾಗಿದ್ದರು. ಇದಾದ ನಂತರ ಮೀಸಲಾತಿ ವಿಚಾರವಾಗಿ ಶುರುವಾದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಪರ ಶಕೀಬ್ ತಮ್ಮ ನಿಲುವನ್ನು ವ್ಯಕ್ತಪಡಿಸಲಿಲ್ಲ. ಇದಕ್ಕಾಗಿ ಅವರ ವಿರುದ್ಧ ಬಾಂಗ್ಲಾದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅವರು ಬಾಂಗ್ಲಾದೇಶಕ್ಕೆ ಮರಳುವುದು ಸಮಸ್ಯೆಯಲ್ಲ. ಆದರೆ ಅಲ್ಲಿಂದ ಹೊರಬರುವುದು ದೊಡ್ಡ ಸಮಸ್ಯೆ.