ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಈ ವೇಳೆ ಟೀಮ್ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇನ್ನು ಬ್ರಿಸ್ಬೇನ್ ಪಂದ್ಯ ಡ್ರಾದಲ್ಲಿ ಅಂತ್ಯವಾದರೆ, ಆಡಿಲೇಡ್ ಹಾಗೂ ಮೆಲ್ಬೋರ್ನ್ ಅಂಗಳದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಟೀಮ್ ಇಂಡಿಯಾದ ಈ ನಿರಾಶಾದಾಯಕ ಪ್ರದರ್ಶನದ ಹಿಂದೆ ತಂಡದ ಕಳಪೆ ಬ್ಯಾಟಿಂಗ್ ಎದ್ದು ಕಾಣುತ್ತಿದೆ. ಹೀಗಾಗಿ ಸ್ಟಾರ್ ಬ್ಯಾಟರ್ಗಳ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ.
ಶುಕ್ರವಾರ ಟೀಮ್ ಇಂಡಿಯಾ ಸಿಡ್ನಿಯಲ್ಲಿ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಆಡಲಿದೆ. ಈ ಟೆಸ್ಟ್ ಸರಣಿ ಟೀಮ್ ಇಂಡಿಯಾಗೆ ಬಹು ಮುಖ್ಯವಾಗಿದೆ. ಈ ಸರಣಿಯ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇ ಬೇಕು ಎಂಬ ಉದ್ದೇಶದಿಂದ ಹಲವು ಬದಲಾವಣೆಗಳನ್ನು ಮಾಡುತ್ತಿದೆ.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೊನೆಯ ಟೆಸ್ಟ್ನಲ್ಲಿ ಮೈದಾನದಿಂದ ದೂರ ಉಳಿಯಲಿದ್ದಾರೆ. ರೋಹಿತ್ ಅವರ ಬದಲಿಗೆ ಜಸ್ಪ್ರಿತ್ ಬುಮ್ರಾ ಅವರನ್ನು ನಾಯಕರನ್ನಾಗಿ ಕಾಣಬಹುದಾಗಿದೆ. ಈಗಾಗಲೆ ಬುಮ್ರಾ ಪರ್ತ್ ಟೆಸ್ಟ್ನಲ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿ, ಗೆಲುವು ಸಾಧಿಸುವಲ್ಲಿ ಶ್ರಮಿಸಿದ್ದರು. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಇವರ ಮೇಲೆ ನಂಬಿಕೆ ಇಟ್ಟಿದೆ.
ಇನ್ನು ರೋಹಿತ್ ಶರ್ಮಾ ಪ್ರಸಕ್ತ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೈ ಬಿಡುವ ಸಾಧ್ಯತೆ ಇದೆ. ಹಾಗಿದ್ದರೆ ರೋಹಿತ್ ಶರ್ಮಾ ಅವರಂತೆ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು ಸಹ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇವರನ್ನು ತಂಡದಲ್ಲಿ ಉಳಿಸಿಕೊಂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ನಿಶ್ಚಿತವಾಗಿ ರೋಹಿತ್ ಶರ್ಮಾ ಈ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 31 ರನ್ ಕಲೆ ಹಾಕಿದ್ದಾರೆ. ಹೀಗಾಗಿ ಇವರು ತಮ್ಮ ಸ್ಥಾನವನ್ನು ಕಳೆದು ಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಈ ಸರಣಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಏನು ಮಾಡಿಲ್ಲ. ಪರ್ತ್ ಟೆಸ್ಟ್ನಲ್ಲಿ ಶತಕ ಬಾರಿಸಿದ್ದು ಬಿಟ್ಟರೆ, ಉಳಿದಿದ್ದೆಲ್ಲಾ ಬರೀ ನಿರಾಸೆ. ಇವರು ಆಡಿದ 4 ಪಂದ್ಯಗಳಲ್ಲಿ ಒಟ್ಟು 167 ರನ್ ಸಿಡಿಸಿದ್ದಾರೆ. ಹೀಗಾಗಿ ಫ್ಯಾನ್ಸ್ ರೋಹಿತ್ಗೆ ಒಂದು ನ್ಯಾಯ, ವಿರಾಟ್ಗೆ ಒಂದು ನ್ಯಾಯ ಎಂದು ಹೇಳುತ್ತಿದ್ದಾರೆ.