ಭಾರತ ಕ್ರಿಕೆಟ್ ತಂಡದ ಆಟಗಾರರು ಸದ್ಯ ಬಿಡುವಿನಲ್ಲಿದ್ದಾರೆ. ಈ ವೇಳೆ ಆಟಗಾರರು ದೇಶೀಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನ ಮಾದರಿಯ ಈ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಭಾಗವಹಿಸಿದ್ದಾರೆ. ಇದೇ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸಹ ಆಡುತ್ತಿದ್ದಾರೆ. ಈ ಇಬ್ಬರೂ ಸ್ಟಾರ್ಗಳು ಈಗಾಗಲೇ ಈ ಟೂರ್ನಿಯ ಮೊದಲ ಎರಡು ಪಂದ್ಯದಲ್ಲಿ ಆಡಿ ಅಬ್ಬರಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ವಿಜಯ್ ಹಜಾರೆ ಟೂರ್ನಿಯ ಮೂರನೇ ಪಂದ್ಯ ಆಡದಿರಲು ಕಾರಣ ಏನು ಎಂಬುದನ್ನು ಅಭಿಮಾನಿಗಳು ಹುಡುಕುತ್ತಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಹಾಗೂ ಮುಂಬೈ ಪರ ರೋಹಿತ್ ಶರ್ಮಾ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದರು. ಇವರಿಬ್ಬರೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಎಲ್ಲ ತಂಡಗಳು ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ವೇಳೆ ರೋ-ಕೊ ಜೋಡಿ ಮಾತ್ರ ಅಂಗಳಕ್ಕೆ ಇಳಿದಿಲ್ಲ. ಇದಕ್ಕೆ ಕಾರಣ ಏನು ಎಂಬುದೆ ಈಗ ಅಭಿಮಾನಿಗಳ ಮಧ್ಯೆ ಚರ್ಚಾ ವಸ್ತುವಾಗಿದೆ.

ದೆಹಲಿ ಹಾಗೂ ಮುಂಬೈ ತಂಡಗಳು ಇಂದು ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಕಣಕ್ಕೆ ಇಳಿದವೆ. ಆದರೆ ಈ ವೇಳೆ ತಂಡದಲ್ಲಿ ಈ ಇಬ್ಬರೂ ಸ್ಟಾರ್ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬಿಸಿಸಿಐ ಇತ್ತೀಚಿಗೆ ಭಾರತದ ಪರ ಆಡುವ ಪ್ರತಿ ಆಟಗಾರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಆಡಬೇಕು ಎಂದು ಸೂಚನೆ ನೀಡಿತ್ತು. ಬಿಸಿಸಿಐ ನಿಗದಿ ಪಡಿಸಿದ ಪಂದ್ಯಗಳನ್ನು ಆಡಿದ ಬಳಿಕ, ಆಟಗಾರರು ಬಯಸಿದಲ್ಲಿ ಟೂರ್ನಿಯಲ್ಲಿ ಮುಂದುವರೆಯಬಹುದಾಗಿದೆ.
ಬಿಸಿಸಿಐ ನಿಯಮಗಳ ಅನುಸಾರ ವಿರಾಟ್ , ರೋಹಿತ್ ಇಬ್ಬರೂ ತಲಾ ಎರಡು ವಿಜಯ್ ಹಜಾರೆ ಟ್ರೋಫಿಯ ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಇವರಿಗೆ ಮುಂದಿನ ಪಂದ್ಯಗಳನ್ನು ಆಡುವ ಅವಶ್ಯಕತೆ ಇಲ್ಲ. ಇನ್ನು ವಿರಾಟ್ ಕೊಹ್ಲಿ ಜ.6 ರಂದು ನಡೆಯಲಿರುವ ದೆಹಲಿ ಹಾಗೂ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಸೀಮಿತ ಓವರ್ಗಳ ಪಂದ್ಯ ಜನವರಿ 11ಕ್ಕೆ ಆರಂಭವಾಗಲಿದೆ. ಈ ಸರಣಿಗಾಗಿ ಇನ್ನು ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿಲ್ಲ. ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಬ್ಬರೂ ಆಡುವುದು ಪಕ್ಕಾ ಆದಂತೆ ಆಗಿದೆ. ಭಾರತದಲ್ಲೇ ಸರಣಿಗಳು ನಡೆಯಲಿದ್ದು, ಅಭಿಮಾನಿಗಳು ಈ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯಗಳಲ್ಲಿ ವಿರಾಟ್, ರೋಹಿತ್ ಜೋಡಿ ಅಬ್ಬರದ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಿತ್ತು.