ಭಾರತ ಮತ್ತು ಇಂಗ್ಲೆಂಡ್ ನಡುವೆ ಫೆಬ್ರವರಿ 22 ರಿಂದ ಐದು ಟಿ20 ಪಂದ್ಯಗಳ ಸರಣಿ ಆರಂಭವಾಗಲಿದೆ. ಶನಿವಾರ ತಡರಾತ್ರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ.
ಆದರೆ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಆಯ್ಕೆದಾರರು ಮತ್ತು ಬಿಸಿಸಿಐ ಭಾರಿ ಅನ್ಯಾಯ ಮಾಡಿರುವುದಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಘೋಷಣೆಯಾದಾಗ ಹಾರ್ದಿಕ್ ಪಾಂಡ್ಯ ಅವರಿಂದ ಉಪನಾಯಕತ್ವವನ್ನು ಬಿಸಿಸಿಐ ಆಯ್ಕೆ ಸಮಿತಿ ಕಿತ್ತುಕೊಂಡದ್ದೇ ಎಂದು ಆರೋಪ ಮಾಡುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಈ ಹಿಂದೆ ಟೀಮ್ ಇಂಡಿಯಾದ ಉಪನಾಯಕರಾಗಿದ್ದರು. ಆದರೆ ಈಗ ಅವರು ತಂಡದ ಉಪನಾಯಕರಾಗಿಲ್ಲ. ಅವರ ಸ್ಥಾನಕ್ಕೆ ಬಿಸಿಸಿಐ ಮತ್ತು ಆಯ್ಕೆಗಾರರು ಅಕ್ಷರ್ ಪಟೇಲ್ ಅವರನ್ನು ಭಾರತ ತಂಡದ ಉಪನಾಯಕರನ್ನಾಗಿ ನೇಮಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕತ್ವವನ್ನೂ ವಹಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ನಾಯಕರಾಗುವ ಮೊದಲು ಹಾರ್ದಿಕ್ ಭಾರತ ತಂಡದ ಟಿ20 ನಾಯಕರಾಗಿದ್ದರು. 2024ರ ಟಿ20 ವಿಶ್ವಕಪ್ಗೂ ಮುನ್ನ ಹಾರ್ದಿಕ್ ಟಿ20 ತಂಡದ ನಾಯಕರಾಗಿದ್ದರು.
ಅವರು ವಿಶ್ವಕಪ್ 2024ರಲ್ಲಿ ಭಾರತ ತಂಡವನ್ನು ನಾಯಕನ್ನಾಗಿ ಮುನ್ನಡೆಸುವ ನಿರೀಕ್ಷೆಯಿತ್ತು. ಆದರೆ ಇದ್ದಕ್ಕಿದ್ದಂತೆ ರೋಹಿತ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು. ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ 2024ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಟಿ20 ವಿಶ್ವಕಪ್ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದರು. ಈ ಸಂದರ್ಭದಲ್ಲೂ ಟೀಮ್ ಇಂಡಿಯಾದ ಟಿ20 ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿರಲಿಲ್ಲ.
ಸೂರ್ಯಕುಮಾರ್ ಯಾದವ್ ನಾಯಕತ್ವ ನೀಡಲಾಗಿತ್ತು. ಆದರೆ ಹಾರ್ದಿಕ್ ಅವರನ್ನು ಟೀಮ್ ಇಂಡಿಯಾದ ಉಪನಾಯಕನನ್ನಾಗಿ ಮಾಡಲಾಯಿತು. ಇದೀಗ ಈ ಜವಾಬ್ದಾರಿಯನ್ನು ಹಾರ್ದಿಕ್ ಅವರಿಂದ ಕಸಿದುಕೊಳ್ಳಲಾಗಿದೆ. ಈಗ ಅವರು ತಂಡದಲ್ಲಿ ಆಲ್ರೌಂಡರ್ ಆಟಗಾರನಾಗಿ ಮಾತ್ರ ಆಡುತ್ತಿದ್ದಾರೆ. ಏಕೆಂದರೆ ಉಪನಾಯಕತ್ವ ಈಗ ಅಕ್ಷರ್ ಪಟೇಲ್ ಬಳಿ ಇದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಉಪನಾಯಕನ್ನಾಗಿ ಮಾಡದಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮತ್ತು ಆಯ್ಕೆದಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಅವರು ಅನೇಕ ಪ್ರಮುಖ ಸಂದರ್ಭಗಳಲ್ಲಿ ಗಾಯಗೊಳ್ಳುವುದರಿಂದ ತಂಡದೊಂದಿಗೆ ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಆದರೆ ನಾಯಕ ಯಾವಾಗಲೂ ತಂಡದೊಂದಿಗೆ ಇರಬೇಕು. ಹಾರ್ದಿಕ್ ಗಾಯ ಮತ್ತು ಫಿಟ್ನೆಸ್ನಿಂದ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವಕ್ಕೆ ಸೂರ್ಯ ಉತ್ತಮ ಆಯ್ಕೆಯಾಗಿದ್ದಾರೆ ಎಂದಿರುವುದಾಗಿ ವರದಿಗಳು ಹೇಳಿವೆ.