ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರವಾಗಿ ಪದಾರ್ಪಣೆ ಮಾಡಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮೊದಲ ಪಂದ್ಯದಲ್ಲಿಯೇ ಅಮೋಘ ಶತಕ ಸಿಡಿಸಿ ಅಬ್ಬರಿಸುವ ಮೂಲಕ ಗಮನಸೆಳೆದಿದ್ದಾರೆ. ಎರಡನೇ ಪಂದ್ಯದಲ್ಲಿಯೂ ಜೈಸ್ವಾಲ್ ಉತ್ತಮ ಆಟ ಪ್ರದರ್ಶಿಸಿದ್ದು ಒಂದು ಅರ್ಧ ಶತಕ ಸಿಡಿಸಿದ್ದರು. ಈ ಎರಡು ಪಂದ್ಯಗಳಲ್ಲಿ ಯುವ ಆಟಗಾರನ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಕ್ರಿಕೆಟ್ ಲೋಕದ ಹಲವು ದಿಗ್ಗಜರು ಯಶಸ್ವಿ ಜೈಸ್ವಾಲ್ ಅವರ ಆಟಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ದೀಪ್ ದಾಸ್ಗುಪ್ತ ಕೂಡ ಜೈಸ್ವಾಲ್ ಆಟವನ್ನು ಕೊಂಡಾಡಿದ್ದು ಟೆಸ್ಟ್ ಮಾದರಿಯಲ್ಲಿ ಅವರು ಬಹಳ ಆರಾಮದಾಯಕವಾಗಿ ಗೋಚರಿಸುತ್ತಾರೆ ಎಂದಿದ್ದಾರೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದೀರ್ಘ ಮಾದರಿಯಲ್ಇ ಆಡಲು ಆತ ಸರ್ವರೀತಿಯಲ್ಲೂ ಸಿದ್ಧವಾಗಿದ್ದಾರೆ ಎಂದಿದ್ದಾರೆ ದೀಪ್ದಾಸ್ ಗುಪ್ತ.

"ಆತನ ಪ್ರದರ್ಶನ ಬಹಳಷ್ಟು ಸಕಾರಾತ್ಮಕವಾಗಿತ್ತು. ಆತ ಬ್ಯಾಟಿಂಗ್ ಮಾಡಿದ ರೀತಿಯನ್ನು ನೋಡಿದಾಗ ಬಹಳ ಆರಾಮದಾಯಕವಾಗಿ ಕಾಣಿಸಿದ್ದ. ಆದರೆ ಮುಂದುವರಿದಂತೆ ಈ ಮಾದರಿಯಲ್ಲಿ ಆತ ಬಹಳಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮುಂದಿನ ಟೆಸ್ಟ್ ಸರಣಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದ್ದು ಅದು ಬಹಳಷ್ಟು ಕಠಿಣವಾಗಿರಲಿದೆ. ಆದರೆ ಇಲ್ಲಿಯವರೆಗೆ ನಾವು ನೋಡಿರುವುದರಲ್ಲಿ ಆತ ಬಹಳಷ್ಟು ಆರಾಮದಾಯಕವಾಗಿ ಆಡುವ ಸಾಮರ್ಥ್ಯ ಪ್ರದರ್ಶಿಸಿದ್ದಾರೆ" ಎಂದಿದ್ದಾರೆ ದೀಪ್ ದಾಸ್ಗುಪ್ತ.
"ಇದು ಆತನ ಮೊದಲ ಸರಣಿ. ಮುಂದೆ ಆಡುತ್ತಾ ಹೋದಂತೆ ಆತ ಇನ್ನಷ್ಟು ಬಳಗಲಿದ್ದಾನೆ. ಈ ಸರಣಿಯಲ್ಲಿ ಆತ ಬಹಳ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ" ಎಂದು ದೀಪ್ದಾಸ್ ಗುಪ್ತ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜೈಸ್ವಾಲ್ ಡೊಮೆನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣಾ ಪಂದ್ಯದಲ್ಲಿಯೇ 171 ರನ್ಗಳನ್ನು ಬಾರಿಸಿದ್ದರೆ. ಇನ್ನು ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿಯೂ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.
ಇನ್ನು ಮತ್ತೋರ್ವ ಯುವ ಆಟಗಾರ ಇಶಾನ್ ಕಿಶನ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ದೀಪ್ ದಾಸ್ಗುಪ್ತ. ಇಶಾನ್ ಕಿಶನ್ ಅವರಂತಾ ಆಟಗಾರ ಮಧ್ಯಮ ಕ್ರಮಾಂಕದಲ್ಲಿಭಾರತ ತಂಡಕ್ಕೆ ಅಗತ್ಯವಾಗಿದ್ದಾರೆ ಎಂದಿದ್ದಾರೆ. ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಇಶಾನ್ 34 ಎಸೆತಗಳನ್ನು ಎದುರಿಸಿದ್ದು 52 ರನ್ ಬಾರಿಸಿ ಅಬ್ಬರಿಸಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನ ಸಂಪೂರ್ಣವಾಗಿ ಮಳೆಗೆ ಆಹುತಿಯಾಯಿತು. ಹೀಗಾಗಿ ಟೀಮ್ ಇಂಡಿಯಾ ವಿಂಡೀಸ್ ವಿರುದ್ಧ ವೈಟ್ವಾಶ್ ಮಾಡುವ ಅವಕಾಶ ಕಳೆದುಕೊಂಡಿದೆ. ಹಾಗಿದ್ದರೂ ಟೀಮ್ ಇಂಡಿಯಾ ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.