ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಅಂತರದ ಸೋಲು ಅನುಭವಿಸಿದೆ. ವಿಶ್ವಕಪ್ ಟೂರ್ನಿ ಸನಿಹದಲ್ಲಿರುವ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಈ ಸೋಲು ಎಚ್ಚರಿಕೆ ನೀಡುವಂತಿದೆ. ಇನ್ನು ಈ ಪಂದ್ಯದಲ್ಲಿ ತಂಡದ ಪ್ರಮುಖ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಡುವ ಬಳಗದಿಂದ ಹೊರಗುಳಿದಿದ್ದು ಕೂಡ ತಂಡಕ್ಕೆ ಹಿನ್ನಡೆಯುಂಟು ಮಾಡಿತ್ತು.
ತಂಡದ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನಿಡುವ ನಿರ್ಧಾರದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಹೀಗಾಗಿ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಈ ಪಂದ್ಯದಲ್ಲಿ ಅನುಭವಿ ಆಟಗಾರರಿಬ್ಬರು ಯಾವ ಕಾರಣದಿಂದಾಗಿ ಆಡುವ ಬಳಗದಿಂದ ಹೊರಗುಳಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ರಾಹುಲ್ ದ್ರಾವಿಡ್ ಈ ಪಂದ್ಯದಲ್ಲಿನ ಆಯ್ಕೆಯ ಹಿಂದಿನ ಲೆಕ್ಕಾಚಾರಗಳನ್ನು ಹಂಚಿಕೊಂಡಿದ್ದಾರೆ. ಏಷ್ಯಾ ಕಪ್ ಹಾಘೂ ವಿಶ್ವಕಪ್ ಟೂರ್ನಿಬಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಂತಾ ಆಟಗಾರರ ಸಾಮರ್ಥ್ಯವನ್ನು ಕಂಡುಕೊಳ್ಳಲು ಇದು ಅನಿವಾರ್ಯವಾಗಿತ್ತು ಎಂದಿದ್ದಾರೆ.
"ನಮ್ಮ ಕೆಲ ಆಟಗಾರರನ್ನು ಪ್ರಯೋಗಕ್ಕೆ ಇಳಿಸಲು ಇದು ನಮಗೆ ಕೊನೆಯ ಅವಕಾಶ. ಗಾಯಗೊಂಡಿರುವ ಕೆಲ ಆಟಗಾರರು ಎನ್ಸಿಎನಲ್ಲಿದ್ದು ಅವರು ನಮಗೆ ಲಭ್ಯವಾಗಲಿದ್ದಾರೆ. ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಒಂದು ತಿಂಗಳು ಮಾತ್ರವೇ ಇರುವ ಕಾರಣ ನಮಗೆ ಹೆಚ್ಚು ಸಮಯಾವಕಾಶವಿಲ್ಲ. ಏಷ್ಯ ಕಪ್ ವೇಳೆಗೆ ಗಾಯಗೊಂಡಿರುವ ನಮ್ಮ ಕೆಲ ಆಟಗಾರರು ಫಿಟ್ ಆಗುವ ನಿರೀಕ್ಷೆಯಿದೆ. ಆದರೆ ನಾವು ಈ ಅವಕಾಶವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ"
"ಹಾಗಾಗಿ ನಾವು ಬೇರೆ ಆಟಗಾರರನ್ನು ಕೂಡ ಪರೀಕ್ಷಿಸಿಕೊಳ್ಳಬೇಕಾಗಿದ್ದು ಒಂದು ವೇಳೆ ಗಾಯಗೊಂಡಿರುವ ಆಟಗಾರರಿ ನಿರೀಕ್ಷಿತ ಸಮಯದಲ್ಲಿ ಲಭ್ಯವಾಗದಿದ್ದಲ್ಲಿ ಅದನ್ನು ಕೂಡ ಎದುರಿಸಲು ಸಜ್ಜಾಗಿರಬೇಕು. ಹಾಗಾಗಿ ಅವರಿಗು ಕೂಡ ಆಡುವ ಸಮಯವನ್ನು ನೀಡಬೇಕಾಗಿದೆ. ಇದರಿಂದಾಗಿ ಆಟಗಾರರ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿದೆ" ಎಂದಿದ್ದಾರೆ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್.
"ಎರಡು ಅಥವಾ ಮೂರು ಪಂದ್ಯಗಳು ಇರುವ ಈ ರೀತಿಯ ಸರಣಿಗಳಲ್ಲಿ ರೋಹಿತ್, ಕೊಹ್ಲಿಯಂತಾ ಆಟಗಾರರು ಆಡಿದರೆ ನಮಗೆ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ದೊರೆಯುವುದಿಲ್ಲ. ಗಾಯಗೊಂಡಿರುವ ಆಟಗಾರರು ಎನ್ಸಿಎನಲ್ಲಿದ್ದು ಕೆಲವರ ಬಗ್ಗೆ ಅನಿಶ್ಚಿತತೆಗಳು ಇದೆ. ಹೀಗಾಗಿ ಇತರ ಕೆಲ ಹುಡುಗರಿಗೆ ಅವಕಾಶವನ್ನು ನೀಡಲು ಬಯಸಿದ್ದೇವೆ. ಹಾಗಾಗಿ ಅಗತ್ಯವಿದ್ದರೆ ಅವರು ಆಡಬಹುದು" ಎಂದು ರಾಹುಲ್ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯದಲ್ಲಿಯೂ ಯುವ ಆಟಗಾರ ಇಶಾನ್ ಕಿಶನ್ ಆರೆಂಭಿಕನಾಗಿ ಕಣಕ್ಕಿಳಿದು ಅರ್ಧ ಶತಕದ ಕೊಡುಗೆ ನೀಡಿ ಗಮನಸೆಳೆದಿದ್ದಾರೆ. ಸಂಜು ಸ್ಯಾಮ್ಸನ್ ಎರಡನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಕೂಚೆಲ್ಲಿದ್ದರೆ ಸೂರ್ಯಕುಮಾರ್ ಯಾದವ್ ಅವರಿಂದಲೂ ಎರಡು ಪಂದ್ಯಗಳಲ್ಲಿಯೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.